KRS dam water level: ಒಂದು ವಾರದಲ್ಲಿ 90ಕ್ಕೆ ಕುಸಿದರೂ ಆಶ್ಚರ್ಯವಿಲ್ಲ, ಈಗ ನೀರಿನ ಮಟ್ಟ ಇಷ್ಟಿದೆ
ಮಂಡ್ಯ, ಅಕ್ಟೋಬರ್, 30: ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ಕುಸಿಯುತ್ತಲೇ ಇದೆ. ಹಾಗೆಯೇ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಕೆಳಗಿಳಿದಿದೆ.
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ರೈತರು ಬೆಳೆದ ಬೆಳೆಗಳೆಲ್ಲವೂ ನೆಲಕಚ್ಚಿವೆ. ಅಲ್ಲದೆ ಜಲಾಶಯಗಳು ಕೂಡ ಬರಿದಾಗುತ್ತಲೇ ಇದ್ದು, ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾದರೂ ಆಶ್ಚರ್ಯವೇನಿಲ್ಲ ಎನ್ನುವಂತಾಹಗಿದೆ. ಹಾಗಾದರೆ ಕೆಆರ್ಎಸ್ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ಎಷ್ಟಿದ ಎಂದು ತಿಳಿಯಿರಿ.

124.80 ಅಡಿ ಸಂಗ್ರಹ ಸಾಮರ್ಥ್ಯ ಇರುವ ಕೆಆರ್ಎಸ್ ಜಲಾಶಯದಲ್ಲಿ ಇದೀಗ ಅಂದರೆ ಸೋಮವಾರ (ಅಕ್ಟೋಬರ್ 30) 99.48 ಅಡಿ ನೀರಿದೆ. ಅದರಲ್ಲಿ ಬಳಕೆಗೆ ಯೋಗ್ಯ ಇರುವುದು 14 ಟಿಎಂಸಿ ಮಾತ್ರ. ಸದ್ಯ ಜಲಾಶಯದಲ್ಲಿ ಶೇಕಡಾ 40ರಷ್ಟು ನೀರು ಸಂಗ್ರಹವಿದೆ. ಒಳ ಹರಿವು 531 ಕ್ಯೂಸೆಕ್ ಇದ್ದರೆ, ಹೊರ ಹರಿವಿನ ಪ್ರಮಾಣ 567 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
115 ಅಡಿಗೆ ತಲುಪಿದ್ದ ನೀರಿನ ಮಟ್ಟ
ಜುಲೈ ತಿಂಗಳ ಮಧ್ಯದಲ್ಲಿ ಭಾರೀ ಮಳೆ ಹಿನ್ನೆಲೆ ಈ ಜಲಾಶಯದಲ್ಲಿ ನೀರಿನ ಮಟ್ಟ 115 ಅಡಿಗೆ ತಲುಪಿತ್ತು. ಇನ್ನು ಜುಲೈ ತಿಂಗಳ ಅಂತ್ಯದಿಂದ ಮಳೆಯ ಪ್ರಮಾಣ ತಗ್ಗುತ್ತಲೇ ಬಂದಿದ್ದು, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಸಂಪೂರ್ಣವಾಗಿ ನಿಂತೇ ಹೋಯಿತು. ಆದರೆ ಕೆಲವು ವಾರಗಳ ಹಿಂದೆಯಷ್ಟೇ ಮೈಸೂರು, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು ಅಷ್ಟೇ. ಇದೀಗ ಈ ಜಿಲ್ಲೆಗಳಲ್ಲೂ ಸಹ ಬಿಸಿಲಿನ ವಾತಾವರಣವೇ ಮುಂದುವರೆದಿದೆ.
90ಕ್ಕೆ ಕುಸಿದರೂ ಆಶ್ಚರ್ಯವಿಲ್ಲ
ಮಳೆರಾಯ ಸಂಪೂರ್ಣವಾಗಿ ತನ್ನ ಆರ್ಭಟವನ್ನು ನಿಲ್ಲಿಸಿದ ಪರಿಣಾಮ ಜಲಾಶಯದಲ್ಲಿ ನೀರಿನ ಮಟ್ಟ 99ಕ್ಕೆ ಬಂದು ತಲುಪಿದೆ. ಒಂದು ವೇಳೆ ಇನ್ನೂ ಒಂದು ವಾರದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿದ್ದರೆ, ನೀರಿನ ಮಟ್ಟ 90ಕ್ಕೆ ಕುಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಮಳೆ ಕೊರತೆ ಒಂದು ಕಡೆಯಾದರೆ, ಸಂಕಷ್ಟದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು. ಈ ನಡೆ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿದೆ.












Click it and Unblock the Notifications