ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆ ಆಗಸ್ಟ್ 8ರಂದು ಪುನಾರಂಭ
ಮಂಡ್ಯ, ಜುಲೈ, 28 : ಮಂಡ್ಯದ ಜನರ ಜೀವನಾಡಿಯಾಗಿದ್ದ ಮೈಶುಗರ್ ಕಾರ್ಖಾನೆಯಲ್ಲಿ 4 ವರ್ಷಗಳಿಂದ ಕಬ್ಬು ಅರೆಯುವಿಕೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದೀಗ ಮಂಡಳಿ ಮತ್ತೆ ಮೈಶುಗರ್ ಆರಂಭ ಮಾಡಲು ಮುಂದಾಗಿದೆ. ಆಗಸ್ಟ್ 8ರಂದು ಬಾಯ್ಲರ್ಗೆ ಬೆಂಕಿ ಹಾಕಲು ನಿರ್ಧರಿಸಿರುವ ಆಡಳಿತ ಆಗಸ್ಟ್ 15ರೊಳಗೆ ಕಬ್ಬು ಅರೆಯುವಿಕೆ ಪ್ರಕ್ರಿಯೆನ್ನು ಅಧಿಕೃತವಾಗಿ ಪ್ರಾರಂಭಿಸಲು ತೀರ್ಮಾನಿಸಿದೆ.
ನಿತ್ಯ 3,500ರಿಂದ 4000 ಟನ್ವರೆಗೆ ಕಬ್ಬು ನುರಿಸುವಂತೆ ಬಿ-ಮಿಲ್ನ್ನು ಸಜ್ಜುಗೊಳಿಸಲಾಗಿದೆ. ಇದುವರೆಗೆ 4 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಇನ್ನಷ್ಟು ಕಬ್ಬು ಸಿಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ಮೈಷುಗರ್ ಕಾರ್ಯಾಚರಣೆ ಆರಂಭಿಸಲು ಇದುವರೆಗೆ 19.6 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಇದರಲ್ಲಿ 2.25 ಕೋಟಿ ರೂಪಾಯಿ ಹಣವನ್ನು ಕಾರ್ಮಿಕರ ವಿಆರ್ಎಸ್ಗೆ, 2.35 ಕೋಟಿ ರೂಪಾಯಿ ಹಣವನ್ನು ಕಬ್ಬು ಕಟಾವು ಮಾಡುವವರನ್ನು ಕರೆತರುವುದಕ್ಕಾಗಿ, ಉಳಿದ 15 ಕೋಟಿ ರೂಪಾಯಿ ಹಣವನ್ನು ಯಂತ್ರೋಪಕರಣಗಳ ದುರಸ್ತಿ ಕಾರ್ಯಕ್ಕೆ ಖರ್ಚು ಮಾಡಲಾಗಿದೆ. ಕಾರ್ಖಾನೆ ಆರಂಭಕ್ಕೆ ಇನ್ನೂ 10 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಯಾವೆಲ್ಲ ಕ್ಷೇತ್ರಗಳಲ್ಲಿ ದುರಸ್ತಿ?
ಪುಣೆಯ ಆರ್.ಬಿ. ಟೆಕ್ನೋಕ್ರೇಟ್ಸ್ ಅಂಡ್ ರೀ-ಕ್ಲೈಮರ್ಸ್ ಲಿಮಿಟೆಡ್ನವರು ಮೈಷುಗರ್ನ ಸಕ್ಕರೆ ಘಟಕ ಮಿಲ್ ವಿಭಾಗ, ಸಂಸ್ಕರಣಾ ವಿಭಾಗ, ವಿದ್ಯುತ್ ಘಟಕದ ಬಾಯ್ಲರ್ ಈ ಮೂರು ವಿಭಾಗಗಳಿಗೆ 13.92 ಕೋಟಿ ರೂಪಾಯಿಯಲ್ಲಿ ದುರಸ್ತಿ ಮಾಡಲಾಗಿದೆ. ಹಾಗೂ ಹೈದರಾಬಾದ್ನ ಎಸ್ಎನ್ಆರ್ ಪವರ್ಟೆಕ್ ಸರ್ವಿಸ್ನವರು ವಿದ್ಯುತ್ ಘಟಕದ ಟರ್ಬೈನ್, ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಪ್ರಸರಣ ಕಾರ್ಯಕ್ಕೆ 2.80 ಕೋಟಿ ರೂಪಾಯಿಗಳಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹಣ ಎಷ್ಟು?
ಸುಮಾರು 300 ಮಂದಿ ಕೆಲಸಗಾರರು 2 ತಿಂಗಳುಗಳ ಕಾಲ ಯಂತ್ರೋಪಕರಗಣಗಳ ದುರಸ್ತಿ ಮಾಡಿದ್ದಾರೆ. ಈಗಾಗಲೇ ಓವರ್ ಹಾಯಿಲಿಂಗ್ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಹಂತದಲ್ಲಿ 3.75 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದ ರಾಜ್ಯ ಸರ್ಕಾರ ನಂತರದಲ್ಲಿ 11.25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನಿಗದಿತ ಸಮಯಕ್ಕೆ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ವೆಚ್ಚ ತಗುಲುತ್ತಿದೆ. ಆದ್ದರಿಂದ ಜುಲೈ 28ರಂದು ಬೆಂಗಳೂರಿನಲ್ಲಿ ನಡೆದ ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಪಾಟೀಲ್ ತಿಳಿಸಿದರು.

'ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಬೇಡಿ'
ಮೈಷುಗರ್ ಕಾರ್ಯಾಚರಣೆಗೊಳಿಸಿದ್ದ ಸಮಯದಲ್ಲಿ ಅಲ್ಲಿನ ವ್ಯಾಪ್ತಿಯ ಕಬ್ಬನ್ನು ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೂ ಹಂಚಿಕೆ ಮಾಡಲಾಗಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಟನ್ ಕಬ್ಬು ಇದ್ದರೂ ಇದುವರೆಗೂ ಲಕ್ಷ ಟನ್ ಕಬ್ಬು ಮಾತ್ರ ಒಪ್ಪಂದ ಮಾಡಿಕೊಂಡು ಕಾರ್ಖಾನೆಗೆ ತರುವಂತೆ ತಿಳಿಸಲಾಗಿದೆ. ಉಳಿದ ಕಬ್ಬನ್ನು ರೈತರು ತಮಗಿಷ್ಟ ಬಂದ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮೈಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆಗೆ ಸಿದ್ಧಗೊಂಡಿರುವುದರಿಂದ ರಾಜ್ಯ ಸರ್ಕಾರ ಖಾಸಗಿ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಲು ಮುಂದಾಗಬೇಕಿದೆ. ರೈತರು ಮೈಷುಗರ್ಗೆ ಕಬ್ಬು ಪೂರೈಕೆ ಮಾಡುವಂತೆ ಹೊಸ ಆದೇಶ ಹೊರಡಿಸಬೇಕಿದೆ ಎಂದು ಮೈಷುಗರ್ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಹೊರೆ ಕಡಿಮೆಗೊಳಿಸಲು ನಿರ್ಧಾರ
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಬಂಡವಾಳವಾಗಿ 105 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕಾರ್ಖಾನೆಯೊಳಗೆ ಬಗ್ಗಾಸ್ ಹಾಗೂ ಬೆಲ್ಟ್ ಕನ್ವೇಯರ್, ಸ್ವಾಕರ್ ಖರೀದಿ, ಮುಖ್ಯ ಯಂತ್ರೋಪಕರಣದ ಕಟ್ಟಡ ಮತ್ತು ಗೋದಾಮು ಮೇಲ್ಛಾವಣಿ ಶೀಟುಗಳ ಬದಲಾವಣೆ ಕೆಲಸಗಳಿಗೆ ಟೆಂಡರ್ ಕರೆಯುವ ಅವಶ್ಯಕತೆ ಇದೆ ಎಂದು ತಿಳಿದುಬಂದಿದೆ. ಈಗಾಗಲೇ ದುರಸ್ತಿಗೊಂಡಿರುವ ಮಿಲ್, ಬಾಯ್ಲರ್ ಸೇರಿದಂತೆ ಇತರೆ ವಿಭಾಗಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ತೊಂದರೆಗಳು ಕಂಡುಬಂದಿಲ್ಲ. ಬಿ-ಮಿಲ್ ನಿತ್ಯ 4,000 ಟನ್ ಕಬ್ಬು ಅರೆಯುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಮೈಷುಗರ್ ಆರಂಭದ ಜೊತೆಯಲ್ಲೇ ಸಹ ವಿದ್ಯುತ್ ಘಟಕಕ್ಕೂ ಚಾಲನೆ ನೀಡಿ ಕಾರ್ಖಾನೆ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.












Click it and Unblock the Notifications