ಸುಮಲತಾ ಮಂಡ್ಯದ ಗೌಡ್ತಿ ಮತ್ತು ಎಚ್ಡಿಕೆ ಪತ್ನಿಯ ಮೂಲ ನೆಟ್ಟಿಗರು ಕೆದಕಿದಾಗ!
Recommended Video

ಸಾಮಾಜಿಕ ಜಾಲತಾಣ ಎಷ್ಟು ಪ್ರಭಾವಿಯಾಗಿದೆ ಎಂದರೆ, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಒಂದು ತಪ್ಪು ಮಾಡಿದರೆ, ನೆಟ್ಟಿಗರು ಅದರ ಪೂರ್ವಾಪರವನ್ನು ಹುಡುಕಿ, ವಿಷಯದ ಸುತ್ತ ಗಿರಿಗಿಟ್ಲೆಯಾಡಿ ಬಿಡುತ್ತಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಯಾರು, ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರಾ ಎನ್ನುವುದು ಚರ್ಚೆಯ ವಿಷಯವಾಗಿದೆ.
ರಾಜಕೀಯ ಪಕ್ಷಗಳ ಸಹವಾಸವೇ ಬೇಡ, ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಒತ್ತಡ ಒಂದೆಡೆಯಾದರೆ, ಇಲ್ಲ ಅವರು ಕಾಂಗ್ರೆಸ್ಸಿನಿಂದಲೇ ಸ್ಪರ್ಧಿಸಬೇಕು ಎನ್ನುವ ಕೂಗು ಇನ್ನೊಂದೆಡೆ.
ಇವೆಲ್ಲದರ ನಡುವೆ, ಸುಮಲತಾ ಸ್ಪರ್ಧೆಯ ವಿಚಾರದಲ್ಲಿ, ಜೆಡಿಎಸ್ ಮುಖಂಡರೊಬ್ಬರು ಅವರ ಮೂಲ ಮತ್ತು ಅವರ ಮಾತೃಭಾಷೆಯ ವಿಷಯದ ಬಗ್ಗೆ ಮಾತನಾಡಿ, 'ಸುಮಲತಾ ಏನು ಮಂಡ್ಯದ ಗೌಡ್ತಿಯಾ' ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆ, ನೆಟ್ಟಿಗರು, ಸಿಎಂ ಕುಮಾರಸ್ವಾಮಿಯ ಪತ್ನಿ ಅನಿತಾ ಅವರ ಮೂಲದ ವಿಚಾರವನ್ನು ಹೊರಗೆಳೆದಿದ್ದಾರೆ. ಏನಿದು, ಗದ್ದಲ, ಮುಂದೆ ಓದಿ..

ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ
ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ, ಸುಮಲತಾ ಏನು ಮಂಡ್ಯ ಮೂಲದವರಾ? ಅವರ ಮೂಲ ಆಂಧ್ರಪ್ರದೇಶ, ಅವರು ಮಂಡ್ಯದಿಂದ ಹೇಗೆ ಸ್ಪರ್ಧಿಸಲು ಸಾಧ್ಯ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದು ಅಂಬರೀಶ್ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಅಂಬರೀಶ್ ಅಭಿಮಾನಿಗಳು ಶ್ರೀಕಂಠೇಗೌಡರ ವಿರುದ್ದ ಕಿಡಿಕಾರಿದ್ದರು.

ಸುಮಲತಾ ಏನು ಮಂಡ್ಯದ ಗೌಡ್ತಿಯಾ
ಇಷ್ಟಕ್ಕೂ ಮಾತನ್ನು ನಿಲ್ಲಿಸದ ಶ್ರೀಕಂಠೇಗೌಡ್ರು, ಅಂಬರೀಶ್ ಜೀವಿತಾವಧಿಯಲ್ಲಿ ಸಾಕಷ್ಟು ಮಾಡಿದ್ದೇವೆ. ಅವರೇ, ರಾಜಕಾರಣ ನನ್ನಲ್ಲೇ ಮುಗಿಯಬೇಕು ಎಂದು ಹೇಳಿದ್ದರು. ಸುಮಲತಾ ಏನು ಮಂಡ್ಯದ ಗೌಡ್ತಿಯಾ, ಅವರು ಆಂಧ್ರಪ್ರದೇಶದವರು ಮತ್ತು ಅವರ ಭಾಷೆ ತೆಲುಗು ಎನ್ನುವ ವಿವಾದಕಾರಿ ಹೇಳಿಕೆಯನ್ನು ನೀಡಿದ್ದರು.

ನೋಡಿ ಸ್ವಾಮಿ, ನಿಮ್ಮ ಪತ್ನಿಯವರು ಎಲ್ಲಿಯವರು
ಇದು ಅಂಬರೀಶ್ ಅಭಿಮಾನಿಗಳ ಜೊತೆ, ಕಾಂಗ್ರೆಸ್ ಕಾರ್ಯಕರ್ತರ ಕೋಪಕ್ಕೂ ಕಾರಣವಾಗಿತ್ತು. ಸಾಮಾಜಿಕ ತಾಣದಲ್ಲಿ ನೆಟ್ಟಿಗರು, ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ತೆಲುಗು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದನ್ನು ಹೊರಗೆಳೆದು, ನೋಡಿ ಸ್ವಾಮಿ, ನಿಮ್ಮ ಪತ್ನಿಯವರು ಎಲ್ಲಿಯವರು ಎಂದು ಟ್ರೋಲ್ ಮಾಡುತ್ತಿದ್ದಾರೆ.

ಕರ್ನಾಟಕಕ್ಕೂ ತೆಲುಗು ಭಾಷೆಗೂ ನಂಟಿದೆ
ಸಂದರ್ಶನದಲ್ಲಿ (ಬಹುಷಃ ಜಾಗ್ವಾರ್ ಚಿತ್ರ ಬಿಡುಗಡೆಯ ವೇಳೆ ಇರಬಹುದು) ನಿರೂಪಕಿ, ಮಾಜಿ ಸಿಎಂ ನೀವು, ಹಿಂದಿಯಲ್ಲಿ ನಿಮ್ಮ ಮಗನನ್ನು ಪರಿಚಯಿಸಬಹುದಾಗಿತ್ತು. ಅದ್ಯಾಕೆ ತೆಲುಗು ಭಾಷೆಯನ್ನು ಆಯ್ದುಕೊಂಡಿರಿ ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಎಚ್ಡಿಕೆ, ಕರ್ನಾಟಕಕ್ಕೂ ತೆಲುಗು ಭಾಷೆಗೂ ನಂಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೆಲುಗು ಪ್ರಾಭ್ಯಲ್ಯ ಹೆಚ್ಚಿದೆ ಎಂದು ಹೇಳುತ್ತಾರೆ. ಮುಂದುವರಿಯುತ್ತಾ..

ಸುಮಲತಾ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ
ನನ್ನ ಪತ್ನಿ ಕೂಡಾ ತೆಲುಗು ಭಾಷೆಯವಳು. ಅವರ ಮನೆ ಭಾಷೆ ಕೂಡಾ ತೆಲುಗು. ಹಾಗಾಗಿ ನಮಗೂ, ತೆಲುಗಿಗೂ ನಂಟಿದೆ ಎನ್ನುವ ಮಾತನ್ನು ಕುಮಾರಸ್ವಾಮಿ ಹೇಳುತ್ತಾರೆ. ಈ ಹಳೆಯ ಸಂದರ್ಶನದ ವಿಡಿಯೋವನ್ನು ಹೊರಗೆಳೆದಿರುವ ನೆಟ್ಟಿಗರು, ನಿಮ್ಮ ಪತ್ನಿಯೇ ತೆಲುಗಿನವರು, ಇನ್ನು ನಿಮ್ಮ ಪಕ್ಷದ ನಾಯಕರಿಗೆ ಸುಮಲತಾ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ ಎಂದು ಕೇಳುತ್ತಿದ್ದಾರೆ.












Click it and Unblock the Notifications