Makar Sankranti 2023: ಸಕ್ಕರೆ ನಾಡು ಮಂಡ್ಯದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಹೇಗಿದೆ?, ಇಲ್ಲಿದೆ ವಿವರ
ಮಂಡ್ಯ, ಜನವರಿ, 15: ವರ್ಷದ ಪ್ರಾರಂಭದ ಹಬ್ಬಗಳಲ್ಲೊಂದಾಗಿರುವ ಸುಗ್ಗಿ ಹಬ್ಬ ಸಂಕ್ರಾತಿಯನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಿಂದಾಗಿ ನಿರೀಕ್ಷಿತ ಬೆಳೆ ಕೈ ಸೇರಿದ್ದು, ರೈತ ಸಮುದಾಯಕ್ಕೆ ಸುಗ್ಗಿ ತಂದರೆ, ಮಹಿಳೆಯರಿಗೆ ಎಳ್ಳು-ಬೆಲ್ಲ ಹಂಚಿ ಸಂತೋಷ ಪಡುವ ಹಬ್ಬವೂ ಆಗಿದೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬದ ಅದ್ಧೂರಿ ಸಂಭ್ರಮ ಎದ್ದು ಕಾಣುತ್ತಿದೆ.
ಹಳ್ಳಿಗಳಲ್ಲಿ ರೈತನ ಕೃಷಿ ಸಂಗಾತಿ ರಾಸುಗಳನ್ನು ಸ್ವಚ್ಛಗೊಳಿಸಿ ಕೊಂಬಿಗೆ ಬಣ್ಣ ಹಚ್ಚುವುದು, ಕಿಚ್ಚು ಹಾಯಿಸುವ ದೃಶ್ಯ ಸಾಮಾನ್ಯವಾಗಿದ. ಅದೇ ರೀತಿ ಪಟ್ಟಣ ಪ್ರದೇಶದಲ್ಲಿ ಬಣ್ಣದ ರಂಗೋಲಿ ಬಿಟ್ಟು, ಎಳ್ಳು-ಬೆಲ್ಲ ಹಂಚಿಕೆ ಮಾಡುವ ಸಡಗರವೂ ನಡೆಯುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಜನರು ಹಬ್ಬವನ್ನು ಸಂತಸದಿಂದ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ನಗರದ ಪೇಟೆ ಬೀದಿ, ಹಳೇ ಎಂಸಿ.ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರು ಹಬ್ಬದ ಖರೀದಿ ಭರಾಟೆಯಲ್ಲಿ ನಿರತರಾಗಿದ್ದರು. ಇನ್ನು ರೈತರು ಜಾನುವಾರುಗಳಿಗೆ ಹೊಸ ಹಗ್ಗ, ಕರಿದಾರ, ಗೆಜ್ಜೆ, ಕೊರಳಿಗೆ ಕಟ್ಟುವ ಗಂಟೆ, ಗೊಂಡದ ಹಾರ, ಚಗರೆಯಿಂದ ಮಾಡಿದ ಹಗ್ಗ ಸೇರಿದಂತೆ ಅವುಗಳನ್ನು ಸಿಂಗರಿಸುವ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
Makar Sankranti 2023: ಮಕರ ಸಂಕ್ರಾಂತಿ ಹಬ್ಬವನ್ನು ಏಕೆ ಆಚರಣೆ ಮಾಡುತ್ತಾರೆ?; ವಿಶೇಷತೆ ಏನು?, ಇಲ್ಲಿದೆ ವಿವರ
ಮಾರುಕಟ್ಟೆಯಲ್ಲಿ ರೈತರದ್ದೇ ದರ್ಬಾರ್
ಗ್ರಾಮೀಣ ಮಹಿಳೆಯರು ಹಣ್ಣು, ತರಕಾರಿ, ಹೂವು, ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿಗಳು, ಎಳ್ಳು- ಬೆಲ್ಲ, ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣ ಸೇವೆ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ತಗೆದುಕೊಂಡರು. ಜಾನುವಾರುಗಳಿಗೆ ಕಟ್ಟುವ ಹಗ್ಗ ಮೂಗುದಾರಕ್ಕೆ 20 ರಿಂದ 40 ರೂಪಾಯಿ, ಉದ್ದನೆಯ ಹಗ್ಗ ಕನಿಷ್ಠ 70 ರಿಂದ 200 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಹಸುವಿನ ಕೊರಳಿಗೆ ಕಟ್ಟುವ ಗಂಟೆ ಸಣ್ಣ ಗಾತ್ರದಿಂದ ದೊಡ್ಡ ಗಾತ್ರದವರೆಗೆ ಕನಿಷ್ಠ 10 ರಿಂದ 100 ರೂಪಾಯಿವರೆಗೆ ಇತ್ತು. ಕೊರಳಿಗೆ ಕಟ್ಟುವ ವಿವಿಧ ಗಾತ್ರದ ಗಂಟೆಗಳನ್ನು ಒಳಗೊಂಡ ಹಗ್ಗದ ಜೊತೆಗೆ 300 ರೂಪಾಯಿನಿಂದ 400 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು.
ಹುರಿ-70 ರೂಪಾಯಿ, ಕರಿದಾರ-20 ರೂಪಾಯಿ, ಕತ್ತಿನ ಹುರಿ-50 ರೂಪಾಯಿ, ದುಂಡೆ ಹುರಿ-20 ರೂಪಾಯಿ, ಪ್ಲಾಸ್ಟಿಕ್ ಹಾರ 120 ರೂ., ಕೊಂಡೆ ಜೊತೆ 80 ರೂಪಾಯಿ, ಕುಚ್ಚು-500 ರೂಪಾಯಿ, ಕೊಂಬಿಗೆ ಹಾಕುವ ಹನ್ಸ್ ಜೊತೆಗೆ 120 ರೂಪಾಯಿವರೆಗೆ ಮಾರಾಟವಾಗುತ್ತಿತ್ತು.
ಮಕರ ಸಂಕ್ರಾತಿಗೆ ಮಂಕಾದ ಕರಿ ಕಬ್ಬು ಮಾರಾಟ: ಸಂಕಷ್ಟದಲ್ಲಿ ರೈತ ವರ್ಗ
ಹೂ, ಹಣ್ಣಿನ ದರದ ಸಂಪೂರ್ಣ ವಿವರ
ಹಬ್ಬದ ಕಾರಣದಿಂದ ಹೂವಿನ ಬೆಲೆ ಗಗನಮುಖಿಯಾಗಿತ್ತು. ವಿವಿಧ ಮಾದರಿಯ ಹೂವು 80 ರಿಂದ 100 ರೂಪಾಯಿವರೆಗೆ ನಿಗದಿಯಾಗಿತ್ತು. ಸೇವಂತಿಗೆ ಪ್ರತಿ ಮಾರು 60 ರಿಂದ 70 ರೂ., ಕೆ.ಜಿ. ಕನಕಾಂಬರ 400 ರೂ., ಕೆ.ಜಿ. ಕಾಕಡ 700 ರೂ., ಕೆ.ಜಿ. ಮಲ್ಲಿಗೆ 1500 ರೂ., ಕೆ.ಜಿ. ಮರಳೆ 1,000 ರೂ., ಕೆ.ಜಿ. ಚೆಂಡು ಹೂವು 50 ರೂ., ಕೆ.ಜಿ. ಬಟಾನ್ ರೋಸ್ ಕೆಜಿ 300 ರೂಪಾಯಿ ಇತ್ತು.
ಅದೇ ರೀತಿ ಸೇಬು ಕೆ.ಜಿ.ಗೆ 100 ರಿಂದ 120 ರೂ., ದ್ರಾಕ್ಷಿ ಕೆ.ಜಿ. 140 ರೂ., ದಾಳಿಂಬೆ ಕೆ.ಜಿ. 160 ರೂ., ಸಪೋಟ 50 ರೂ. ಮೂಸಂಬಿ ಕೆ.ಜಿ. 80 ರೂ., ಕಿತ್ತಳೆಹಣ್ಣು ಕೆ.ಜಿ. 80 ರೂಪಾಯಿ., ಬಾಳೆಹಣ್ಣು ಕೆ.ಜಿ. 60 -70 ರೂ., ಮಿಕ್ಸ್ ಹಣ್ಣು ಕೆ.ಜಿ. 140 ರೂಪಾಯಿಗೆ ಮಾರಾಟವಾಗುತ್ತಿತ್ತು.
ಎಲ್ಲಾ ರೀತಿಯ ತರಕಾರಿ ಬೆಲೆಯ ವಿವರ
ಹಬ್ಬದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಮಾಮೂಲಿ ದಿನಗಳಂತಿತ್ತು. ಅವರೆಕಾಯಿ ಕೆ.ಜಿ.ಗೆ 100 ರೂ., ಹುರುಳಿಕಾಯಿ 60 ರೂ., ಬದನೆಕಾಯಿ ಕೆ.ಜಿ. 40 ರೂ., ಗೆಡ್ಡೆಕೋಸು ಕೆ.ಜಿ. 40 ರೂ., ಬೀಟ್ರೋಟ್ ಕೆ.ಜಿ. 40 ರೂ., ಕ್ಯಾರೆಟ್ ಕೆ.ಜಿ. 40 ರೂ., ಈರೇಕಾಯಿ ಕೆ.ಜಿ. 30 ರೂಪಾಯಿಗೆ ಮಾರಾಟವಾಗುತ್ತಿತ್ತು.
ಗ್ರಾಮೀಣ ಪ್ರದೇಶದ ಜನರು ಹಬ್ಬದ ಒಂದು ದಿನ ಮುಂಚಯೇ ಜಾನುವಾರುಗಳ ಮೈ ತೊಳೆದು, ಕೊಂಬುಗಳನ್ನು ಸವರಿ ನುಣುಪಾಗಿಸಿ ವಿಶೇಷ ಮೆರುಗು ಬರುವಂತೆ ಮಾಡುವ ಕಾರ್ಯ ನಡೆಸಿದ್ದರು. ದನ-ಕರುಗಳನ್ನು ಸಿಂಗಾರಕ್ಕೆ ಸಿದ್ಧತೆ ನಡೆಸಿದ್ದಿರು. ಇನ್ನು ನಗರ ಪ್ರದೇಶದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ತಯಾರಿಯಲ್ಲಿ ತೊಡಗಿಸಿಕೊಂಡು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದರು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಹಬ್ಬದ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಹೆಣ್ಣು ಮಕ್ಕಳು ಹೊಸಬಟ್ಟೆಯನ್ನು ತೊಟ್ಟು, ಎಳ್ಳು-ಬೆಲ್ಲ ವಿನಿಮಯ ಮಾಡುವ ಸಂಭ್ರಮದಲ್ಲಿದ್ದರು.
ಎಳ್ಳು-ಬೆಲ್ಲ ಖರೀದಿಗೆ ಮುಗಿಬಿದ್ದ ಜನ
ಪೇಟೆ ಬೀದಿಯ ಪ್ರಮುಖ ಸ್ಥಳಗಳಲ್ಲಿ ಎಳ್ಳು-ಬೆಲ್ಲ ವ್ಯಾಪಾರದ ಭರಾಟೆ ಜೋರಾಗಿತ್ತು. ಸಕ್ಕರೆ ಅಚ್ಚು, ಬೆಲ್ಲದ ಅಚ್ಚು, ಜೀರಿಗೆ ಕಾಳು, ಕಲ್ಯಾಣ ಸೇವೆಗೆ ಹೆಚ್ಚಿನ ಬೇಡಿಕೆ ಇತ್ತು. ಬಿಳಿ ಎಳ್ಳು ಕೆ.ಜಿ. 240 ರೂ., ಅಚ್ಚು ಬೆಲ್ಲ 1ಕ್ಕೆ 8 ರೂ., ಕೆ.ಜಿ.ಗೆ 60ರೂಪಾಯಿ ಇತ್ತು. ಹಾಗೆಯೇ ಸಕ್ಕರೆ ಅಚ್ಚು ಕೆ.ಜಿ. 200 ರೂಪಾಯಿ, ಕೊಬ್ಬರಿ ಕೆ.ಜಿ. 350 ರೂ., ಸಿದ್ಧಪಡಿಸಿರುವ ಎಳ್ಳು-ಬೆಲ್ಲ ಕೆ.ಜಿ.ಗೆ 320 ರೂ. ಇದ್ದರೆ, ಗೆಣಸು ಕೆ.ಜಿ. 40 ರೂ., ಸೇರು ಕಡಲೇಕಾಯಿ 40 ರೂಪಾಯಿಗೆ ಮಾರಾಟವಾಗುತ್ತಿತ್ತು. ಸಂಕ್ರಾಂತಿಯ ಮತ್ತೊಂದು ವಿಶೇಷ ಕಬ್ಬು ಆಗಿದೆ. ಕಬ್ಬಿನ ಜೊಲ್ಲೆಗಳನ್ನು ಇಟ್ಟುಕೊಂಡು ರೈತರು ವ್ಯಾಪಾರದಲ್ಲಿ ನಿರತರಾಗಿದ್ದರು. ಸೊಗಸಾಗಿ ಬೆಳೆದು ಕಬ್ಬಿನ ರಸವನ್ನು ತುಂಬಿಕೊಂಡಿದ್ದ ಒಂದು ಕಬ್ಬಿನ ಜೊಲ್ಲೆ 50 ರೂಪಾಯಿಗೆ ಮಾರಾಟ ಮಾಡಲಾಗಿತ್ತು.