ಮಂಡ್ಯ ಜೆಡಿಎಸ್ ಅಭ್ಯರ್ಥಿ: ಇರೋ ಗೊಂದಲ ಸಾಲದ್ದಕ್ಕೆ ಇನ್ನೊಬ್ಬರ ಎಂಟ್ರಿ
Recommended Video
IRS ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ತಮ್ಮ ಸೇವೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ಇದು ಆಗದೇ ಇದ್ದಾಗ, ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೂ ವಿಫಲ ಪ್ರಯತ್ನ ನಡೆಸಿದ್ದರು. ಇದೊಂದು ಕಡೆ.
ಇನ್ನೊಂದೆಡೆ, ಶಿವರಾಮೇ ಗೌಡರು ಕೂಡಾ ದೇವೇಗೌಡರ ಹಿಂದೆ ಬಿದ್ದು ಕೊನೆಗೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಯಾರಿಗೂ ಬೇಡವಾಗಿದ್ದ ಆ ಉಪಚುನಾವಣೆಯಲ್ಲಿ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರಿಂದ, ಶಿವರಾಮೇ ಗೌಡರು ಭಾರೀ ಅಂತರಗಳಿಂದ ಜಯಶಾಲಿಯಾಗಿದ್ದರು. ಬಿಜೆಪಿ ಪಡೆದ ಮತವೂ ಇಲ್ಲಿ ಗಮನಾರ್ಹವಾಗಿತ್ತು.
ಲೋಕಸಭೆಗೆ ಸ್ಪರ್ಧೆ: ಕುಮಾರಸ್ವಾಮಿ ಪುತ್ರ ನಿಖಿಲ್ ಹೇಳಿದ್ದೇನು?
ಅಂದು ಶಿವರಾಮೇ ಗೌಡರಿಗೆ ಯಾಕೆ ಟಿಕೆಟ್ ನೀಡಿದ್ರಿ ಎಂದು ಕೇಳಿದಾಗ, 'ಹೇಗೂ ಐದಾರು ತಿಂಗಳಿಗೆ ನಡೆಯುವ ಚುನಾವಣೆ, ಅವನು ನೊಂದಿದ್ದಾನೆ ಬೇರೆ' ಎಂದು ದೇವೇಗೌಡ್ರು ತಮ್ಮ ಕುಟುಂಬಸ್ಥರಲ್ಲಿ ಹೇಳಿದ್ದರು ಎಂದು ವರದಿಯಾಗಿತ್ತು.
ಸುಮಲತಾ ಅಂಬರೀಶ್ಗೆ ಮಂಡ್ಯ ಟಿಕೆಟ್: ಸಿದ್ದರಾಮಯ್ಯ ಪ್ರತಿಕ್ರಿಯೆ
ಈಗ ಕಾಂಗ್ರೆಸ್, ಮಂಡ್ಯ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಬೇಕು ಎಂದು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ತುದಿಗಾಲಿನಲ್ಲಿ ನಿಂತಿದೆ. ಈಗ, ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹಾಲೀ ಸಂಸದರು ಹೇಳಿರುವುದು, ಜೆಡಿಎಸ್ ಅನ್ನು ಚಿಂತೆಗೀಡುಮಾಡಿದೆ.
ದೇವೇಗೌಡರ ಮಾತುಕತೆ ಫಲಪ್ರದ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಮಾತುಕತೆ ನಡೆಸಿ, ಎಂಟು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ ಎನ್ನುವ ದೇವೇಗೌಡರ ಮಾತುಕತೆ ಫಲಪ್ರದವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದರಂತೆಯೇ, ಜೆಡಿಎಸ್ ಕೂಡಾ, ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಎಂಟ್ರಿ ಕೊಡಲು ಭರ್ಜರಿ ಸಿದ್ದತೆಯನ್ನು ನಡೆಸಿತ್ತು. ಆದರೆ, ಅಂಬರೀಶ್ ಕುಟುಂಬದ ಹೆಸರು ಬರಲಾರಂಭಿಸಿದಾಗ, ರಾಜಕೀಯ ಸಮೀಕರಣ ಬದಲಾಗಲಾರಂಭಿಸಿತು.
ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದಾಗ, ಖುದ್ದು ದೇವೇಗೌಡ್ರೇ ಬಹಳ ಚಿಂತೆಗೀಡಾಗಿದ್ದರು. ಇದರ ನಡುವೆ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕು ಎನ್ನುವ ಒತ್ತಡವನ್ನು ಸುಮಲತಾಗೆ ಹೇರುತ್ತಿದ್ದಾರೆ. ಇದನ್ನೇ ಅಸ್ತ್ರವಾಗಿ ಇಟ್ಟುಕೊಂಡ ಕಾಂಗ್ರೆಸ್, ಈಗ ಮಂಡ್ಯ ಕ್ಷೇತ್ರ ನಮಗೆ,ಹಾಸನ ನಿಮಗೆ ಎನ್ನುವ ಹೊಸ ದಾಳವನ್ನು ಉರುಳಿಸಿದೆ.
ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ?
ಹಾಲೀ ಸಂಸದ ಎಲ್ ಆರ್ ಶಿವರಾಮೇ ಗೌಡ
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವುದೇ ಫೈನಲ್ ಎಂದಾದರೆ, ನಿಖಿಲ್ ಕುಮಾರಸ್ವಾಮಿಯೇ ಕ್ಯಾಂಡಿಡೇಟ್ ಎನ್ನುವ ಹೊತ್ತಿನಲ್ಲಿ, ಹಾಲೀ ಸಂಸದ ಎಲ್ ಆರ್ ಶಿವರಾಮೇ ಗೌಡ, ಜೆಡಿಎಸ್ ಪಕ್ಷದಿಂದ ನಾನೇ ಕಣಕ್ಕಿಳಿಯಲಿದ್ದೇನೆ ಎನ್ನುವ ಅವರ ಮಾತು, ಕಾರ್ಯಕರ್ತರಲ್ಲಿ ಇನ್ನಷ್ಟು ಗೊಂದಲವನ್ನು ಹುಟ್ಟುಹಾಕಿದೆ. ನಾನು ಕೂಡಾ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ, ಆದರೆ, ದೇವೇಗೌಡರಿಗೆ ನಿಲುವಿಗೆ ಬದ್ದನಾಗಿರುತ್ತೇನೆ ಎಂದು ಶಿವರಾಮೇ ಗೌಡ ಹೇಳಿದ್ದಾರೆ.
ಅಂಬರೀಶ್ ವಿಧಿವಶರಾದ ವೇಳೆ
ಮಂಡ್ಯ ಜಿಲ್ಲೆಯಲ್ಲಿ ಅಂಬರೀಶ್ ಅವರಿಗೆ ವಿಶೇಷ ಸ್ಥಾನವಿದೆ. ಸುಮಲತಾ ಸ್ಪರ್ಧಿಸುವ ಕುರಿತು ನಾನು ಏನೂ ಮಾತನಾಡುವುದಿಲ್ಲ. ಅಂಬರೀಶ್ ವಿಧಿವಶರಾದ ವೇಳೆ, ಸಿಎಂ ಕುಮಾರಸ್ವಾಮಿ ಅವರು ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದಕ್ಕಿಂತ ಹೆಚ್ಚು ನಾವೇನು ಮಾಡಲು ಸಾಧ್ಯವಿದೆ. ಸುಮಲತಾ ಸ್ಪರ್ಧಿಸುವ ನಿರ್ಧಾರಕ್ಕೆ ಬಂದರೆ, ನಾವು ತಡೆಯಲು ಸಾಧ್ಯವೇ - ಶಿವರಾಮೇ ಗೌಡ.
ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ
ಬಿಜೆಪಿ ಸೇರಿ ಮೂರೂ ಪಕ್ಷಗಳು ಪ್ರಯತ್ನ
ಸುಮಲತಾ ಅವರನ್ನು ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ, ಬಿಜೆಪಿ ಸೇರಿ ಮೂರೂ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. ಇವರ ಸ್ಪರ್ಧೆಯಿಂದ ಇಲ್ಲಿನ ರಾಜಕೀಯ ಚಿತ್ರಣವೇ ಬದಲಾಗಲಿದೆ ಎನ್ನುವುದು ಸದ್ಯದ ಲೆಕ್ಕಾಚಾರ. ಕೊನೆಯ ಹಂತದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ, ಸುಮಲತಾಗೆ ಬೆಂಬಲ ನೀಡಿದರೂ, ಜೆಡಿಎಸ್ ಪಕ್ಷಕ್ಕೆ ಜಯ ಸುಲಭದ ತುತ್ತೇನೂ ಅಲ್ಲ.