ಮಳವಳ್ಳಿಯ ಮಗ ಮುಟ್ಟಿದ ಎತ್ತರ, ಮಾಡಿದ ಸಾಧನೆ ಅಸಾಮಾನ್ಯ
ಮೈಸೂರು, ಡಿಸೆಂಬರ್ 16 : ಮಂಡ್ಯ ಜಿಲ್ಲೆಯಲ್ಲೊಬ್ಬ ವಿಜ್ಞಾನಿ ಇದ್ದಾರೆ. ಅವರು ಸಾಮಾನ್ಯದವರಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗೈದು ದೇಶದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ.
ಹೌದು, ಅವರ ಹೆಸರು ಪ್ರತಾಪ್. ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿ. ದೇಶದ ರಕ್ಷಣಾ ವ್ಯವಸ್ಥೆಯ ಪ್ರತಿಷ್ಠಿತ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಆರ್ಗನೈಸೇಷನ್ ತಂತ್ರಜ್ಞಾನವನ್ನು ಆವಿಷ್ಕರಿಸಿ ಯುವ ವಿಜ್ಞಾನಿ.
ಇದೇ ಕಾಲೇಜಿನಲ್ಲಿ ತೃತೀಯ ಬಿಎಸ್ ಸಿ(ಸಿಬಿಜಡ್) ವ್ಯಾಸಂಗ ಮಾಡುತ್ತಿರುವ ಪ್ರತಾಪ್ ಜಪಾನಿನ ಟೋಕಿಯೋದಲ್ಲಿ ನ.29ರಂದು ನಡೆದ ಅಂತಾರಾಷ್ಟ್ರೀಯ ರೊಬೋಟಿಕ್ಸ್ ಪ್ರದರ್ಶನದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಸೇರಿದಂತೆ 10 ಸಾವಿರ ಅಮೆರಿಕನ್ ಡಾಲರ್ ನಗದು ಬಹುಮಾನದೊಂದಿಗೆ ಯುವ ವಿಜ್ಞಾನಿ' ಎಂಬ ಪಟ್ಟಕ್ಕೆ ಭಾಜನನಾಗಿದ್ದಾರೆ.
ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೂಕಿನ ನೆಟಕಲ್ ಗ್ರಾಮದ ಸಾಮಾನ್ಯ ವರ್ಗದ ಹುಡುಗನಾದ ಪ್ರತಾಪ್ "ನನ್ನ ಸಾಧನೆಗೆ ಪ್ರೇರಣಾ ಶಕ್ತಿಯಾಗಿದ್ದು ಅಬ್ದುಲ್ ಕಲಾಂ ಹಾಗೂ ನನ್ನ ಪೋಷಕರು. ನನಗೆ ಜಪಾನ್ ಗೆ ಹೋಗುವ ಶಕ್ತಿ ಇರಲಿಲ್ಲ. ಆಗ ಸುತ್ತೂರು ಶ್ರೀಗಳು 96 ಸಾವಿರ ಧನ ಸಹಾಯ ನೀಡಿದ್ದರು. ಜೊತೆಗೆ ಕಾಲೇಜಿನ ಪ್ರಾಧ್ಯಾಪಕರು ಸೇರಿದಂತೆ ಸಿಬ್ಬಂದಿ ಕೂಡ ನನಗೆ ಸ್ಪಂದಿಸಿದ್ದಾರೆ.
ಅಲ್ಲಿ ನನ್ನ ಪ್ರಾಜೆಕ್ಟ್ ಗೆ ಉತ್ತಮ ರೆಸ್ಪಾನ್ಸ್ ಸಹ ಸಿಕ್ಕಿದೆ. ನಾನು ಟಾಪ್ 50 ಯೊಳಗೆ ಬರುತ್ತೇನೆಂದು ಅಂದುಕೊಂಡಿದ್ದೆ. ಆದರೆ ಟಾಪ್ 1 ಬಂದು ಯುವ ವಿಜ್ಞಾನಿ ಪಟ್ಟ ಸಿಗುತ್ತದೆಂದು ಅಂದುಕೊಂಡಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದರು.

ದೇಶ ಸೇವೆ ನನ್ನ ಗುರಿ
"ರಕ್ಷಣಾ ಪಡೆಯಲ್ಲಿ ಟೆಲಿಗ್ರಾಫಿ ಅಳವಡಿಕೆ, ಡ್ರೋಣ್ ನೆಟ್ವರ್ಕಿಂಗ್ ನಲ್ಲಿ ಗೂಡಲೇಖನಶಾಸ್ತ್ರ ಅಳವಡಿಕೆ, ವಾಹನ ದಟ್ಟಣೆ ನಿರ್ವಣೆಗಾಗಿ ನೆಟ್ವರ್ಕಿಂಗ್ ಅಳವಡಿಕೆ, ರಾಷ್ಟ್ರೀಯ ಸಮಾಜ ರಕ್ಷಣಾ ಕಾರ್ಯದಲ್ಲಿ ಡ್ರೋಣ್ ಅಳವಡಿಕೆ ಮುಂತಾದ ಪ್ರಮುಖ ಯೋಜನೆಗಳಿಗೆ ರೂಪುರೇಷೆ ಕುರಿತಾಗಿ ಜಪಾನ್ ನಲ್ಲಿ ಮಂಡಿಸಿದ್ದೇನೆ.
ಹೆಲಿಕಾಪ್ಟರ್ ಹಾರಾಟದಿಂದ ಪ್ರೇರಿತನಾದ ನನಗೆ ಡ್ರೋಣ್ ತಯಾರಿಸಲು ಆಸಕ್ತಿ ಮೂಡಿತು. ಇದಕ್ಕಾಗಿ ಯೂ ಟ್ಯೂಬ್ ನಲ್ಲಿ ಡ್ರೋಣ್ ಚಲನ ವಲನಗಳನ್ನು ಗಮನಿಸಿಯೇ ಡ್ರೋಣ್ ಕುರಿತು
ತಿಳಿದುಕೊಂಡೆ. ಈಗ ತಯಾರು ಮಾಡಿರುವ ಡ್ರೋಣ್ ಗೆ 40 ರಿಂದ 50 ಲಕ್ಷ ರೂ. ವೆಚ್ಚವಾಗಲಿದೆ.
ಈಗಾಗಲೇ ವಿದೇಶಗಳಿಂದ ಡ್ರೋಣ್ ಗೆ ಆಫರ್ ಬಂದಿದೆ. ಆದರೆ ನನ್ನ ದೇಶಕ್ಕಾಗಿ ನೀಡುತ್ತೇನೆಯೇ ಹೊರತು ಯಾವುದೇ ದೇಶಕ್ಕೂ ನೀಡುವುದಿಲ್ಲ. ದೇಶ ಸೇವೆ ನನ್ನ ಗುರಿಯಾಗಿದೆ. ಆದುದರಿಂದ ದೇಶದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂಬ ಆಸೆಯಿದೆ" ಎಂದು ನಗುಮೊಗದಲ್ಲೇ ಉತ್ತರಿಸುತ್ತಾರೆ ಪ್ರತಾಪ್.

ಪ್ರೊಫೆಸರ್ ಸಹಿ ಹಾಕಿಸುವಲ್ಲಿ ಯಶಸ್ವಿ
ಈಗಷ್ಟೇ 22 ರ ಹರೆಯಕ್ಕೆ ಕಾಲಿಟ್ಟಿರುವ ಪ್ರತಾಪ್ ತಾವು ಓದಿದ್ದು ಬಿ ಎಸ್ಸಿ. ಇವರು ಕಂಡುಹಿಡಿದಿರುವ ಈ ಡ್ರೋನ್ ನೈಸರ್ಗಿಕ ಪ್ರಕೃತಿ ವಿಕೋಪಕ್ಕೂ ಉಪಯೋಗಕಾರಿ. ಅವರ ತಾಂತ್ರಿಕ ಸಾಧನೆ ಇಷ್ಟಕ್ಕೆ ನಿಂತಿಲ್ಲ. ಅದು ಇನ್ನು ಸಾಗುತ್ತಲೇ ಇದೆ.
ಸಾಮಾನ್ಯ ಕಾಲೇಜಿನಲ್ಲಿ ವಿಜ್ಞಾನ ಓದಿದ ಈ ಪೋರ ಇಂದು ದೇಶದ ಪ್ರತಿಷ್ಠಿತ ಐಐಟಿ, ಐಐಎಸ್ಸಿ ಸೇರಿದಂತೆ ಇನ್ನು ಅನೇಕ ಸಂಸ್ಥೆಗಳಲ್ಲಿ ವಿಜ್ಞಾನಿಗಳಿಗೆ ಆಗಿ ಪಾಠ ಮಾಡುತ್ತಿದ್ದಾರೆ ಎಂಬುದು ಸಹ ಅಚ್ಚರಿಯ ವಿಚಾರ.
ಸಾಧನೆಯ ಹಾದಿಯಲ್ಲಿದ್ದ ಪ್ರತಾಪ್ ಗೂ ನೂರೆಂಟು ಸಮಸ್ಯೆಗಳು, ತಾಪತ್ರಯಗಳು ಅಡ್ಡ ಬಂದಿದ್ದವು. ಪ್ರತಾಪ್ ತಾವು ಸಿದ್ದಪಡಿಸಿದ ಅಸೈನ್ ಮೆಂಟ್ ಅನ್ನು ಸಂಸ್ಥೆಗಳ ಎದುರು ಪ್ರಸ್ತುತ ಪಡಿಸಲು ಪ್ರತಿಷ್ಠಿತ ಐಐಟಿ ಪ್ರೊಫೆಸರ್ ಸಹಿ ಅಗತ್ಯವಾಗಿತ್ತು. ತಾವು ಇಂಜಿನಿಯರಿಂಗ್ ವಿದ್ಯಾರ್ಥಿಯಲ್ಲದ ಕಾರಣ ಆ ಪ್ರೊಫೆಸರ್ ಸಹಿ ಹಾಕಲು ಹಿಂಜರಿದಿದ್ದನ್ನು ಪ್ರತಾಪ್ ನೆನಪಿಸಿಕೊಳ್ಳುತ್ತಾರೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಲ್ಲೇ ಹಲವು ದಿನಗಳನ್ನು ಕಳೆದ ಪ್ರತಾಪ್, ಪ್ರೊಫೆಸರ್ ಸಹಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದರು.

ಪ್ರಥಮ ಸ್ಥಾನ ಪಡೆದ ಪ್ರತಾಪ್
ಆ ನಂತರ ನಡೆದದ್ದು ವಿಜ್ಞಾನದ ಶುದ್ದ ತಪಸ್ಸು. ತಾವು ತಯಾರಿಸಿಬೇಕಾದ ಡ್ರೋನ್ ಗಾಗಿ ಪ್ರತಾಪ್ ಊರೂರು ತಿರುಗಿದರು. ಪೂರ್ವ ಕರಾವಳಿಯ ವಿಶಾಖಪಟ್ಟಣಂನಿಂದ ಹಿಡಿದು, ಪಶ್ಚಿಮ ಕರಾವಳಿಯ ರಾಜಧಾನಿ ಮುಂಬೈವರೆಗೂ, ಅಲ್ಲಿಯ ಡಂಪಿಂಗ್ ಯಾರ್ಡ್ ಗಳಲ್ಲಿ ಸಿಕ್ಕ ವಸ್ತುಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಒಂದು ಡ್ರೋನ್ ಕ್ಯಾಮರಾವಾಗಿ ಪರಿವರ್ತಿಸಿದರು.
ಇನ್ನು ಮುಂದಿನಂದು ಪ್ರತಾಪ್ ಸಿಂಹ ನಡಿಗೆ. ಜಪಾನಿನಲ್ಲಿ ನಡೆದ ರೋಬೋಟಿಕ್ ಮೇಳದಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಚ್ಚರಿ ಅಂದರೇ ಜಪಾನಿನ ಸಮಾವೇಶದ ಸ್ಥಳಕ್ಕೆ ಹೋಗಲು ಹಣವಿಲ್ಲದೇ ಪರದಾಡಿದ ಈ ಯುವಕ ಅದೇ ರಾಷ್ಟ್ರದಲ್ಲಿ ಫ್ರಾನ್ಸ್ ಏರ್ ಲೈನ್ಸ್ ನಿಂದ ಪುರಸ್ಕಾರ ಪಡೆದು ಸ್ವದೇಶಕ್ಕೆ ಮರಳಿದ ಹೆಮ್ಮೆಯ ಮಗನಾಗಿದ್ದಾರೆ.
ಇಂತಹ ಸಾಧನೆಗಳು ಕೇವಲ ಹೈಟೆಕ್ ಸಿಟಿಗಳಿಗಷ್ಟೇ ಸೀಮಿತವಾಗಬಹುದಾದ ಸಮಯದಲ್ಲಿ ಈ ಹಳ್ಳಿ ರೈತಾಪಿ ಕುಟುಂಬದ ಕುಡಿ ಸಂಶೋಧನಾ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದಾನೆ.

ಪ್ರತಾಪ್ ತಂದೆ ಅನಕ್ಷರಸ್ಥರು
ವಿಚಿತ್ರ ಅಂದರೆ ಪ್ರತಾಪ್ ತಂದೆ ಅನಕ್ಷರಸ್ಥ ಕೃಷಿಕರು, ತಾಯಿ ಮನೆಗೆಲಸಕ್ಕೆ ಮಾತ್ರ ಸೀಮಿತ. ಹೀಗಿದ್ದರೂ ಪ್ರತಾಪ್ ತನ್ನ ಸಾಧನೆಯ ಹಾದಿಯನ್ನ ಬಿಡದೇ ಕಠಿಣ ಪರಿಶ್ರಮದ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಾರೆ. ಈಗಿನ ನಮ್ಮ ಕಾಲದ ಯುವಕರು ಕೈಯ್ಯಲ್ಲಿ ನಾಲ್ಕು ಕಾಸು ಓಡಾಡಿದರೇ ಸಾಕು ಮನೋರಂಜನೆಗೆಂದು ಸೀಮಿತವಾಗುತ್ತಾರೆ. ಇಂತಹ ಕಾಲಘಟ್ಟದಲ್ಲಿ ಪ್ರತಾಪ್ ನಂತಹ ಯುವ ಪೀಳಿಗೆಯ ಸಂತತಿ ಹೆಚ್ಚಾಗಬೇಕು.












Click it and Unblock the Notifications