ಮಂಡ್ಯದಿಂದ ತಮಿಳ್ನಾಡಿಗೆ ಕಾಲ್ನಡಿಗೆಯಲ್ಲಿ ಹೊರಟವರ ಕಥೆ ಏನಾಯಿತು?
ಮಂಡ್ಯ, ಮೇ 19: ತಳ್ಳುಗಾಡಿಯಲ್ಲಿ ತಮ್ಮ ವಸ್ತುಗಳನ್ನಿಟ್ಟುಕೊಂಡು ಗಾಡಿಯನ್ನು ತಳ್ಳುತ್ತಾ ಕಾಲ್ನಡಿಗೆಯಲ್ಲಿ ಮಂಡ್ಯದಿಂದ ತಮಿಳುನಾಡಿಗೆ ಹೊರಟಿದ್ದ ಸುಮಾರು ಹದಿನಾರು ಮಂದಿ ಕೂಲಿ ಕಾರ್ಮಿಕರನ್ನು ಚೆಕ್ ಪೋಸ್ಟ್ನಲ್ಲಿ ತಡೆಯುವುದರೊಂದಿಗೆ, ಅವರ ಅಸಹಾಯಕತೆಯನ್ನರಿತು ಮಳ್ಳವಳ್ಳಿ ತಾಲೂಕು ಆಡಳಿತ ಅವರ ಸಹಾಯಕ್ಕೆ ನಿಂತಿದ್ದು, ಸೇವಾ ಸಿಂಧು ಮೂಲಕ ಅವರ ತವರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದೆ.
ತಮಿಳುನಾಡಿನಿಂದ ಕಬ್ಬು ಕಟಾವಿಗೆಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕ ಕುಟುಂಬ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಇಲ್ಲಿಯೇ ಸಿಕ್ಕಿ ಹಾಕಿಕೊಂಡಿತ್ತು. ಕೆಲಸವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ದಾನಿಗಳು ಒಂದಷ್ಟು ಸಹಾಯ ಮಾಡಿದ್ದರೂ ಇಲ್ಲಿದ್ದು ಜೀವನ ನಿರ್ವಹಿಸಲು ಅಸಾಧ್ಯವಾದ ಹಿನ್ನಲೆಯಲ್ಲಿ ತಳ್ಳುಗಾಡಿ ಮೂಲಕ ತವರಿಗೆ ತೆರಳುವ ಸಾಹಸಕ್ಕೆ ಕೈ ಹಾಕಿದ್ದರು.
ಉತ್ತರ ಪ್ರದೇಶಕ್ಕೆ ಮರಳಿದ 414 ವಲಸೆ ಕಾರ್ಮಿಕರಿಗೆ ಕೊರೊನಾ ರೋಗ ಲಕ್ಷಣ
ಆರು ತಿಂಗಳ ಹಿಂದೆ ಶ್ರೀರಂಗಪಟ್ಟಣಕ್ಕೆ ಬಂದಿದ್ದರು
ಶ್ರೀರಂಗಪಟ್ಟಣದಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ತಳ್ಳುವ ಗಾಡಿಯಲ್ಲಿ ಹದಿನಾರು ಮಂದಿ ಕೂಲಿ ಕಾರ್ಮಿಕರು ಎಂಟು ಮಕ್ಕಳೊಂದಿಗೆ ತಮ್ಮ ಪಾತ್ರೆಪಗಡೆ, ಬಟ್ಟೆಯ ಗಂಟುಮೂಟೆಯನ್ನು ಕಟ್ಟಿ ತಳ್ಳು ಗಾಡಿಯಲ್ಲಿಟ್ಟು ತಳ್ಳುತ್ತಾ ನಡೆಯುತ್ತಾ ತಮ್ಮ ಊರು ತಲುಪುವ ತೀರ್ಮಾನ ಮಾಡಿಬಿಟ್ಟಿದ್ದರು. ಇವರೆಲ್ಲರೂ ತಮಿಳುನಾಡಿನ ತಿರುವಣ್ಣಾ ಮಲೈ ಮೂಲದವರಾಗಿದ್ದು, ಈ ಕೂಲಿ ಕಾರ್ಮಿಕರು ಮಕ್ಕಳೊಂದಿಗೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂಗೆ ಆರು ತಿಂಗಳ ಹಿಂದೆ ಕಬ್ಬು ಕಟಾವಿಗೆ ಬಂದಿದ್ದರು. ಕೆಲಸ ಮುಗಿಸಿಕೊಂಡು ತಮ್ಮ ತಾಯ್ನಾಡು ಸೇರಬೇಕೆಂದುಕೊಳ್ಳುವಾಗಲೇ ಲಾಕ್ ಡೌನ್ ಆಗಿದ್ದರಿಂದ ಶ್ರೀರಂಗಪಟ್ಟಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.
ಬೈಕ್ ಗಳನ್ನು ಮಾರಿ ತಳ್ಳುಗಾಡಿ ಕೊಂಡರು
ಈ ವೇಳೆ ಶ್ರೀರಂಗಪಟ್ಟಣದಲ್ಲಿರುವ ಸಂಘ ಸಂಸ್ಥೆಗಳು ಒಂದು ತಿಂಗಳವರೆಗೆ ಊಟಕ್ಕೆ ಆಗುವಷ್ಟು ದಿನಸಿ, ಆಹಾರ ಪದಾರ್ಥಗಳನ್ನು ನೀಡಿದರು. ನಂತರ ಆಹಾರ ಪದಾರ್ಥಗಳು ಸಿಗದಿದ್ದಾಗ ತಮ್ಮ ಹಣದಿಂದ ಅಗತ್ಯ ವಸ್ತು ಖರೀದಿಸಬೇಕಾಯಿತು. ಇದರಿಂದ ಅಷ್ಟು ಇಷ್ಟು ಉಳಿಸಿಟ್ಟ ಹಣ ಖಾಲಿಯಾಯಿತು. ಇನ್ನು ಇಲ್ಲಿ ಇರುವುದು ಸಾಧ್ಯವಿಲ್ಲ, ಹೇಗಾದರೂ ಮಾಡಿ ತಮ್ಮ ಊರು ಸೇರಿಕೊಳ್ಳಲೇಬೇಕೆಂಬ ನಿರ್ಧಾರಕ್ಕೆ ಬಂದ ಕಾರ್ಮಿಕರು ತಮ್ಮಲ್ಲಿದ್ದ ಬೈಕ್ ಗಳನ್ನು ಮಾರಿ ಎರಡು ತಳ್ಳುಗಾಡಿಗಳನ್ನು ಖರೀದಿಸಿದರು. ಉಳಿದ ಒಂದಷ್ಟು ಹಣವನ್ನು ಮಕ್ಕಳಿಗೆ ಮತ್ತು ತಮಗೆ ತಿನಿಸುಗಳನ್ನು ಖರೀದಿಸಲು ಇಟ್ಟುಕೊಂಡು ತಳ್ಳುಗಾಡಿಯಲ್ಲಿ ತಮ್ಮ ಪಾತ್ರೆ, ಇನ್ನಿತರ ವಸ್ತುಗಳನ್ನು ಹೇರಿಕೊಂಡು ಅದರಲ್ಲಿಯೇ ಮಕ್ಕಳನ್ನು ಕೂರಿಸಿಕೊಂಡು ಶ್ರೀರಂಗಪಟ್ಟಣದಿಂದ ಕಾಲ್ನಡಿಗೆಯಲ್ಲಿಯೇ ತಮಿಳುನಾಡಿನ ಕಡೆಗೆ ಮುಖ ಮಾಡಿ ಹೊರಟರು.
ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋದ ಕಾರ್ಮಿಕರಿಗೆಂಥಾ ಶಿಕ್ಷೆ?
ಮಳವಳ್ಳಿ ತಲುಪಿದ್ದ ಗುಂಪು
ಈ ಕಾರ್ಮಿಕರ ಗುಂಪಿನಲ್ಲಿ ಗರ್ಭಿಣಿಯೊಬ್ಬರೂ ಇದ್ದು, ಅವರು ನಡೆಯಲು ಸಾಧ್ಯವಾಗದಿದ್ದಾಗ ಗಾಡಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಉಳಿದವರು ತಳ್ಳುತ್ತಿದ್ದರು. ಶ್ರೀರಂಗಪಟ್ಟಣದ ಗಂಜಾನಿಂದ ಶನಿವಾರ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು ಒಂದಷ್ಟು ದೂರ ನಡೆಯುತ್ತಾ ಮತ್ತೊಂದಷ್ಟು ಹೊತ್ತು ವಿಶ್ರಾಂತಿ ಪಡೆಯುತ್ತಾ ಮೈಸೂರಿನ ಬನ್ನೂರು ಗ್ರಾಮಕ್ಕೆ ಬಂದಿದ್ದಾರೆ. ಭಾನುವಾರ ಅಲ್ಲಿ ವಿಶ್ರಾಂತಿ ಪಡೆದು ಮತ್ತೆ ಸೋಮವಾರ ಬೆಳಗ್ಗೆ ಹೊರಟು ಕಿರುಗಾವಲು ಮಾರ್ಗವಾಗಿ ಮಳವಳ್ಳಿ ತಲುಪಿದ್ದಾರೆ. ಮುಂದೆ ಹಾಡ್ಲಿ ಸರ್ಕಲ್ ಸಮೀಪದ ಚೆಕ್ ಪೋಸ್ಟ್ಗೆ ತಲುಪುವಾಗ ರಾತ್ರಿಯಾಗಿತ್ತು.
ಕಾರ್ಮಿಕರನ್ನು ಸ್ವಗ್ರಾಮಕ್ಕೆ ತಲುಪಿಸಲು ಕ್ರಮ
ಚೆಕ್ ಪೋಸ್ಟ್ ದಾಟಲು ಪ್ರಯತ್ನಿಸಿದ ಕಾರ್ಮಿಕರನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿ ಬಳಿಕ ಮಾಹಿತಿಯನ್ನು ಮಳವಳ್ಳಿ ತಾಲೂಕು ತಹಶೀಲ್ದಾರ್ ಚಂದ್ರಮೌಳಿ ಅವರಿಗೆ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ವಿಚಾರಣೆ ಮಾಡಿದಾಗ ಈ ಕಾರ್ಮಿಕರು ಶ್ರೀರಂಗಪಟ್ಟಣ ತಾಲೂಕು ಆಡಳಿತಕ್ಕೆ ಯಾವುದೇ ಮಾಹಿತಿ ನೀಡದಿರುವುದು ಬೆಳಕಿಗೆ ಬಂದಿದೆ. ಮಾನವೀಯ ದೃಷ್ಟಿಯಿಂದ ಸೇವಾ ಸಿಂಧು ಮೂಲಕ ಕೂಲಿ ಕಾರ್ಮಿಕರನ್ನು ಅವರ ಸ್ವಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲು ಮುಂದಿನ ಕ್ರಮ ಕೈಗೊಂಡಿದ್ದಾರೆ.