ಮದ್ದೂರು: ಕೆಫೆ ಪಾರ್ಟಿ ಹೆಸರಿನಲ್ಲಿ ಅಕ್ರಮ ಹುಕ್ಕಾ ಬಾರ್; ಅಧಿಕಾರಿಗಳ ಜಂಟಿ ದಾಳಿ
ಮದ್ದೂರು, ಜನವರಿ, 13: ಕೆಫೆ ಪಾರ್ಟಿ ಹೆಸರಿನಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ಮೇಲೆ ಮಂಡ್ಯ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದು, ಹುಕ್ಕಾಗೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿರುವ ಘಟನೆ ಪಟ್ಟಣದ ಹೊರ ವಲಯದ ಗೊರವನಹಳ್ಳಿ ಗೇಟ್ ಬಳಿ ನಡೆದಿದೆ.
ಅಧಿಕಾರಿಗಳ ದಾಳಿ ವೇಳೆ ಹುಕ್ಕಾ ಸೇವಿಸುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಎಂ.ಡಿ.ಸಂಜಯ್, ಆಹಾರ ಸುರಕ್ಷತಾ ಅಧಿಕಾರಿ ಡಾ. ಬೆಟ್ಟಸ್ವಾಮಿ, ಜಿಲ್ಲಾ ತಂಬಾಕು ಕೋಶಾಧಿಕಾರಿ ತಿಮ್ಮರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್, ಪಿಎಸ್ಐ ಉಮೇಶ್, ಅಬಕಾರಿ ಇನ್ಸ್ಪೆಕ್ಟರ್ ಶಿವಣ್ಣ, ಸಿಡಿಪಿಓ ಪ್ರದೀಪ್ ಹಾಗೂ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಯಂತ್ರಗಳು ಹಾಗೂ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ "ಹುಕ್ಕಾ ಬಾರ್" ದಂಧೆ
ಮೂಲತಃ ಮದ್ದೂರಿನವರಾಗಿರುವ ರಾಮನಗರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನರ್ ತಂತ್ರಜ್ಞನಾಗಿರುವ ಅಭಿ, ಕರಣ್ ಹಾಗೂ ಮೈಸೂರಿನ ಸಂಜಯ್ ಎಂಬುವವರು ಮದ್ದೂರು - ಮಳವಳ್ಳಿ ರಸ್ತೆಯ ಗೊರವನಹಳ್ಳಿ ಗೇಟ್ ಬಳಿ ಕೆಫೆ ಪಾರ್ಟಿ ಹೆಸರಿನಲ್ಲಿ ಉದ್ದಿಮೆ ಪರವಾನಿಗೆ ಪಡೆದಿದ್ದರು. ಅಲ್ಲದೇ ಕಳೆದ ಒಂದು ವರ್ಷದಿಂದ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು ಎನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಹುಕ್ಕಾ ಬಾರ್ಗೆ ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ವಿವಿಧೆಡೆಗಳಿಂದ ಆಗಮಿಸುತ್ತಿದ್ದ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಖಾಯಂ ಆಗಿ ಹುಕ್ಕಾ ಆಗಮಿಸಿ ಹುಕ್ಕಾ ಸೇವನೆ ಮಾಡುತ್ತಿದ್ದರು ಎನ್ನುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ತಂಬಾಕು ಉತ್ಪನ್ನಗಳು ವಶಕ್ಕೆ
ಹುಕ್ಕಾ ಬಾರ್ ನಡೆಸಲು ಗೊರವನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಪಾಲುದಾರರು ಕೆಫೆ ಪಾರ್ಟಿ ಹೆಸರಿನಲ್ಲಿ ಉದ್ದಿಮೆ ಪರವಾನಿಗೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಅಡಿ 9 ಪ್ರಕರಣ ಮತ್ತು ಆಹಾರ ಸುರಕ್ಷತಾ ಕಾಯ್ದೆ ಅಡಿ 7 ಸಾವಿರ ದಂಡ ವಿಧಿಸಿದ್ದಾರೆ. ಹಾಗೂ ಪಾಲುದಾರರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಧಿಕಾರಿಗಳ ತಂಡ ಅಡುಗೆ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಹಳೆ ಎಣ್ಣೆ ಬಾಟಲ್ಗಳು, ಮತ್ತಿತರ ವಸ್ತುಗಳನ್ನು ತಿನಿಸುಗಳನ್ನು ತಯಾರಿಸುತ್ತಿರುವುದು ಕಂಡುಬಂದಿದೆ. ಅಲ್ಲದೇ, ತಂಬಾಕು ಉತ್ಪನ್ನಗಳ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.












Click it and Unblock the Notifications