ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡರಿಗೊಂದು ಸವಾಲು
ಮಂಡ್ಯ, ಏಪ್ರಿಲ್ 11: ಕೊನೆಗೂ ಅಂದುಕೊಂಡಂತೆಯೇ ಆಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ಅಶೋಕ್ ಅವರು ಮಂಡ್ಯದ ವಿಚಾರದಲ್ಲಿ ತಟಸ್ಥ ಧೋರಣೆ ತಾಳುತ್ತಾ ಜಿಲ್ಲೆಯ ಜವಾಬ್ದಾರಿಯನ್ನು ಸಚಿವ ನಾರಾಯಣಗೌಡ ಅವರ ಹೆಗಲಿಗೆ ವಹಿಸಿದ್ದೇನೆ ಎಂಬ ನಡೆಯನ್ನು ತೋರಿಸಿದ್ದರು.
Recommended Video
ಜಿಲ್ಲೆಯ ಜನರು ಈ ವೇಳೆ ಮುಂದೆ ಸಚಿವ ನಾರಾಯಣ ಗೌಡರೇ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಮಾತನಾಡಿಕೊಂಡಿದ್ದರು. ಅದೆಲ್ಲವೂ ನಿಜವಾಗಿದೆ. ನಾಮಕಾವಸ್ಥೆಗೆ ಎಂಬಂತಿದ್ದ ಆರ್.ಅಶೋಕ್ ಅವರು ಇನ್ಮುಂದೆ ಮಂಡ್ಯದತ್ತ ಗಮನಹರಿಸುತ್ತಿಲ್ಲ ಎಂಬ ಆರೋಪದಿಂದ ಮುಕ್ತರಾಗಿದ್ದಾರೆ. ಅಲ್ಲದೆ ಜಿಲ್ಲೆಯ ಸಂಪೂರ್ಣ ಜವಾಬ್ದಾರಿ ಸಚಿವ ನಾರಾಯಣಗೌಡರ ಹೆಗಲಿಗೇರಿದೆ.

ಕೆ.ಸಿ.ನಾರಾಯಣಗೌಡರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ
ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾಗಿರುವ ಅಶೋಕ್ ಎಲ್ಲಿದ್ದಾರೆ ಎಂದು ಜನ ಕೇಳತೊಡಗಿದ್ದರು. ಇದೀಗ ಕೊರೊನಾವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು, ಈ ಪೈಕಿ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಇದನ್ನು ನಿಭಾಯಿಸುವುದು ಸವಾಲಾಗಿದೆ.

ಸಭೆ ನಡೆಸಿದ್ದ ಆರ್ ಅಶೋಕ್
ಇದುವರೆಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಜೊತೆ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಸಚಿವ ಆರ್.ಅಶೋಕ್ ಅವರು ಬುಧವಾರವಷ್ಟೇ ಜಿಲ್ಲೆಗೆ ಆಗಮಿಸಿ ಒಂದಷ್ಟು ಸಭೆಗಳಲ್ಲಿ ಭಾಗವಹಿಸಿದ್ದರು. ಮೂರು ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕರು, ಅಧಿಕಾರಿಗಳ ಜೊತೆ ಸಭೆ ನಡೆಸಿ ಹೋಗಿದ್ದರು. ಇದಾದ ಎರಡೇ ದಿನಗಳಲ್ಲಿ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆಯನ್ನು ಹೊಂದಿರುವ ಸಚಿವ ಕೆ.ಸಿ.ನಾರಾಯಣಗೌಡರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಿರುವುದು ಅವರ ಅಭಿಮಾನಿಗಳಿಗೆ ಹರ್ಷವನ್ನುಂಟು ಮಾಡಿದೆ. ಜತೆಗೆ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಿ ಮುಂದೆ ಬಿಜೆಪಿ ಭದ್ರ ನೆಲೆಯೂರುವಂತೆ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ.

ಮೊದಲಿನಿಂದಲೂ ಮಂಡ್ಯ ಉಸ್ತುವಾರಿಯತ್ತ ನಾರಾಯಣಗೌಡರ ಕಣ್ಣು
ಜೆಡಿಎಸ್ ಭದ್ರಕೋಟೆಯೊಳಗೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ದಾಖಲೆ ಬರೆದ ಕೆ.ಸಿ.ನಾರಾಯಣಗೌಡರು ಮೊದಲಿನಿಂದಲೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದು ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸ ಅವರಲ್ಲಿತ್ತು. ನಿರೀಕ್ಷೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ಕೆ.ಸಿ.ನಾರಾಯಣಗೌಡರಿಗೆ ನೀಡಿದ್ದಾರೆ. ಸಂಕಷ್ಟದ ಕಾಲದಲ್ಲಿ ಅವರಿಗೆ ಉಸ್ತುವಾರಿ ನೀಡಲಾಗಿದ್ದು, ಇದೀಗ ಜವಾವಬ್ದಾರಿಯನ್ನು ಹೊತ್ತು ಖುಷಿ ಪಡುವ ಸಮಯವೂ ಅವರದಲ್ಲ. ಅದೊಂದು ಸವಾಲು ಹೌದು.

ಮಂಡ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಪ್ರಕರಣ
ಮಂಡ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಭೀತಿಯನ್ನುಂಟು ಮಾಡಿದೆ. ಹೀಗಿರುವಾಗ ಅದನ್ನು ತಡೆಗಟ್ಟುವ ಮೂಲಕ ಮತ್ತು ಜನರಲ್ಲಿ ಧೈರ್ಯ ತುಂಬುವುದು, ಸಂಕಷ್ಟವನ್ನು ಬಗೆಹರಿಸುವುದೇ ಈಗ ಮುಖ್ಯವಾಗಿದ್ದು, ಅದೆಲ್ಲವನ್ನು ಹೇಗೆ ನಾರಾಯಣ ಗೌಡರು ನಿಭಾಯಿಸುತ್ತಾರೆ ಎಂಬುದು ಕೂಡ ಈಗ ಪ್ರಶ್ನೆಯಾಗಿ ಉಳಿದಿದೆ.
ಈಗ ಅವರ ಮುಂದೆ ಇರುವುದು ಸೋಂಕು ಹರಡದಂತೆ ನಿಯಂತ್ರಿಸುವುದು, ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವುದು, ತರಕಾರಿ, ಹಣ್ಣು, ರೇಷ್ಮೆ ಸೇರಿದಂತೆ ಕೃಷಿ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ತೊಡಕಾಗದಂತೆ ಕಾರ್ಯ ಯೋಜನೆಗಳನ್ನು ಹೇಗೆ ರೂಪಿಸುತ್ತಾರೆ ಎಂಬುದಾಗಿದೆ. ಹಿಂದೆ ಉಸ್ತುವಾರಿ ಸಚಿವರಾಗಿದ್ದ ಅಶೋಕ್ ಅವರು ಜಿಲ್ಲೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪವನ್ನು ನಾರಾಯಣ ಗೌಡರು ತೊಡೆದು ಹಾಕಬೇಕಾಗಿದೆ. ಆ ಮೂಲಕ ತಾವೇನು ಎಂಬುದನ್ನು ತೋರಿಸಿ ಕೊಡಬೇಕಾಗಿದೆ.












Click it and Unblock the Notifications