ಕಾಂಗ್ರೆಸ್ನಲ್ಲಿ ಕಡೆಗಣನೆಗೆ ಒಳಗಾದ ಮಂಡ್ಯ ಮಾಜಿ ಸಂಸದೆ ರಮ್ಯಾ, ಬಿಜೆಪಿ ಸೇರಲು ಒಲವು?
ಮಂಡ್ಯ, ಸೆಪ್ಟೆಂಬರ್, 21: ಮಾಜಿ ಸಂಸದೆ ರಮ್ಯಾ ರಾಜಕಾರಣದಲ್ಲಿ ಮಿಂಚಿನ ವೇಗದಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು ಅದೇ ವೇಗದಲ್ಲಿ ಮರೆಯಾದ ಮಾಜಿ ಸಂಸದೆ ರಮ್ಯಾ, ಇದೀಗ ಬಿಜೆಪಿ ಸೇರಲು ಒಲವು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷದೊಳಗೆ ಕಡೆಗಣನೆಗೆ ಒಳಗಾದಂತೆ ಕಂಡುಬಂದಿರುವ ಅವರು ಬಿಜೆಪಿಯೊಳಗೆ ನೆಲೆ ಕಂಡುಕೊಳ್ಳುವ ಪ್ರಯತ್ನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರುವುದಕ್ಕೆ ಇನ್ನು ಮೀನಾಮೇಷ ಎಣಿಸುತ್ತಿದ್ದಾರೆ. ಅವರು ಪಕ್ಷ ಸೇರ್ಪಡೆ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಗೊಂದಲದಲ್ಲಿದ್ದಾರೆ. ಸುಮಲತಾ ಬಿಜೆಪಿ ಸೇರ್ಪಡೆ ವಿಚಾರ ಇನ್ನು ರಾಷ್ಟ್ರ ನಾಯಕರ ಹಂತದಲ್ಲಿದೆ. ಆ ಮಾತುಕತೆ ಮುರಿದುಬಿದ್ದರೆ ರಮ್ಯಾ ಬಿಜೆಪಿ ಸೇರುವುದಕ್ಕೆ ಪೂರಕ ವಾತಾವರಣ ಸೃಷ್ಟಿ ಆಗಬಹುದು ಎಂದು ಹೇಳಲಾಗುತ್ತಿದೆ.ರಮ್ಯಾ ಬಿಜೆಪಿ ಸೇರುವ ವಿಚಾರವಿನ್ನು ಪ್ರಾಥಮಿಕ ಹಂತದಲ್ಲಿದೆ. ಈ ಬಗ್ಗೆ ಎರಡು ಮೂರು ಸುತ್ತಿನ ಮಾತುಕತೆಗಳು ನಡೆಯಬೇಕಿದೆ. ಅಲ್ಲಿಯವರೆಗೂ ಸ್ಪಷ್ಟತೆ ಸಿಗುವುದು ಕಷ್ಟ ಎಂದು ಹೇಳಬಹುದಾಗಿದೆ.
ದಬ್ಬಾಳಿಕೆ, ಗೂಂಡಾಗಿರಿ ಪ್ರದರ್ಶಿಸುವ ಜೆಡಿಎಸ್ ಶಾಸಕರಿಗೆ ಅಭಿವೃದ್ಧಿ ಬೇಕಿಲ್ಲ:ಸುಮಲತಾ ಕಿಡಿ
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲವರ್ಧನೆಗೊಳಿಸುವ ಉತ್ಸಾಹದಲ್ಲಿರುವ ಬಿಜೆಪಿ ನಾಯಕರು ರಮ್ಯಾ ಅವರನ್ನು ಆಯ್ಕೆಯಾಗಿ ಇಟ್ಟುಕೊಂಡಿದ್ದಾರೆ. ಆರು ತಿಂಗಳ ಅಲ್ಪಾವಧಿಯಲ್ಲಿ ಜಿಲ್ಲೆಯೊಳಗೆ ಗಮನ ಸೆಳೆಯುವಂತಹ ಕಾರ್ಯಗಳನ್ನು ಮಾಡುವುದರೊಂದಿಗೆ ಜನಪ್ರಿಯತೆ ಗಳಿಸಿಕೊಂಡಿದ್ದರು. ಆದರೆ 2015ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ರಮ್ಯಾ ಸೋಲಿಗೆ ಕಾರಣವಾಗಿದ್ದು, ಅವರು ಜಿಲ್ಲೆಯಿಂದ ನಿರ್ಗಮಿಸುವಂತೆ ಮಾಡಿತ್ತು.
ಮುಂದಿನ ಚುನಾವಣೆಗೆ ಸಂಸದೆ ಪ್ಲಾನ್?
ಜಿಲ್ಲೆಯಲ್ಲಿ ಸಂಸದೆ ಸುಮಲತಾ ಇಮೇಜ್ ಕೂಡ ಕಡಿಮೆ ಆಗಿದೆ. 2019ರ ಲೋಕಸಭಾ ಚುನಾವಣಾ ಸಂದರ್ಭದ ಪರಿಸ್ಥಿತಿ, ವಾತಾವರಣ ಈಗಿಲ್ಲ. ಮುಂದಿನ ಚುನಾವಣೆಯಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ಕನಸಿನ ಮಾತಾಗಿದೆ. ಅದಕ್ಕಾಗಿ ಅವರು ಬಿಜೆಪಿ ಅಥವಾ ಕಾಂಗ್ರೆಸ್ ಸೇರುವುದು ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ಅನಿವಾರ್ಯವಾಗಿದೆ. ಸುಮಲತಾ ಅವರು ಸಂಸದೆ ಅದ ಬಳಿಕ ಸಂಸತ್ನಲ್ಲಿ ಜಿಲ್ಲೆಯ ಪರವಾಗಿ ದಿಟ್ಟವಾಗಿ ಧ್ವನಿ ಎತ್ತಿ ಮಾತನಾಡಿರುವುದನ್ನು ಹೊರತುಪಡಿಸಿದರೆ ಗಮನ ಸೆಳೆಯುವಂತಹ ಸಾಧನೆಗಳನ್ನಾಗಲೀ, ಕೊಡುಗೆಗಳನ್ನಾಗಲಿ ನೀಡಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ರಮ್ಯಾ ಕೇವಲ ಆರು ತಿಂಗಳು ಸಂಸದೆ ಆಗಿದ್ದರೂ ಮೈಶುಗರ್ ಕಾರ್ಖಾನೆಯನ್ನು ರೋಗಗ್ರಸ್ಥ ಕಾರ್ಖಾನೆ ಎಂಬ ಹಣೆಪಟ್ಟಿಯಿಂದ ಹೊರತರಲು ಬಿಐಎಂಆರ್ ಸಂಸ್ಥೆಯ ಅಧಿಕಾರಿಗಳನ್ನು ಕರೆತಂದು ಕಾಯಕಲ್ಪಕ್ಕೆ ಪ್ರಯತ್ನಿಸಿದ್ದರು. ಕೇಂದ್ರೀಯ ವಿದ್ಯಾಲಯವನ್ನು ತಂದರು, ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರೂಪಾಯಿ ಹಣ ಮಂಜೂರು ಮಾಡಿಸಿಕೊಟ್ಟಿದ್ದರು. ಇಂತಹ ಕೆಲವು ಗಮನ ಸೆಳೆಯುವಂತಹ ಕೆಲಸಗಳನ್ನು ಮಾಡಿದ್ದರು.
ಮಂಡ್ಯದಲ್ಲಿ ಸುಮಲತಾ ಆಡಳಿತ ಹೇಗಿದೆ?
ಸುಮಲತಾ ಬಿಜೆಪಿ ಸೇರುವುದಕ್ಕೆ ಅವರು ಹಾಕಿರುವ ಷರತ್ತುಗಳು ಅಡ್ಡಿಯಾಗಿವೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದೆ. ಈ ಷರತ್ತುಗಳನ್ನು ರಾಷ್ಟ್ರ ಮತ್ತು ರಾಜ್ಯ ನಾಯಕರು ಒಪ್ಪದಿರುವುದಕ್ಕೆ ಕ್ಷೇತ್ರದ ಒಳಗಡೆ ಸುಮಲತಾ ಇಮೇಜ್ ಕುಸಿದಿರುವುದಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಮಾತುಗಾರಿಕೆಯಲ್ಲಿ ಜಾಣತನವಿರುವುದನ್ನು ಹೊರತುಪಡಿಸಿದರೆ ಅಂಬರೀಶ್ ಬಳಿಕ ಅವರು ಹೊಂದಿದ್ದ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸುಮಲತಾ ವಿಫಲರಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಬಿಜೆಪಿ ನಾಯಕರು ಪಕ್ಷ ಸೇರ್ಪಡೆ ವಿಚಾರದಲ್ಲಿ ಸುಮಲತಾ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿ ಪಕ್ಷದವರ ಒಲವು ಯಾರ ಕಡೆಗೆ ಇದೆ?
ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಂಸದೆ ರಮ್ಯಾ ಒಂದೇ ಪಕ್ಷದಲ್ಲಿ ಇರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಸುಮಲತಾ ಬಿಜೆಪಿ ಸೇರಿದರೆ ರಮ್ಯಾ ಕಾಂಗ್ರೆಸ್ನಲ್ಲಿ ಉಳಿಯಬಹುದು. ಒಂದು ವೇಳೆ ಸುಮಲತಾ ಕಾಂಗ್ರೆಸ್ ಸೇರಿದರೆ ರಮ್ಯಾ ಬಿಜೆಪಿ ಸೇರುವ ಸಾಧ್ಯತೆಗಳಿವೆ. ಆದರೆ ಇಬ್ಬರೂ ಒಂದೇ ಪಕ್ಷದಲ್ಲಿ ಇರುವುದಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳು ಹೇಳಿವೆ. ರಮ್ಯಾ ಅವರನ್ನು ಹಲವು ಬಿಜೆಪಿ ನಾಯಕರು ಸಂಪರ್ಕಿಸಿದ ವೇಳೆ ಪಕ್ಷ ಸೇರುವುದಕ್ಕೆ ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಡಿಸೆಂಬರ್ವರೆಗೂ ಕಾದುನೋಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಹಳೇ ಮೈಸೂರು ಭಾಗದ ಬಗ್ಗೆ ವಿಶೇಷ ಗಮನಹರಿಸಿರುವ ಬಿಜೆಪಿಯವರು ಹೇಗೆ ರಾಜಕೀಯ ದಾಳಗಳನ್ನು ಉರುಳಿಸಲಿದ್ದಾರೆ ಎನ್ನುವುದನ್ನು ಮುಂದೆ ಕಾದುನೋಡಬೇಕಿದೆ.
ಪಕ್ಷದಲ್ಲಿ ರಮ್ಯಾಗೆ ಸ್ಥಾನಮಾನ ಇದ್ಯಾ?
ಪ್ರಸ್ತುತ ಕಾಂಗ್ರೆಸ್ ಪಕ್ಷದೊಳಗೆ ಮಾಜಿ ಸಂಸದೆ ರಮ್ಯಾ ಮೂಲೆ ಗುಂಪಾಗಿದ್ದಾರೆ. ಅವರಿಗೆ ಪಕ್ಷದ ಒಳಗೆ ಯಾವುದೇ ಸ್ಥಾನ-ಮಾನವೂ ಸಿಕ್ಕಿಲ್ಲ. ರಾಜಕೀಯ ಅವಕಾಶಗಳೂ ದೊರಕುತ್ತಿಲ್ಲ. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಬಗ್ಗೆ ರಮ್ಯಾ ಬೇಸರಗೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಳ್ಳುವ ರಮ್ಯಾ ಮತ್ತೆ ಮರೆ ಆಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆಗಳಿಂದ ದೂರವಿರುವಂತೆ ಕಂಡುಬರುತ್ತಿದೆ.