ಮಂಡ್ಯಕ್ಕೆ ರಾಹುಲ್ ಬಂದು ಹೋದರೇನಂತೆ, 'ರೆಬೆಲ್' ಗಳು ಬಂದಿಲ್ಲವೇ! ಅದೇ ತಾನೇ ಮ್ಯಾಟರ್
Recommended Video
ದಿನೇಶ್ ಗುಂಡೂರಾವ್ ಹೇಳಿದರೂ ಕೇಳುತ್ತಿಲ್ಲ, ಸಿದ್ರಾಮಣ್ಣ ಖಡಕ್ ಸೂಚನೆಯನ್ನೂ ಪಾಲಿಸುತ್ತಿಲ್ಲ, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಮನವಿಗೂ ಮಂಡ್ಯ ಜಿಲ್ಲೆಯ ಅತೃಪ್ತ ಕಾಂಗ್ರೆಸ್ ಮುಖಂಡರು ಸೊಪ್ಪು ಹಾಕುತ್ತಿಲ್ಲ. ಅದಕ್ಕೋ ಏನೋ, ದೇವೇಗೌಡ್ರು, ಮಂಡ್ಯದಲ್ಲಿ 'ಮೈತ್ರಿಧರ್ಮ' ಔಟ್ ಆಫ್ ಕಂಟ್ರೋಲ್ ಎಂದು ಹೇಳಿರುವುದು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊನ್ನೆ ರಾಜ್ಯದಲ್ಲಿ ಮೂರು ಚುನಾವಣಾ ಪ್ರಚಾರ ಮಾಡಿ ಹೋಗಿದ್ದಾರೆ. ಅದರಲ್ಲಿ ಮಂಡ್ಯ ಲೋಕಸಭಾ ವ್ಯಾಪ್ತಿಯ ಕೆ ಆರ್ ನಗರವೂ ಒಂದು. ದೇವೇಗೌಡ್ರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಎಲ್ಲರೂ ಹಾಜರಿದ್ದು, ಮೈತ್ರಿಧರ್ಮವನ್ನು ಭರ್ಜರಿಯಾಗಿ ಪಾಲಿಸಿದ್ದರು.
ಕೋಲಾರದಲ್ಲಿ ರಾಹುಲ್ ಬಂದು ಹೋದನಂತರ ವೇದಿಕೆಗೆ ಆಗಮಿಸಿದ್ದ ಕುಮಾರಸ್ವಾಮಿ, ಕೆ ಆರ್ ನಗರದಲ್ಲೂ ಸುಮಾರು ನಲವತ್ತು ನಿಮಿಷ ರಾಹುಲ್ ಗಾಂಧಿಯವರನ್ನು ಕಾಯಿಸಿದರು. ಹೆಲಿಕಾಪ್ಟರ್ ಸಮಸ್ಯೆ ಎಂದು ದೇವೇಗೌಡ್ರು, ರಾಹುಲ್ ಕ್ಷಮೆಯನ್ನು ಯಾಚಿಸಿದರು. ಆದರೆ, ಕೆ ಆರ್ ನಗರದ ಸಾರ್ವಜನಿಕ ಸಭೆಯಲ್ಲಿ, ಕಾಂಗ್ರೆಸ್ ಭಿನ್ನಮತ ಸ್ಪಷ್ಟವಾಗಿ ಜಗಜ್ಜಾಹೀರಾಗಿ ಹೋಯಿತು.
ಎರಡೂ ಪಕ್ಷದ ಮುಖಂಡರು ಕೈಕೈಹಿಡಿದು ಕೊಂಡು ಕ್ಯಾಮೆರಾಗೆ ಫೋಸ್ ಏನೋ ಕೊಟ್ಟರೂ, ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಗೈರು ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಕುಮಾರಸ್ವಾಮಿಯವರ ವಿರುದ್ದ ತಿರುಗಿಬಿದ್ದಿರುವ, ಅವರ ಹಳೆಯ ಸ್ನೇಹಿತರು ರಾಹುಲ್ ಕಾರ್ಯಕ್ರಮಕ್ಕೂ ಬರಲಿಲ್ಲ. ಇವರ ಕ್ಷೇತ್ರಗಳು, ಜೆಡಿಎಸ್ ಪಾಲಿಗೆ ಅತ್ಯಂತ ನಿರ್ಣಾಯಕ.

ಸಿದ್ದರಾಮಯ್ಯ, ಕೆ ಸಿ ವೇಣುಗೋಪಾಲ್ ನಿರ್ದೇಶನಕ್ಕೂ ಬೆಲೆಸಿಗಲಿಲ್ಲ
ಸಾಮಾನ್ಯವಾಗಿ ಕೊಟ್ಟ ಕೆಲಸವನ್ನು ಸರಿಯಾಗಿ ನಿಭಾಯಿಸುವ ಡಿ ಕೆ ಶಿವಕುಮಾರ್ ಕೂಡಾ, ಮಂಡ್ಯ ಕಾಂಗ್ರೆಸ್ ಅತೃಪ್ತರನ್ನು ಸರಿದಾರಿಗೆ ತರುವಲ್ಲಿ ವಿಫಲರಾದರು. ಸಿದ್ದರಾಮಯ್ಯ, ಕೆ ಸಿ ವೇಣುಗೋಪಾಲ್ ನಿರ್ದೇಶನಕ್ಕೂ ಬೆಲೆಸಿಗಲಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆಗೆ ಹಾಜರಾಗುತ್ತೇವೆ ಎಂದಿದ್ದವರೂ ಗೈರಾಗಿ, ಕಾಂಗ್ರೆಸ್ ಮುಖಂಡರು ಮುಜುಗರ ಎದುರಿಸಬೇಕಾಗಿ ಬಂತು. ರವಿಕುಮಾರ್ ಗಣಿಗ ಮಾತ್ರ ರಾಹುಲ್ ಸಭೆಯಲ್ಲಿ ಹಾಜರಿದ್ದರು.

ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡೆಸಿದ್ದೇಗೌಡ
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸದೇ ಇರುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡೆಸಿದ್ದೇಗೌಡ ಸೇರಿದಂತೆ ಹಲವು ಮುಖಂಡರು ರಾಹುಲ್ ಸಭೆಯಿಂದ ದೂರವುಳಿದಿದ್ದರು. ಒಂದು ಹಂತದಲ್ಲಿ ಸಿದ್ದರಾಮಯ್ಯ ಈ ಮೂವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರೂ, ನಾನು ಸ್ವಾಭಿಮಾನ ಬಿಟ್ಟು, ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ ಎನ್ನುವ ಕುಮಾರಸ್ವಾಮಿಯವರ ಹೇಳಿಕೆಯಿಂದಾಗಿ ಈ ಮೂವರು ಮತ್ತೆ ದೂರವಾದರು.

ಕ್ಷೇತ್ರದ ಪ್ರಭಾವಿ ಯುವ ಮುಖಂಡ ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಸೆಂಬ್ಲಿ ಕ್ಷೇತ್ರವನ್ನು ಜೆಡಿಎಸ್ ಗೆದ್ದಿದ್ದರೂ, ನಾಗಮಂಗಲ (ಚೆಲುವರಾಯಸ್ವಾಮಿ), ಮಳವಳ್ಳಿ (ನರೇಂದ್ರಸ್ವಾಮಿ) ಮತ್ತು ಶ್ರೀರಂಗಪಟ್ಟಣ (ರಮೇಶ್ ಬಂಡೆಸಿದ್ದೇಗೌಡ) ಕ್ಷೇತ್ರದ ವೋಟ್, ನಿಖಿಲ್ ಕುಮಾರಸ್ವಾಮಿಗೆ ಅತ್ಯಂತ ನಿರ್ಣಾಯಕ. ಮೇಲುಕೋಟೆಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಿ ಎಸ್ ಪುಟ್ಟರಾಜು ವಿರುದ್ದ ಸೋತಿದ್ದ ಕ್ಷೇತ್ರದ ಪ್ರಭಾವಿ ಯುವ ಮುಖಂಡ ದರ್ಶನ್ ಪುಟ್ಟಣ್ಣಯ್ಯ ತಮ್ಮ ಬೆಂಬಲವನ್ನು ಈಗಾಗಲೇ ಸುಮಲತಾಗೆ ಘೋಷಿಸಿದ್ದಾರೆ.

ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಮೇಲುಕೋಟೆ
ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿ ಮೂವರು ಅತೃಪ್ತ ಕಾಂಗ್ರೆಸ್ ಮುಖಂಡರು ಜೆಡಿಎಸ್ ವಿರುದ್ದ ಕಾರ್ಯತಂತ್ರ ರೂಪಿಸಿದರೆ, ಇದು ನಿಖಿಲ್ ಕುಮಾರಸ್ವಾಮಿಗೆ ಭಾರೀ ಏಟು ಬೀಳುವ ಸಾಧ್ಯತೆಯಿದೆ. ಮೈತ್ರಿಧರ್ಮವನ್ನು ಈಗಾಗಲೇ ಇವರುಗಳು ಧಿಕ್ಕರಿಸಿರುವುದರಿಂದ, ಆ ಮೂರು ಕ್ಷೇತ್ರಗಳಲ್ಲಿ ಮತ್ತು ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಸುಮಲತಾ ಪರ ಇರುವುದರಿಂದ, ಮಿಕ್ಕ ನಾಲ್ಕು ಕ್ಷೇತ್ರಗಳಲ್ಲಿನ ಕಾಂಗ್ರೆಸ್-ಜೆಡಿಎಸ್ ಮತಬ್ಯಾಂಕ್ ನಿಖಿಲ್ ಪಾಲಿಗೆ ನಿರ್ಣಾಯಕವಾಗಲಿದೆ.

ಸಿದ್ದರಾಮಯ್ಯ ಜೊತೆ ಕುಮಾರಸ್ವಾಮಿ ಮಾತನಾಡಲೇಬೇಕು
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು ಆದರೂ ಸಿದ್ದರಾಮಯ್ಯ ಜೊತೆ ಕುಮಾರಸ್ವಾಮಿ ಮಾತನಾಡಲೇಬೇಕು. ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರ ಅವಶ್ಯಕತೆ ಇದೆಯೇ ಹೊರತು ನನ್ನ ಅವಶ್ಯಕತೆ ಇಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದರು. ರಾಹುಲ್ ಗಾಂಧಿ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರೂ, ಚೆಲುವರಾಯಸ್ವಾಮಿ ಗೈರಾಗಿದ್ದರು. ಆದರೆ, ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರ ಕೋಪ, ಸ್ವಲ್ಪಮಟ್ಟಿಗೆ ಕಮ್ಮಿಯಾದಂತಿದೆ.












Click it and Unblock the Notifications