ಪ್ರೀತಿಗೆ ಅಡ್ಡಿ, ಪತಿ ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ ಸೇರಿ ನಾಲ್ವರ ಬಂಧನ
ಮದ್ದೂರು, ಜೂನ್ 18 : ಪತಿಯನ್ನು ಹತ್ಯೆಗೈಯ್ಯಲು ಸುಫಾರಿ ನೀಡಿದ್ದ ಪತ್ನಿ ಸೇರಿದಂತೆ ನಾಲ್ವರನ್ನು ಶನಿವಾರ ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದ ನಿವಾಸಿ ಶಿಲ್ಪಾ (17), ಆಕೆಯ ಪ್ರಿಯಕರ ಸತೀಶ್ (24), ನಂದನ್ ಅಲಿಯಾಸ್ ಬಿಜೆಪಿ ಅರುಣ (19) ಹಾಗೂ ಕಾಂತರಾಜು (20) ಬಂಧಿತರು.
ಪೊಲೀಸರು ತೂಬಿನಕೆರೆ ರೇಣುಕಾ ಪ್ರಸಾದ್ ಕೊಲೆ ಪ್ರಕರಣದ ಬೆನ್ನತ್ತಿ ತನಿಖೆ ನಡೆಸಿದ ವೇಳೆ ಹತ್ಯೆಗೆ ಪತ್ನಿ ಶಿಲ್ಪಾ ಸುಫಾರಿ ನೀಡಿದ್ದು ಬೆಳಕಿಗೆ ಬಂದಿದೆ.
ರೇಣುಕಾ ಪ್ರಸಾದ್ ಈ ಹಿಂದೆ ಟೊಯೋಟೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನಾದರೂ ಬಳಿಕ ಆ ಕೆಲಸ ಬಿಟ್ಟು ಖಾಸಗಿಯಾಗಿ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದನು.
ಆದರೆ, ಪತ್ನಿ ಶಿಲ್ಪಾ ವಿವಾಹಕ್ಕೆ ಮುನ್ನ ಅಭಿಲಾಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದಾದ ಬಳಿಕ ಸತೀಶ್ ಎಂಬಾತನ ಪರಿಚಯವಾಗಿ ಆತನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಮನೆಯವರು ಶಿಲ್ಪಾಳಿಗೆ ರೇಣುಕಾ ಪ್ರಸಾದ್ ಜತೆ ಬಲವಂತವಾಗಿ ಮದುವೆ ಮಾಡಿದ್ದರಂತೆ.
ಮದುವೆಯ ನಂತರ ಗಂಡನೊಂದಿಗೆ ಒಲ್ಲದ ಮನಸ್ಸಿನೊಂದಿಗೆ ಇದ್ದ ಆಕೆ ತನ್ನ ಪ್ರಿಯಕರ ಸತೀಶ್ ಜತೆ ಗುಪ್ತವಾಗಿ ಸಂಬಂಧ ಮುಂದುವರೆಸಿದ್ದಳು. ಆದರೆ, ಅದು ಗಂಡನಿಗೆ ತಿಳಿದು ಇಬ್ಬರ ನಡುವೆ ಜಗಳವಾಗಿತ್ತು.
ಗಂಡನಿಗೆ ವಿಷಯ ಗೊತ್ತಾದ ಬಳಿಕ ಪತ್ನಿ ಶಿಲ್ಪಾ ಇನ್ನು ಮುಂದೆ ತನ್ನ ಮತ್ತು ಸತೀಶ್ ನಡುವಿನ ಸಂಬಂಧಕ್ಕೆ ತೊಂದರೆಯಾಗುತ್ತೆ ಎಂಬ ಉದ್ದೇಶದಿಂದ ಗಂಡನನ್ನು ಹತ್ಯೆಗೈಯ್ಯುವ ನಿರ್ಧಾರ ಮಾಡಿ ಸುಫಾರಿ ನೀಡಿದ್ದಳು.
ಇದರ ಮುಂದಾಳತ್ವ ಪ್ರಿಯಕರ ಸತೀಶ್ ವಹಿಸಿದ್ದು ತನ್ನ ಸ್ನೇಹಿತರಾದ ಭೈರಾಪಟ್ಟಣದ ನಂದನ್, ಕಾಂತರಾಜು ಅವರಿಗೆ ಹಣ ನೀಡಿ ಜೂನ್ 13ರಂದು ರಾತ್ರಿ 8 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ನಿಡಘಟ್ಟಕ್ಕೆ ರೈಲಿನಲ್ಲಿ ರೇಣುಕಾ ಪ್ರಸಾದ್ ಬಂದಿಳಿದ ವೇಳೆ ಅಲ್ಲಿಗೆ ಬಂದ ಆರೋಪಿಗಳು ಕೆಲಸದ ವಿಚಾರವಾಗಿ ಮಾದನಾಯಕನಹಳ್ಳಿ-ಕುಕ್ಕೂರು ದೊಡ್ಡಿ ಸಮೀಪದ ಚಂದಹಳ್ಳಿ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆಗೈದು, ಆತನ ಮೈಮೇಲಿದ್ದ ಚಿನ್ನದ ಸರ, ಉಂಗುರವನ್ನು ಕಿತ್ತಿಕೊಂಡಿದ್ದಲ್ಲದೆ, ಬಟ್ಟೆ ತೆಗೆದು ಬೆತ್ತಲೆ ಮಾಡಿ ಬಳಿಕ ಹೆಣವನ್ನು ಅರಣ್ಯ ಇಲಾಖೆಯವರು ತೆಗೆಸಿದ್ದ ನೀರಿನ ಇಂಗುಗುಂಡಿಗೆ ಹಾಕೊ ಗುರುತು ಸಿಗದಂತೆ ಮಾಡಿದ್ದರು.
ಇಂಗುಗುಂಡಿಯಲ್ಲಿ ಸಿಕ್ಕಿದ ಶವದ ಪರಿಶೀಲನೆ ನಡೆಸಿದಾಗ ಅದು ರೇಣುಕಾಪ್ರಸಾದ್ ಅವರ ಶವ ಎಂಬುದು ತಿಳಿದು ಬಂದಿತ್ತಲ್ಲದೆ, ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಮದ್ದೂರು ಪೊಲೀಸರು ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಎಚ್.ಸುಧೀರ್ಕುಮಾರ್ ರೆಡ್ಡಿ ಹಾಗೂ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ತಂಡ ಪತ್ನಿ ಶಿಲ್ಪಾಳನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯವನ್ನು ಆಕೆ ಬಾಯಿಬಿಟ್ಟಿದ್ದು, ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಶನಿವಾರ ಸಂಜೆ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.