ಮಂಡ್ಯ: ಭ್ರಷ್ಟಾಚಾರದ ಕೂಪದಲ್ಲೇ ಮುಳುಗಿದ್ದ ಕಾಂಗ್ರೆಸ್, ಅಶ್ವತ್ಥ್ನಾರಾಯಣ ಕಿಡಿ
ಮಂಡ್ಯ, ಅಕ್ಟೋಬರ್, 19: ಭ್ರಷ್ಟಾಚಾರದ ಕೂಪದಲ್ಲೇ ಹುದುಗಿಹೋಗಿರುವ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನೂ ಕಳೆದುಕೊಂಡಿದೆ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ನಡೆಸಿದ ಅಕ್ರಮಗಳ ಬಗ್ಗೆ ತನಿಖೆ ಪ್ರಾರಂಭ ಆಗಿದೆ. ಎಲ್ಲ ಇಲಾಖೆಗಳಲ್ಲೂ ಸಂಬಂಧಿಸಿದ ವ್ಯಕ್ತಿ ಮೇಲೆ ತನಿಖೆ ನಡೆಸಿ ಸತ್ಯವನ್ನು ಬಯಲಿಗೆ ಎಳೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಿಂದ ಕುಟುಂಬ ರಾಜಕೀಯ
"ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಸಿ ಎಂದರೆ ಕಾಂಗ್ರೆಸ್ ಮತ್ತು ಕರಪ್ಶನ್. ಭ್ರಷ್ಟಾಚಾರ, ಕುಟುಂಬ ಆಧಾರಿತ ರಾಜಕಾರಣ ಎಲ್ಲವನ್ನೂ ಮಾಡುತ್ತಿರುವುದು ಕಾಂಗ್ರೆಸ್. ಇದಕ್ಕೆ ಯಾವುದೇ ರೀತಿಯ ಮಾನ್ಯತೆಯೂ ಇಲ್ಲ. ಜನರ ವಿಶ್ವಾಸ ಇಲ್ಲದಂತಹ ಪಕ್ಷ ಇದಾಗಿದೆ. ಇಂತಹ ಪಕ್ಷ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನೂ ಕಳೆದುಕೊಂಡಿದೆ. ಧಮ್ಮು, ತಾಕತ್ತು ಇರುವುದರಿಂದಲೇ ತನಿಖೆಗೆ ನಡೆಸುತ್ತಿರುವುದು. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆ ನಡೆಸುವ ತಾಕತ್ತನ್ನು ವ್ಯಕ್ತಪಡಿಸಿದ್ದಾರೆ. ದುರ್ಬಲತೆ, ಅಸಹಾಯಕತೆ, ಕುಟುಂಬ ಆಧಾರಿತ ರಾಜಕೀಯ ಎಲ್ಲವೂ ಕಾಂಗ್ರೆಸ್ನಲ್ಲೇ ಇದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದೆ
ಬಿಜೆಪಿ ಸರ್ಕಾರಕ್ಕೆ ಸದೃಢತೆ ಇದೆ. ಜನರ ಪಕ್ಷ, ಭಾವನೆಗೆ ಬಿಜೆಪಿ ಪೂರಕವಾಗಿದೆ. ಪ್ರಜಾಪ್ರಭುತ್ವ ಆಧಾರಿತವಾಗಿ ಬೆಳೆದಿರುವ ಪಕ್ಷ ಎಂದರೆ ಅದು ಭಾರತೀಯ ಜನತಾ ಪಾರ್ಟಿ. ಎಂತಹ ಸಣ್ಣ ಪುಟ್ಟ ಜಾತಿಯವರಾಗಿದ್ದರೂ ಕೂಡ ಬಿಜೆಪಿಯಲ್ಲಿ ಯಾವ ಸ್ಥಾನಕ್ಕೆ ಬೇಕಾದರೂ ಹೋಗಬಹುದು. ಆದರೆ ಕಾಂಗ್ರೆಸ್ನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಈಗಾಗಲೇ ಎಲ್ಲೆಡೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡಿದೆ. ಪ್ರತಿ ಪಕ್ಷದ ಸ್ಥಾನವನ್ನೂ ಕಳೆದುಕೊಂಡು ಅಧೋಗತಿಯಲ್ಲಿ ಇದೆ. ಹಾಗೂ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡಲು ಕಾಂಗ್ರೆಸ್ನಲ್ಲಿ ಹುಡುಕಾಟ ನಡೆಯುತ್ತಿತ್ತು ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ಬಿ. ಸೋಮಶೇಖರ್, ಡಾ.ಸಿದ್ದರಾಮಯ್ಯ, ಮಳವಳ್ಳಿ ಮುನಿರಾಜು, ಎನ್. ಶಿವಣ್ಣ, ಎಚ್.ಆರ್.ಅರವಿಂದ್, ಪ.ನಾ. ಸುರೇಶ್, ಮಾಧ್ಯಮ ವಕ್ತಾರ ಸಿ.ಟಿ. ಮಂಜು, ನಾಗಾನಂದ, ಕೇಶವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications