Breaking; ಮಂಡ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಶಿವರಾಮೇಗೌಡ
ಮಂಡ್ಯ, ಏಪ್ರಿಲ್ 26; ಮಂಡ್ಯ ರಾಜಕೀಯದಲ್ಲಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಸಂಚಲನ ಮೂಡಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡುವ ಸುಳಿವು ಕೊಟ್ಟಿದ್ದಾರೆ.
ಮಂಗಳವಾರ ನಾಗಮಂಗಲದಲ್ಲಿ ಮಾತನಾಡಿದ ಅವರು, "ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳು. ಏಕಕಾಲದಲ್ಲಿ ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ಈಗ ಒದಗಿ ಬಂದಿದೆ" ಎಂದರು.
"ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸರಿ ಹೊಂದಲ್ಲ ಎಂದು ಜನರೇ ಹೇಳುತ್ತಾರೆ. ಪ್ರತಿ ಹಳ್ಳಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ನನಗೆ ಬೆಂಬಲ ಕೊಡುತ್ತಿದ್ದಾರೆ. ಪಕ್ಷೇತರನಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತೀರ್ಮಾನವಾಗಿದೆ" ಎಂದು ಎಲ್. ಆರ್. ಶಿವರಾಮೇಗೌಡ ಹೇಳಿದರು.

ಮಂಡ್ಯದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಕೆಲವು ತಿಂಗಳ ಹಿಂದೆ ಜೆಡಿಎಸ್ನಿಂದ ಉಚ್ಛಾಟನೆಗೊಂಡಿದ್ದರು. ಈಗ ನಾಗಮಂಗಲದಲ್ಲಿ ಅವರು ಮನೆ ಮಾಡುತ್ತಿದ್ದು, 2023ರ ಚುನಾವಣೆಯತ್ತ ಗಮನಹರಿಸಿದ್ದಾರೆ.
"ಈ ಕ್ಷೇತ್ರ ಬಿಟ್ಟು ಹೋಗಲ್ಲ ಎಂಬುದ ಸಂದೇಶ ಸಾರುವ ಉದ್ದೇಶದಿಂದಲೇ ನಾನು ಇಲ್ಲಿ ಮನೆ ಮಾಡುತ್ತಿದ್ದೇನೆ. ಚುನಾವಣೆ ಮುಗಿಯುವ ತನಕ ನಿದ್ದೆ ಮಾಡುವುದಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತೇನೆ" ಎಂದು ಎಲ್. ಆರ್. ಶಿವರಾಮೇಗೌಡ ಘೋಷಣೆ ಮಾಡಿದರು.
"ದೇವೇಗೌಡರು, ಎಚ್. ಡಿ. ಕುಮಾರಸ್ವಾಮಿ ವಿರುದ್ಧ ನನಗೆ ಅಸಮಾಧಾನವಿಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದರು. ಅವರ ಹುನ್ನಾರದ ಖೆಡ್ಡಾಗೆ ನಾನು ಬಿದ್ದೆ. ಕುಮಾರಸ್ವಾಮಿ ಅವರು ಈ ಕುರಿತು ಯೋಚನೆ ಮಾಡಬಹುದಿತ್ತು. ಆದರೆ ತಕ್ಷಣ ನನ್ನನ್ನು ಉಚ್ಛಾಟನೆ ಮಾಡಿದರು" ಎಂದು ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾದ ಬಗ್ಗೆ ಮಾತನಾಡಿದರು.
ನಾಗಮಂಗಲದ ಹಾಲಿ ಶಾಸಕರು ಜೆಡಿಎಸ್ನ ಸುರೇಶ್ ಗೌಡ. ಕ್ಷೇತ್ರದ ಮಾಜಿ ಶಾಸಕರು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ. ಮುಂದಿನ ಚುನಾವಣೆಯಲ್ಲಿ ಈ ಇಬ್ಬರು ನಾಯಕರ ಜೊತೆ ಎಲ್. ಆರ್. ಶಿವರಾಮೇಗೌಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.












Click it and Unblock the Notifications