ಚುನಾವಣೆ ವೇಳೆ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ
ಮಂಡ್ಯ,ಜು.5: ಜೆಡಿಎಸ್ನ 1.25 ಲಕ್ಷ ಮತದಾರರು ನನಗೆ ಮತ ನೀಡಿ ಗೆಲ್ಲಿಸಿದ್ದು, ಅವರ ಅದೇಶದಂತೆ 5 ವರ್ಷಗಳ ಕಾಲ ಜೆಡಿಎಸ್ ಶಾಸಕನಾಗಿರುತ್ತೇನೆ. ಮುಂಬರುವ ವಿಧಾನ ಸಭಾ ಚುನಾವಣೆ ವೇಳೆ ಮತದಾರರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ಕಾಲೋನಿಯ ಬಳಿ 5.2 ಕೋಟಿ ರು.ಗಳ ವೆಚ್ಚದಲ್ಲಿ ನಗುವನಹಳ್ಳಿ ಗ್ರಾಮದಿಂದ ಮೈಸೂರು ರಿಂಗ್ ರಸ್ತೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯರವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ಮತದಾರರ ನಿರ್ಧಾರಕ್ಕೆ ಬದ್ಧ
ಕಳೆದ 3ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿಲ್ಲ, ಆದರೂ ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೇನೆ. ಕಳೆದ ಬಾರಿಯಂತೆ ಮತದಾರರು ಯಾರ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ. ಇತ್ತೀಚೆಗೆ ಕಾಂಗ್ರೆಸ್ನ ಸಿದ್ದರಾಮಯ್ಯ ಅವರ ಜೊತೆ ಚೆನ್ನಾಗಿರುವುದರಿಂದ ಕಾಂಗ್ರೆಸ್ಗೆ ಅಂತಲು, ಬಿಜೆಪಿ ಪಕ್ಷದವರು ನನ್ನೊಂದಿಗೆ ಸಂಪರ್ಕದಲ್ಲಿರುವುದರಿಂದ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ, ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತಹಾಕಿರುವುದರಿಂದ ಇಲ್ಲಿ ಉಳಿದುಕೊಳ್ಳುತ್ತಾರೆ ಎನ್ನುತ್ತಾರೆ. ಆದರೆ ಮತದಾರರೆ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು.

ವಿವಾದಾದ್ಮಕ ಹೇಳಿಕೆ ಮನುಷ್ಯ ಕುಲಕ್ಕೆ ತರವಲ್ಲ
ಮಾಜಿ ಪ್ರಧಾನಮಂತ್ರಿ ದೇವೇಗೌಡರ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ ನೀಡಿರುವ ವಿವಾದಾದ್ಮಕ ಹೇಳಿಕೆ ಮನುಷ್ಯ ಕುಲಕ್ಕೆ ತರವಲ್ಲ. ದೇವೇಗೌಡರು 90ರ ಆಸು-ಪಾಸಿನಲ್ಲಿದ್ದರೂ ಇಂದಿಗೂ ಅವರು ರಾಷ್ಟ್ರ ಸೇವೆ ಹಾಗೂ ರಾಜ್ಯ ಸೇವೆಗಾಗಿ ಹಂಬಲಿಸುತ್ತಾರೆ. ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರೆ ಪ್ರಮುಖರೆಲ್ಲರೂ ದೇವೇಗೌಡರಿಗೆ ಗೌರವ ನೀಡುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಗೆ ರಾಜಣ್ಣ ಅಗೌರವ ತೋರಿರುವುದು ತರವಲ್ಲ ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಶಾಸಕ ಜಿಟಿಡಿ ಆಗ್ರಹಿಸಿದರು.

ದೇವೇಗೌಡರ ವಿರುದ್ಧ ಮಾತನಾಡುವ ಯೋಗ್ಯತೆ ರಾಜಣ್ಣನಿಗೆ ಇಲ್ಲ: ರವೀಂದ್ರ ಶ್ರೀಕಂಠಯ್ಯ
ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ರೈತರು ಮತ್ತು ನಾಡಿನ ಅಭ್ಯುದಯಕ್ಕಾಗಿ ಜೀವನ ಪೂರ್ತಿ ಹೋರಾಡುತ್ತಲೇ ಬಂದಿರುವ ದೇವೇಗೌಡರ ವಿರುದ್ಧ ಮಾತನಾಡುವ ಯೋಗ್ಯತೆ ರಾಜಣ್ಣರವರಿಗೆ ಇಲ್ಲ. ಈ ಹೇಳಿಕೆ ಅವರ ಉದ್ದಟತನವನ್ನು ತೋರುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಹಾಗೂ ಒಕ್ಕಲಿಗ ಸಮುದಾಯ ಅವರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.

ಗುದ್ದಲಿ ಪೂಜೆ ವೇಳೆ ಶಾಸಕ ಜಿ.ಟಿ. ದೇವೇಗೌಡ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಶಾಸಕ ರವೀಂದ್ರ ಶ್ರೀಕಂಠಯ್ಯ ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ತಂಗುದಾಣ ಹಾಗೂ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











Click it and Unblock the Notifications