ನನ್ನನ್ನು ಕೆಟ್ಟದಾಗಿ ಬಿಂಬಿಸಲು ಜೆಡಿಎಸ್ ಸಂಚು: ಸುಮಲತಾ ಅಂಬರೀಷ್ ಗಂಭೀರ ಆರೋಪ
Recommended Video

ಮಂಡ್ಯ, ಏಪ್ರಿಲ್ 9: ಜೆಡಿಎಸ್ನವರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕುಟುಂಬವನ್ನು ಕೆಟ್ಟದಾಗಿ ಬಿಂಬಿಸಲು ಸಂಚು ರೂಪಿಸಲಾಗಿದೆ ಎಂದು ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.
ನನ್ನ ಫೋಟೊಗಳನ್ನು ವಿರೂಪಗೊಳಿಸಲು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಪಪ್ರಚಾರ ನಡೆಸಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ತಮ್ಮ ಸಾಮಾಜಿಕ ಜಾಲತಾಣದ ಇಬ್ಬರನ್ನು ಸಂಪರ್ಕಿಸಲಾಗಿದೆ. ಅವರಿಗೆ ಒಂದು ಲಕ್ಷ ಸೈಟು ಮತ್ತು 15 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಆಮಿಷವೊಡ್ಡಲಾಗಿದೆ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಜೆಡಿಎಸ್ನ ಅತ್ಯಂತ ಪ್ರಮುಖ ಮೂಲದಿಂದ ನನಗೆ ಮಾಹಿತಿ ಬಂದಿದೆ. ಈ ರೀತಿ ಹೇಳಿಕೆ ನೀಡಿ, ಬಳಿಕ ವಿದೇಶಕ್ಕೆ ಹೋಗಿ ಇರಿ. ಇಲ್ಲಿ ನಡೆದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಅವರ ಮನೆಯವರೂ ನನಗೆ ಮಾಹಿತಿ ನೀಡಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

ಯಶ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಿಖಿಲ್ ವಿರುದ್ಧ ಸುಮಲತಾ ಹರಿಹಾಯ್ದರು. ನಿಖಿಲ್ ಅತಿರೇಕದ ಮಾತುಗಳನ್ನು ಆಡುತ್ತಿದ್ದಾರೆ. ಯಶ್ ಬಗ್ಗೆ ಅವರು ಆಡಿದ ಮಾತುಗಳು ಬೇಕಿರಲಿಲ್ಲ. ಅವರ ವಯಸ್ಸು ಚಿಕ್ಕದಿದೆ. ಅವರೂ ಕೂಡ ಸಿನಿಮಾ ಉದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾ ಮಾಡಿದ್ದಾರೆ. ಈಗಾಗಲೇ ಸಿನಿಮಾ ರಂಗದಲ್ಲಿ ಹಿರಿಯರಾಗಿ ಸಾಧನೆ ಮಾಡಿರುವವರಿಗೆ ಗೌರವ ನೀಡದೆ ಇರುವುದು ಅಹಂಕಾರ ತೋರಿಸುತ್ತದೆ. ಅವರ ಸಾಧನೆಗಳನ್ನು ಗೌರವಿಸಲಿ. ವೈಯಕ್ತಿಕೆ ಟೀಕೆ ಬೇಡ. ನಾವು ಅವರ ಬಗ್ಗೆ ಮಾತನಾಡುವುದು ಕಷ್ಟವಲ್ಲ. ಆದರೆ ವೈಯಕ್ತಿಕವಾಗಿ ಮಾತನಾಡುವುದಿಲ್ಲ ಎಂದು ಸುಮಲತಾ ಹೇಳಿದರು.
ತಮಗೆ ಪೈಪೋಟಿ ನೀಡಲು ಸ್ಪರ್ಧಿಸುತ್ತಿರುವ ತಮ್ಮದೇ ಹೆಸರಿನ ಪಕ್ಷೇತರ ಅಭ್ಯರ್ಥಿ ಶ್ರೀರಂಗಪಟ್ಟಣದ ಸುಮಲತಾ ಅವರ ಮನೆಯ ಮುಂದೆಯೇ ಸುಮಲತಾ ಅಂಬರೀಷ್ ಪ್ರಚಾರ ನಡೆಸಿದರು.












Click it and Unblock the Notifications