ಕೆ. ಆರ್. ಪೇಟೆ ಉಪ ಚುನಾವಣೆ ಬಗ್ಗೆ ನಾರಾಯಣ ಗೌಡ ಹೇಳಿದ್ದೇನು?
ಮಂಡ್ಯ, ಆಗಸ್ಟ್ 04 : "ಕೆ.ಆರ್.ಪೇಟೆಯಲ್ಲಿ ಯಾರನ್ನು ಬೇಕಾದರೂ ಅಭ್ಯರ್ಥಿಯಾಗಿ ನಿಲ್ಲಿಸಲಿ. ಅವರು ತುಂಬಾ ದೊಡ್ಡವರು. ಅಭ್ಯರ್ಥಿ ಹಾಕುವ ಬಗ್ಗೆ ನಾನು ಏನೂ ಮಾತನಾಡಲ್ಲ" ಎಂದು ನಾರಾಯಣ ಗೌಡ ಹೇಳಿದರು.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ನಾರಾಯಣ ಗೌಡ ಮಾಧ್ಯಮಗಳ ಜೊತೆ ಮಾತನಾಡಿ, "ರಮೇಶ್ ಜಾರಕಿಹೊಳಿ ನಾವು ಸ್ನೇಹಿತರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಬಿಜೆಪಿ ಸೇರುವಂತೆ ನಮಗೆ ಎಲ್ಲೂ ಆಫರ್ ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಪದವಿಗಾಗಿ, ಹಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಕ್ಷೇತ್ರದಲ್ಲಿ ನಮಗೆ ತುಂಬಾ ನೋವಿತ್ತು, ಒಬ್ಬ ಶಾಸಕನಾಗಿ ಕೆಲಸ ಮಾಡುವುದಕ್ಕೆ ಬಿಡಲಿಲ್ಲ. ನಮಗೆ ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿದೆ. ನಮ್ಮ ಪರವಾದ ತೀರ್ಪು ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಕಲಾಪ ಆರಂಭವಾಗುವುದಕ್ಕೂ ಮೊದಲು ನಾವು ರಾಜೀನಾಮೆ ನೀಡಿದ್ದೆವು. ಆದರೆ, ಸ್ಪೀಕರ್ ತೀರ್ಮಾನ ತುಂಬ ನೋವು ತಂದಿದೆ. ನಾವು ಯಾವ ಪಕ್ಷಕ್ಕೆ ಹೋಗಬೇಕು ಎಂದು ತೀರ್ಮಾನಿಸಿಲ್ಲ. ನಮ್ಮ ಕಾರ್ಯಕರ್ತರನ್ನು ಮೊದಲು ಭೇಟಿ ಮಾಡಬೇಕು" ಎಂದು ಹೇಳಿದರು.
"ಕಾರ್ಯಕರ್ತರ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ. ಕ್ಷೇತ್ರದಲ್ಲಿರುವ ಕೆಲವರ ಮಾತು ಕೇಳಿ ಹೀಗೆ ಮಾಡಿದ್ದಾರೆ. ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ. ನಾನು ಒಬ್ಬ ಶಾಸಕ ಹೋದರೆ ಕನಿಷ್ಟ ಒಂದು ಟೀ ಕೊಡಲ್ಲ" ಎಂದು ದೂರಿದರು.
"ಕೆ.ಆರ್.ಪೇಟೆಯಲ್ಲಿ ಯಾರನ್ನು ಬೇಕಾದರೂ ನಿಲ್ಲಿಸಲಿ. ಅವರು ತುಂಬಾ ದೊಡ್ಡವರು. ನಾನೊಬ್ಬ ಒಕ್ಕಲಿಗ. ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಕ್ಕಲಿಗ ಸಮುದಾಯಕ್ಕೆ ಅಲ್ಲೊಂದು ಶಕ್ತಿ ತಂದಿದ್ದೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ" ಎಂದು ಆರೋಪಿಸಿದರು.












Click it and Unblock the Notifications