ಕೋಳಿ ರಕ್ತ ಚೆಲ್ಲಿ ಕೊಲೆಯೆಂದು ನಂಬಿಸಿದ್ದ ಚಾಲಕಿ ಸಾಲಗಾರ!
ಮಂಡ್ಯ, ಸೆಪ್ಟೆಂಬರ್ 14 : ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ವಿಗ್ಗೆ ಕೋಳಿ ರಕ್ತವನ್ನು ಚೆಲ್ಲಿ ಅದನ್ನು ಕಾಲುವೆ ಬಳಿ ಬಿಸಾಡಿ ಕೊಲೆಯೆಂದು ಬಿಂಬಿಸಲು ಪ್ರಯತ್ನಿಸಿದ್ದ ಸಿನಿಮೀಯ ಮಾದರಿಯ ಪ್ರಕರಣವೊಂದು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚೊಟ್ಟನಹಳ್ಳಿ ಗ್ರಾಮದ ಮನು ಎಂಬಾತನೇ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ತನ್ನನ್ನು ತಾನು ಅಪಹರಿಸಿ ಕೊಲೆಯಾಗಿದ ರೀತಿ ಬಿಂಬಿಸಲು ಪ್ರಯತ್ನಿಸಿ ಅದು ಫಲಿಸದೆ ಆತ ಕಟ್ಟಿದ ಕಟ್ಟು ಕಥೆ ಬಯಲಾಗಿದೆ. ಆದರೆ ಈತ ಮಾಡಿದ ಕಿತಾಪತಿಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರೂ ಮಾತ್ರ ತೀವ್ರ ಆತಂಕಕ್ಕೆ ಒಳಗಾಗಿದ್ದಂತು ಸುಳ್ಳಲ್ಲ.
ನಡೆದಿದ್ದೇನು?
ಮನು ಎಂಬಾತ ಫೈನಾನ್ಸ್ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಜೊತೆಗೆ ಹಲವರ ಬಳಿ ಸಾಲದ ರೂಪದಲ್ಲಿ ಹಣವನ್ನೂ ಪಡೆದುಕೊಂಡಿದ್ದನು. ಈತನಿಂದ ಹಣ ಪಡೆದುಕಂಡವರು ಸಕಾಲಕ್ಕೆ ಹಣವನ್ನು ವಾಪಸ್ಸು ಕೊಡಲಿಲ್ಲ. ಆದರೆ ಈತನಿಗೆ ಸಾಲಕೊಟ್ಟಿದ್ದವರು ತಮ್ಮ ಹಣವನ್ನು ಹಿಂತಿರುಗಿಸುವಂತೆ ಪೀಡಿಸಲಾರಂಭಿಸಿದ್ದಾರೆ.

ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕೆ ಉಪಾಯ ಹುಡುಕಿದ ಮನು, ಆಗಸ್ಟ್ 12ರಂದು ಇದ್ದಕ್ಕಿದ್ದಂತೆ ನಾಪತ್ತೆಯಾದನು. ಅದಕ್ಕೂ ಮುನ್ನ ಮನೆಯಲ್ಲಿ ಈತ ಹಾಕಿಕೊಳ್ಳುತ್ತಿದ್ದ ವಿಗ್ಗೆ ಕೋಳಿ ರಕ್ತವನ್ನು ಚೆಲ್ಲಿ, ಚಪ್ಪಲಿಗಳನ್ನು ಕಾಲುವೆ ಬಳಿ ಬಿಟ್ಟು ಕೊಲೆಯಾಗಿದ್ದ ರೀತಿಯಲ್ಲಿ ಸೀನ್ ಕ್ರಿಯೇಟ್ ಮಾಡಿದ್ದಾನೆ. ಬಳಿಕ ಕಾರೊಂದರಲ್ಲಿ ಬೆಂಗಳೂರಿಗೆ ಹೋಗಿ ಅಲ್ಲಿಂದ ಗೋವಾಗೆ ತೆರಳಿದ್ದಾನೆ.
ಮನು ನಾಪತ್ತೆಯಾಗಿರುವುದು ಹಾಗೂ ಕಾಲುವೆ ಬಳಿ ಆತನ ವಿಗ್ನಲ್ಲಿ ರಕ್ತ ಚೆಲ್ಲಿರುವುದುನ್ನು ಕಂಡ ಪೋಷಕರು ಆತನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಭಾವಿಸಿದ್ದಾರೆ. ಇದೇ ವೇಳೆಗೆ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಎಂಟು ಲಕ್ಷ ರೂ.ಹಣವನ್ನು ಸುಪ್ರಿಯಾ ಎಂಬಾಕೆಗೆ ನೀಡಿದ್ದು, ಅದರ ಖಾಲಿ ಚೆಕ್ಗೆ ಸಹಿ ಮಾಡಿಸಿ ಮನು ಪಡೆದಿದ್ದನು. ಯಾರೋ ಒಬ್ಬ ಮಹಿಳೆ ಪರವಾಗಿ ಕರೆ ಮಾಡಿ ಚೆಕ್ ಹಾಗೂ ಡಾಕ್ಯುಮೆಂಟ್ ಕೊಡು, ನಂತರ ಹಣವನ್ನು ಸುಪ್ರಿಯಾ ಕೊಡುತ್ತಾಳೆ. ನೀನು ದಾಖಲೆ ಕೊಡದಿದ್ದರೆ ಸಲಗ ಸಿನಿಮಾ ಮಾದರಿಯಲ್ಲಿ ನೀನು ಕೊಲೆಯಾಗುತ್ತೀಯಾ ಎಂದು ಬೆದರಿಕೆ ಹಾಕಿದ್ದಾನೆ.
ಈ ಆಡಿಯೋ ವಿಷಯ ತಿಳಿದ ಪೋಷಕರು ಮಗನ ಕೊಲೆ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಅರಕೆರೆ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಮನು ಜೀವಂತವಾಗಿರುವುದು ತಿಳಿಯಿತು. ಆತನನ್ನು ಕರೆತಂದು ವಿಚಾರಿಸಿದಾಗ ಸತ್ಯಾಂಶ ಹೊರಬಿದ್ದಿದೆ.
ಗೋವಾ ಪ್ರವಾಸ ಮುಗಿಸಿ ವಾಪಸ್ ಬಂದಿದ್ದ ಮನು ಬೆಂಗಳೂರಿನ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ. ತನಿಖೆ ವೇಳೆ ಬಳಿಕ ಮನು ಮೊಬೈಲ್ ಲೋಕೇಶನ್ ಪತ್ತೆ ಹಚ್ಚಿದ ಖಾಕಿಗೆ ಆತ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ವೇಳೆ ಸಾಲ ಪಡೆದು ಬೆದರಿಕೆ ಹಾಕಿದ್ದವರಿಗೆ ಬುದ್ಧಿ ಕಲಿಸಲು ಕಿಡ್ನಾಪ್ ಮತ್ತು ಮರ್ಡರ್ ಡ್ರಾಮಾ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.












Click it and Unblock the Notifications