ಮಂಡ್ಯದಿಂದ ದೇವೇಗೌಡರ ಸ್ಪರ್ಧೆ, ಹೊಸ ಸುದ್ದಿಯೊಂದು ಬಂತು!
Recommended Video
ಮಂಡ್ಯ, ಸೆಪ್ಟೆಂಬರ್ 04 : ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 2019ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ?. ಈ ಕುರಿತ ಚರ್ಚೆ ಮತ್ತೆ ಆರಂಭವಾಗಿದ್ದು, ಡಿ.ಸಿ.ತಮ್ಮಣ್ಣ ಅವರು ಮಂಡ್ಯಕ್ಕೆ ಗೌಡರನ್ನು ಆಹ್ವಾನಿಸಿದ್ದಾರೆ.
ಹಾಲಿ ಹಾಸನ ಕ್ಷೇತ್ರದ ಸಂಸದರಾದ ಎಚ್.ಡಿ.ದೇವೇಗೌಡರು ಮಂಡ್ಯದಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ಹಳೆಯ ಸುದ್ದಿ. ಆದರೆ, ಮದ್ದೂರು ಶಾಸಕ ಮತ್ತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಗೌಡರನ್ನು ಆಹ್ವಾನಿಸುವ ಮೂಲಕ ಚರ್ಚೆ ಕಾವೇರುವಂತೆ ಮಾಡಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ಗೆ ಸಂಪೂರ್ಣ ಶರಣಾಯಿತೇ ಕಾಂಗ್ರೆಸ್?
ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಡಿ.ಸಿ.ತಮ್ಮಣ್ಣ ಅವರು, 'ಮಂಡ್ಯದಿಂದ ಪ್ರಜ್ವಲ್ ಸ್ಪರ್ಧೆ ಮಾಡುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.
ಚುನಾವಣೆ ಫಲಿತಾಂಶ : ಮಂಡ್ಯದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್!
2014ರ ಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ಮಂಡ್ಯದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018ರ ವಿಧಾನಸಭೆ ಚುನಾವೆಣೆಯಲ್ಲಿ ಜಯಗಳಿಸಿದ ಬಳಿಕ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ದರಿಂದ, ಸದ್ಯ ಸಂಸದ ಸ್ಥಾನ ತೆರವಾಗಿದೆ.
'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'
ಡಿ.ಸಿ.ತಮ್ಮಣ್ಣ ಹೇಳಿದ್ದೇನು?
ಮದ್ದೂರಿನಲ್ಲಿ ಮಾತನಾಡಿದ ಡಿ.ಸಿ.ತಮ್ಮಣ್ಣ, 'ಮಂಡ್ಯ ಜನರಿಗೆ ದೇವೇಗೌಡರ ಮೇಲೆ ಅಪಾರವಾದ ಪ್ರೀತಿ ಇದೆ. ಆದ್ದರಿಂದ, ದೇವೇಗೌಡರ ಬಳಿ ನಾವು ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದೇವೆ' ಎಂದರು.
'ಮಂಡ್ಯ ಜನರ ಆಸೆ ಪೂರೈಸಿ, ಇಲ್ಲಿನ ಜನರು ನಿಮ್ಮ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಅವರಿಗೆ ಹೇಳಿದ್ದೇವೆ. ಅವರು ಯಾವುದೇ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ' ಎಂದು ಡಿ.ಸಿ.ತಮ್ಮಣ್ಣ ಹೇಳಿದರು.
ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಗೊತ್ತಿಲ್ಲ
ಸಚಿವ ಡಿ.ಸಿ.ತಮ್ಮಣ್ಣ ಅವರು, 'ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದರೆ ಸಂತೋಷದಿಂದ ಸ್ವಾಗತಿಸುತ್ತೇವೆ. ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಿದರೆ ಪ್ರಜ್ವಲ್ ರೇವಣ್ಣ ಹಾಸನದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿವೆ. ಆದರೆ, ಪಕ್ಷದ ನಾಯಕರು ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಜೆಡಿಎಸ್ ಗೆಲುವು ಸುಲಭ?
2018ರ ಕರ್ನಾಟಕ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ. ಆದ್ದರಿಂದ, 2019ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಮಂಡ್ಯದಲ್ಲಿ ಸುಲಭವಾಗಿದೆ.
ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದಾರೆ. ಮಂಡ್ಯ ನಗರಸಭೆ, ಮದ್ದೂರು, ನಾಗಮಂಗಲ, ಪಾಂಡವಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಆದ್ದರಿಂದ, ಪಕ್ಷ ಜಿಲ್ಲೆಯಲ್ಲಿ ಪ್ರಭಾವ ಹೊಂದಿದೆ.
ಕಾಂಗ್ರೆಸ್ ಅಭ್ಯರ್ಥಿ ಯಾರು?
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅತಂತ್ರವಾಗಿದೆ. ಅಂಬರೀಶ್ ಅವರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆ. ಮಾಜಿ ಸಂಸದೆ ರಮ್ಯಾ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ಕಾಂಗ್ರೆಸ್ ನಾಯಕರ ಕೊರತೆ ಎದುರಿಸುತ್ತಿದೆ.
2014ರ ಚುನಾವಣೆಯಲ್ಲಿ ರಮ್ಯಾ ಅವರು ಜೆಡಿಎಸ್ನ ಸಿ.ಎಸ್.ಪುಟ್ಟರಾಜು ವಿರುದ್ಧ ಸ್ಪರ್ಧೆ ಮಾಡಿದ್ದರು. 518852 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಈ ಬಾರಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ನಿಗೂಢವಾಗಿದೆ.
ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!
ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು
ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಕಗ್ಗಂಟಾಗಿದೆ. 2014ರ ಚುನಾವಣೆಯಲ್ಲಿ ಪ್ರೊ.ಬಿ.ಶಿವಲಿಂಗಯ್ಯ ಅವರು ಅಭ್ಯರ್ಥಿಯಾಗಿದ್ದರು. 86,993 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಈ ಬಾರಿ ಚನ್ನಪಟ್ಟಣದಲ್ಲಿ ವಿಧಾಸಭೆ ಚುನಾವಣೆಯಲ್ಲಿ ಸೋತ ಸಿ.ಪಿ.ಯೋಗೇಶ್ವರ ಅವರು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ.