ನಾಗಮಂಗಲದಲ್ಲಿ ಜೆಡೆಎಸ್-ಕಾಂಗ್ರೆಸ್ ನಡುವೆ ಜಿದ್ದಾ-ಜಿದ್ದಿನ ಸ್ಪರ್ಧೆ
ನಾಗಮಂಗಲ, ಮೇ 10: ಈ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರ ಎಲ್ಲರ ಗಮನಸೆಳೆಯಲು ಮುಖ್ಯ ಕಾರಣ ಈ ಹಿಂದೆ ಜೆಡಿಎಸ್ನಿಂದ ಗೆದ್ದು ಇದೀಗ ಕಾಂಗ್ರೆಸ್ ಪಾಳಯದಲ್ಲಿರುವ ಎನ್.ಚೆಲುವರಾಯಸ್ವಾಮಿ.
ಆದರೆ ಇಲ್ಲೊಂದು ಕೌತುಕ ನಡೆದಿದೆ. ಕಳೆದ ಬಾರಿ ಎನ್.ಚಲುವರಾಯಸ್ವಾಮಿ ಜೆಡಿಎಸ್ನಲ್ಲಿದ್ದರು. ಈಗ ಕಾಂಗ್ರೆಸ್ನಲ್ಲಿದ್ದಾರೆ. ಈ ಬಾರಿ ಜೆಡಿಎಸ್ನಿಂದ ಸ್ಪರ್ಧಿಸುವ ಕೆ.ಸುರೇಶ್ಗೌಡ ಕಳೆದ ಬಾರಿ ಕಾಂಗ್ರೆಸ್ನಲ್ಲಿದ್ದವು. ಕಳೆದ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ ಅವರು ಗೆದ್ದು ಸುರೇಶಗೌಡರು ಸೋಲು ಕಂಡಿದ್ದರು.
ಮಂಡ್ಯದಲ್ಲಿ ಜೆಡಿಎಸ್ ಗೆಲುವಿಗೆ ಟೊಂಕಕಟ್ಟಿ ನಿಂತ ಡಾ. ಲಕ್ಷ್ಮೀ ಅಶ್ವಿನ್ ಗೌಡ
ಯಾವಾಗ ಚೆಲುವರಾಯಸ್ವಾಮಿ ಬಂಡಾಯ ಎದ್ದು ಕಾಂಗ್ರೆಸ್ ಸೇರಿದರೋ ಕಾಂಗ್ರೆಸ್ನಲ್ಲಿದ್ದ ಸುರೇಶ್ಗೌಡರಿಗೆ ಇನ್ನು ಉಳಿಗಾಲವಿಲ್ಲ ಎಂದು ತಿಳಿದು ಜೆಡಿಎಸ್ನತ್ತ ಮುಖ ಮಾಡಿದರು. ಈಗ ಇಬ್ಬರೂ ರಾಜಕೀಯ ಎದುರಾಳಿಗಳಾಗಿ ಸ್ಪರ್ಧಿಗಳಾಗಿದ್ದಾರೆ.
ಜೆಡಿಎಸ್ನಿಂದ ಹೊರ ಹೋದ ಚೆಲುವರಾಯಸ್ವಾಮಿ ಅವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿ ಪಣತೊಟ್ಟಂತೆ ಕಂಡು ಬರುತ್ತಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಚುನಾವಣಾ ಪೈಪೋಟಿ ತುಸು ಹೆಚ್ಚು ಎಂಬಂತೆ ಕಾಣುತ್ತಿದೆ.
ದರ್ಶನ್ ಪುಟ್ಟಣ್ಣಯ್ಯ ಪರ ತಮಿಳುನಾಡಿನ ರೈತರ ಪ್ರಚಾರ
ಜೆಡಿಎಸ್ ನಾಯಕರ ವಿರುದ್ಧವೇ ಎನ್.ಚೆಲುವರಾಯಸ್ವಾಮಿ ಅವರು ಟೀಕಾಪ್ರಹಾರ ಮಾಡುತ್ತಿದ್ದು, ಅವರನ್ನು ಹೆಡೆಮುರಿಕಟ್ಟಲು ಎಚ್.ಡಿ.ದೇವೇಗೌಡರ ಸಾರಥ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್ಗೌಡರ ಜತೆಗೆ ಐಆರ್ಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ಡಾ. ಲಕ್ಷ್ಮೀ ಅಶ್ವಿನ್ಗೌಡ, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ ಮೊದಲಾದವರು ಟೊಂಕ ಕಟ್ಟಿ ನಿಂತಿದ್ದಾರೆ.
ಪಾಂಡವಪುರದಲ್ಲಿ ಜೆಡಿಎಸ್ ಪ್ರಚಾರಕ್ಕೆ ರೈತಸಂಘದಿಂದ ತಡೆ
ಬಂಡಾಯ ಶಾಸಕರನ್ನೇ ಟಾರ್ಗೆಟ್ ಮಾಡಿರುವ ದೇವೇಗೌಡರು ಮತ್ತು ತಂಡ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಿಸಲು ಹೋರಾಡುತ್ತಿದ್ದು ಬಂಡಾಯ ಶಾಸಕರನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಲು ಬಿಡಬಾರದೆಂಬ ತೀರ್ಮಾನಕ್ಕೆ ಬಂದಂತೆ ಕಂಡು ಬರುತ್ತಿದೆ.
ಸ್ತ್ರೀ ಶಕ್ತಿ ಸಂಘಗಳು, ಗುತ್ತಿಗೆದಾರರು, ಮುಖಂಡರು ಎಲ್ಲರನ್ನು ತಮ್ಮತ್ತ ಸೆಳೆಯಲು ಏನು ಬೇಕೋ ಅದನ್ನು ಮಾಡಿಯಾಗಿದೆ. ಹೀಗಾಗಿ ಚೆಲುವರಾಯ ಸ್ವಾಮಿ ಅವರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುವುದರಿಂದ ಉಳಿದಂತೆ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಗೌಣವಾಗಿದ್ದಾರೆ. ಒಟ್ಟಾರೆ ಕ್ಷೇತ್ರದಲ್ಲಿ ಏನಾಗುತ್ತದೆ ಎಂಬ ಕುತೂಹಲ ಮಾತ್ರ ಎಲ್ಲರನ್ನು ಕಾಡುತ್ತಲೇ ಇದೆ.