ಬಸ್ತಿ ಗೊಮ್ಮಟನಿಗೆ ಸಂಭ್ರಮದ ಮಹಾಮಸ್ತಕಾಭಿಷೇಕ
ಕೆ.ಆರ್.ಪೇಟೆ, ಫೆಬ್ರುವರಿ 3: ಪ್ರತಿ ವರ್ಷದಂತೆ ಈ ಬಾರಿಯೂ ತಾಲೂಕಿನ ಬೂಕನಕೆರೆ ಹೋಬಳಿಯ ಮಾವಿನಕೆರೆ-ಬಸ್ತಿಹೊಸಕೋಟೆ ಗ್ರಾಮದ ಬಳಿಯಿರುವ 18 ಅಡಿ ಎತ್ತರದ ಬಸ್ತಿ ಗೊಮ್ಮಟೇಶ್ವರ ಮೂರ್ತಿಗೆ ಮಹಾಮಸ್ತಕಾಭಿಷೇಕವನ್ನು ಭಾನುವಾರ ವಿಜೃಂಭಣೆಯಿಂದ ನಡೆಸಲಾಯಿತು.
ಬಸದಿ ಹೊಸಕೋಟೆ ಭಗವಾನ್ ಬಾಹುಬಲಿ ದಿಗಂಬರ ಜೈನ್ ಟ್ರಸ್ಟ್ ಆಶ್ರಯದಲ್ಲಿ ಕನಕಗಿರಿ ಕ್ಷೇತ್ರದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿ, ಆರತೀಪುರ ಜೈನಮಠದ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಹಾಮಸ್ತಕಾಭಿಷೇಕ ನಡೆಸಲಾಯಿತು.
ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭೀಷೇಕ
ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮಹಾಮಸ್ತಕಾಭಿಷೇಕ ನಡೆದು ಗೊಮ್ಮಟಮೂರ್ತಿಗೆ ಆರಂಭದಲ್ಲಿ ಪೂರ್ಣಕುಂಭ, ಕಳಸಾಭಿಷೇಕ, ಜಲಾಭಿಷೇಕ ನಡೆಯಿತು.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಬೆಂಗಳೂರು ಮತ್ತಿತರರ ಕಡೆಗಳಿಂದ ಸಾವಿರಾರು ಜೈನ ಸಮುದಾಯದ ಭಕ್ತಾಧಿಗಳು ಭಾಗವಹಿಸಿ ಮಹಾಮಸ್ತಾಭಿಷೇಕವನ್ನು ಸಾಕ್ಷೀಕರಿಸಿದರು. ಇದಲ್ಲದೆ ಕುರಬರ ಬಸ್ತಿ, ಬಸ್ತಿಹೊಸಹೋಟೆ, ಬಲ್ಲೇನಹಳ್ಳಿ ಮತ್ತಿತರ ಸ್ಥಳೀಯ ಗ್ರಾಮಗಳ ಜನರು ತಾವು ಪ್ರೀತಿಯಿಂದ ಕರೆಯುವ ಶ್ರವಣಪ್ಪ ದೇವರ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸುವ ಮೂಲಕ ಸಂಭ್ರಮವನ್ನು ಹೆಚ್ಚಿಸಿದರು.