ಕನಗನಮರಡಿ ಬಸ್ ದುರಂತ ಶನಿವಾರ ನಡೆದಿದ್ದರಿಂದ ಅನಾಹುತ ಪ್ರಮಾಣ ಕಡಿಮೆಯಾಯಿತೆ?
ಮಂಡ್ಯ, ನವೆಂಬರ್ 24 : ರಾಜ್ ಕುಮಾರ್ ಹೆಸರಿನ ಆ ಖಾಸಗಿ ಬಸ್ ನಿತ್ಯ ಸಂಚಾರ ಮಾಡುತ್ತಿದ್ದುದೇ ಆ ಮಾರ್ಗದಲ್ಲಿ. ಅದರಲ್ಲೂ ಶನಿವಾರವಾದ್ದರಿಂದ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಮಕ್ಕಳ ಸಂಖ್ಯೆ ಸ್ವಲ್ಪ ಹೆಚ್ಚಿತ್ತು. ಆ ಕಾರಣಕ್ಕೆ ಮೃತರ ಪೈಕಿ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಸಾವು ಭೀಕರವಾದದ್ದು. ಅದರಲ್ಲಿ ದೊಡ್ಡವರು-ಚಿಕ್ಕವರು ಎಂಬ ಭೇದವೇನಿಲ್ಲ.
ಆದರೆ, ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಆದ ಬಸ್ ದುರಂತದಲ್ಲಿ ಸಾವನ್ನಪ್ಪಿದರನ್ನು ನೋಡಿದರೆ ಕರುಳು ಚುರ್ ಎನ್ನುತ್ತದೆ. ಕ್ಷಣ ಕಾಲವೂ ಅಲ್ಲಿ ನಿಲ್ಲಲು ಧೈರ್ಯ ಸಾಲುವುದಿಲ್ಲ. ಇನ್ನು ಊರ ಜನರ ಮಾತುಗಳು ಕೇಳಿದರಂತೂ ಭಯ ಮತ್ತೂ ಹೆಚ್ಚಾಗುತ್ತದೆ. ಏಕೆಂದರೆ, ಅಲ್ಲಿನವರೆಗೆ ಯಾರಿಗೂ ಬಸ್ಸು ಹೊಸದಲ್ಲ, ನಿತ್ಯ ನೋಡುವ ನಾಲೆಯೂ ಹೊಸತಲ್ಲ.
ನಿನ್ನೆ ಇನ್ನೂ ಅದೇ ಬಸ್ಸಿನಲ್ಲಿ ಬಂದಿದ್ದೆ. ಇವತ್ತು ಅದೇ ಬಸ್ಸಿನಲ್ಲಿ ಬರಬೇಕಿತ್ತು. ಆದರೆ ಕೆಲಸ ಬೇಗ ಮುಗಿಯಿತು ಅಂತ ಬೇರೆಯದರಲ್ಲಿ ಬಂದೆ. ಪರಿಚಯಸ್ಥರು ಅಲ್ಲಿಂದ ವಾಪಸ್ ಬರುವಾಗ ಕರೆದುಕೊಂಡು ಬಂದರು. ಆ ಕಾರಣಕ್ಕೆ ಆ ಬಸ್ ನಲ್ಲಿ ಬರಲಿಲ್ಲ. ಹೀಗೆ ಮಾತನಾಡುವವರು ಎದುರಿಗೆ ಸಿಗುತ್ತಾರೆ.
ಉಸಿರುಗಟ್ಟಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಾವು
ಪಾಂಡವಪುರದಿಂದ ಶಾಲಾ ಮಕ್ಕಳು ಹಾಗೂ ಇತರ ಪ್ರಯಾಣಿಕರನ್ನು ಕರೆದುಕೊಂಡು ಮಂಡ್ಯಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ರಾಜ್ ಕುಮಾರ್ ಶನಿವಾರದಂದು ಕನಗನಮರಡಿ ಬಳಿ ಧಾವಿಸುತ್ತಿತ್ತು. ಆದರೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲೇ ಪಕ್ಕದಲ್ಲಿದ್ದ ವಿ.ಸಿ.ನಾಲೆಗೆ ಉರುಳಿದೆ. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದರಿಂದ ಪ್ರಯಾಣಿಕರು ಹೊರಬರಲಾಗದೆ, ಉಸಿರುಗಟ್ಟಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಬಸ್ ನಲ್ಲಿ 30ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಸದ್ಯಕ್ಕೆ ಬರುತ್ತಿರುವ ಮಾಹಿತಿ.
ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ ಸ್ಥಳೀಯರು
ಪಾಂಡವಪುರ ಮತ್ತು ಮಂಡ್ಯ ಮಾರ್ಗದಲ್ಲಿ ಸಂಚರಿಸುವ ರಾಜಕುಮಾರ ಎಂಬ ಖಾಸಗಿ ಬಸ್ ಮಧ್ಯಾಹ್ನ 12 ಗಂಟೆಯ ವೇಳೆಗೆ ಕನಗನಮರಡಿ ಸಮೀಪ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, 12 ಅಡಿ ಆಳದ ವಿ.ಸಿ.ನಾಲೆಗೆ ಉರುಳಿ ಬಿದ್ದಿದೆ. ನೋಡನೋಡುತ್ತಿದ್ದಂತೆ ಬಸ್ ನಾಲೆಗೆ ಉರುಳಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಗ್ರಾಮಸ್ಥರಿಗೆ ವಿಷಯ ತಿಳಿಸಿ, ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಹಲವು ಪ್ರಯಾಣಿಕರು ಹೊರಬರಲಾರದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಈ ಬಸ್ ನಲ್ಲಿ ಸದಾ ಕಿಕ್ಕಿರಿದು ಜನ ಇರುತ್ತಿದ್ದರು
ಅಸ್ವಸ್ಥಗೊಂಡಿದ್ದ ಕೆಲವರನ್ನು ಹೊರತೆಗೆದು ರಕ್ಷಿಸಲಾಗಿದೆ. ಪ್ರತಿ ದಿನ ಈ ಬಸ್ ಬೆಳಗ್ಗೆ ಮತ್ತು ಸಂಜೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಶನಿವಾರ ಹಾಗೂ ಮಧ್ಯಾಹ್ನವಾದುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಾಲೆಯಲ್ಲಿ ಕೆಲವರು ಕೊಚ್ಚಿ ಹೋಗಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದವರು ನೀರಿಗೆ ಅಡ್ಡಲಾಗಿ ಬಲೆ ಹಾಕಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಸ್ ಉರುಳಿದಾಗ ಅದರ ಬಾಗಿಲು ಕೆಳಭಾಗಕ್ಕೆ ಸರಿದಿರುವುದರಿಂದ ಈಜು ಬರುವ ಪ್ರಯಾಣಿಕರು ಕೂಡ ಹೊರಬರಲಾರದೆ ಸಾವನ್ನಪ್ಪಿರುವ ಸಾಧ್ಯತೆ ಇದೆ.
ಮೃತರ ಕುಟುಂಬಸ್ಥರ ನೋವು ಮುಗಿಲು ಮುಟ್ಟಿತ್ತು
ಬಸ್ ದುರಂತ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದ ಕುಟುಂಬದವರು, ಸಂಬಂಧಿಕರು ಹಾಗೂ ಸಾರ್ವಜನಿಕರ ಗೋಳು ಹೇಳತೀರದಾಗಿತ್ತು. ಬೆಳಗ್ಗೆ ಶಾಲೆಗೆ ಹೋದ ಮಕ್ಕಳು ಮನೆಗೆ ಬಾರದೆ ಹೆಣವಾಗಿದ್ದರು. ಯಾವುದೋ ಕೆಲಸಕ್ಕೆ ಹೋದವರೂ ಬಸ್ ದುರಂತಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಕೌಟುಂಬಿಕ ಕೆಲಸಕ್ಕೆಂದು ಹೋಗಿ ಕುಳಿತಲ್ಲೇ ಮರಣವನ್ನಪ್ಪಿದ್ದರು. ಈ ಎಲ್ಲವನ್ನೂ ನೆನೆದು ಕಣ್ಣೀರಿಡುತ್ತಿದ್ದವರನ್ನು ಕಂಡು ಕರಳು ಕಿತ್ತುಬರುತ್ತಿತ್ತು. ನಾಲೆಯಿಂದ ಒಂದೊಂದೇ ಮೃತದೇಹವನ್ನು ಹೊರತೆಗೆಯುತ್ತಿದ್ದಂತೆ ದಡದಲ್ಲಿದ್ದವರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಓ ಇವನು ಸತ್ತನೇ, ಅವಳು ತೀರಿಕೊಂಡಳೇ ಎಂದು ಕೂಗುತ್ತಿದ್ದರು.