ಸುಮಲತಾಗೆ ಜೈ ಎಂದ ಕೊತ್ತತ್ತಿ ಕಾಂಗ್ರೆಸ್ ಮುಖಂಡರು!
Recommended Video
ಮಂಡ್ಯ, ಏಪ್ರಿಲ್ 05: ಮಂಡ್ಯ ತಾಲೂಕು ಕೊತ್ತತ್ತಿ 1 ಮತ್ತು 2 ನೇ ವೃತ್ತದ ಕಾಂಗ್ರೆಸ್ ಕಾರ್ಯಕರ್ತರು ಇಂಡುವಾಳು ಸಚ್ಚಿದಾನಂದ ಅವರ ನಿವಾಸದಲ್ಲಿ ಸಭೆ ಸೇರಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಲು ನಿರ್ಣಯ ಕೈಗೊಂಡಿದ್ದಾರೆ. ಇದು ರಾಜ್ಯ ಕೈ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸುಮಲತಾ ಬೆಂಬಲಿಸುವ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಇಂಡುವಾಳು ಗ್ರಾಮದ ಎಸ್.ಸಚ್ಚಿದಾನಂದ ನಿವಾಸದಲ್ಲಿ ಮುಖಂಡರಾದ ಬಿ.ಎಂ.ಮಹೇಶ್, ಯೋಗಾನಂದ ಪಟೇಲ್, ತಗ್ಗಹಳ್ಳಿ ಕೃಷ್ಣ, ಶ್ರೀರಂಗಪಟ್ಟಣ ತಾಪಂ ಉಪಾಧ್ಯಕ್ಷೆ ನಂದಾಮಣಿ, ಮಂಗಲ ಗ್ರಾಪಂ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷೆ ವರಲಕ್ಷ್ಮಿ ಬುಲೆಟ್ ಕೃಷ್ಣ, ಬೇವಿನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯ, ಸದಸ್ಯರಾದ ರಮೇಶ್ ಮತ್ತಿತರ ಮುಖಂಡರು ಸಭೆ ಸೇರಿ, ಸುಮಲತಾ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದಾರೆ.
ಮಂಡ್ಯ, ಮೈಸೂರು, ಹಾಸನ, ತುಮಕೂರು: ಈಗಿನ ರಾಜಕೀಯ ಚಿತ್ರಣ ಹೇಗಿದೆ?
ಜೆಡಿಎಸ್- ಕಾಂಗ್ರೆಸ್ ಮೈತ್ರಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಡಿಕೊಳ್ಳಲಾಗಿದೆ. ಅಪ್ಪ- ಮಕ್ಕಳ ಗೆಲುವಿಗೆ ಮೈತ್ರಿ ಇರುವುದಿಲ್ಲ. ಜಿಲ್ಲೆಯಲ್ಲಿ ಮೈತ್ರಿಗೆ ಬೆಂಬಲ ನೀಡುವುದಿಲ್ಲ. ನಾವುಗಳು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸುವುದಾಗಿ ಅವರು ಬಹಿರಂಗವಾಗಿ ಘೋಷಿಸಿದ್ದು, ಯಾವುದೇ ಕ್ರಮ ಕೈಗೊಂಡರೂ ಅದನ್ನು ಎದುರಿಸಲು ತಯಾರಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ದವಾಗಿಲ್ಲ. ನಾವು ಕಾಂಗ್ರೆಸ್ಸಿಗರು. ಪಕ್ಷದ ಬಾವುಟ ಹಿಡಿಯುತ್ತೇವೆ. ಪ್ರಕರಣ ದಾಖಲಿಸಲಿ, ಇಲ್ಲವೇ ಪಕ್ಷದಿಂದ ವಜಾಗೊಳಿಸಲಿ. ಯಾವುದಕ್ಕೂ ಹೆದರುವುದಿಲ್ಲ. ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ಎಂದು ಘೋಷಿಸಿರುವುದಲ್ಲದೆ ಪ್ರಚಾರದಲ್ಲಿಯೂ ಮುಂಚೂಣಿಯಲ್ಲಿರುವುದು ದೋಸ್ತಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.