ಕೆ.ಆರ್.ಪೇಟೆಯಲ್ಲಿ ಚಿರತೆ ಹಾವಳಿಗೆ ತತ್ತರಿಸುತ್ತಿರುವ ರೈತರು
ಮಂಡ್ಯ, ಅಕ್ಟೋಬರ್ 31: ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಲ್ಲಿ ಈಚೆಗೆ ಚಿರತೆಯ ಹಾವಳಿ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ಮಾತ್ರವಲ್ಲದೆ, ಕುರಿಗಾಹಿ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ರೈತ ನಾಗೇಗೌಡ ಎಂಬುವವರು ತಮ್ಮ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಯಲ್ಲಿ ಎಂದಿನಂತೆ ರಾತ್ರಿ ಜೋಡಿ ಹಸುಗಳನ್ನು ಕಟ್ಟಿ ಹಾಕಿ ಮೇವು ಹಾಕಿ ಮಲಗಿದ್ದಾರೆ. ಬೆಳಗಿನ ಜಾವ ಎರಡು ಗಂಟೆಯ ವೇಳೆಗೆ ಚಿರತೆ ದಾಳಿ ಮಾಡಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಅರ್ಧ ಕಿ.ಮೀ ದೂರದ ಹೊಲದಲ್ಲಿ ಬೆಳೆದಿದ್ದ ಮೇವಿನ ಗದ್ದೆಗೆ ಎಳೆದೊಯ್ದು ಅಲ್ಲಿ ಹಸುವನ್ನು ಭಾಗಶಃ ತಿಂದು ಹಾಕಿದೆ.
ಕೊರಟಗೆರೆ: ಸಿದ್ಧರಬೆಟ್ಟದ ಮಠದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಆತಂಕ
ಮುಂಜಾನೆ ನಾಗೇಗೌಡ ಎದ್ದು ಹಸುಗಳನ್ನು ಹೊರಗೆ ಕಟ್ಟಿ ಹಾಕಲು ನೋಡಿದಾಗ ಒಂದು ಹಸು ಇಲ್ಲದ್ದರಿಂದ ಹುಡುಕಾಟ ಆರಂಭಿಸಿದ್ದಾರೆ. ಮನೆಯವರು ಹಾಗೂ ಗ್ರಾಮಸ್ಥರು ಒಂದು ಗಂಟೆ ಕಾಲ ಹುಡುಕಾಡಿದ ಬಳಿಕ ಹಸುವಿನ ಕಳೇಬರ ಪತ್ತೆಯಾಗಿದೆ.
ಮತ್ತೊಂದೆಡೆ ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಹಿ ಮೇಲೆ ಹಾಡಹಗಲೇ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ತಾಲೂಕಿನ ಬೂಕನಕೆರೆ ಹೋಬಳಿಯ ಬೊಮ್ಮಲಾಪುರ ಗ್ರಾಮದ ಪಾಪಣ್ಣ (50) ಚಿರತೆ ದಾಳಿಯಿಂದ ಗಾಯಗೊಂಡಿದ್ದು, ಇವರು ತಮ್ಮ ಜಮೀನು ಇರುವ ಬೊಮ್ಮಲಾಪುರ ಗ್ರಾಮದ ಬಳಿ ಶುಕ್ರವಾರ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಸುಮಾರು 4 ಗಂಟೆ ವೇಳೆಯಲ್ಲಿ ಬೂಕನಕೆರೆ-ಚಿನಕುರಳಿ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆಯು ಕುರಿಗಳ ಮೇಲೆ ದಾಳಿ ಮಾಡಲು ಮುಂದಾಗಿದೆ.
Recommended Video
ಈ ವೇಳೆ ಕುರಿ ಮೇಯಿಸುತ್ತಿದ್ದ ಪಾಪಣ್ಣ ಅವರ ಮೇಲೆ ದಾಳಿ ಮಾಡಿ ಕೈ ಮತ್ತು ಕುತ್ತಿಗೆ ಭಾಗವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಪಾಪಣ್ಣ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಬಂದು ಚಿರತೆಯನ್ನು ಓಡಿಸಿ ಇವರನ್ನು ರಕ್ಷಿಸಿದ್ದಾರೆ.
ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಚಿರತೆ ದಾಳಿಯಿಂದ ಗಾಯಗೊಂಡಿರುವ ಕುರಿಗಾಹಿ ರೈತ ಪಾಪಣ್ಣ ಅವರ ಚಿಕಿತ್ಸೆಯ ವೆಚ್ಚವನ್ನು ಅರಣ್ಯ ಇಲಾಖೆಯು ಭರಿಸಲಿದೆ ಹಾಗೂ ಚಿರತೆಯನ್ನು ಹಿಡಿಯಲು ಕ್ರಮ ಕೈಗೊಳ್ಳಲಿದೆ ಎಂದು ಆ ಭಾಗದ ರೈತರಿಗೆ ಭರವಸೆ ನೀಡಿದ್ದಾರೆ.