ಬಜೆಟ್; ಮಂಡ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರಾ ಸಿಎಂ?

ಮಂಡ್ಯ, ಮಾರ್ಚ್ 04: ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಮಾಡುವುದು ತುಸು ಕಷ್ಟವೇ. ಏಕೆಂದರೆ ಕರೋನಾ, ಅತಿವೃಷ್ಟಿ, ಪ್ರವಾಹ ಸೇರಿದಂತೆ ಹಲವು ಸಂಕಷ್ಟಗಳಿಂದ ನಲುಗಿರುವ ಸರ್ಕಾರ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಿಕೊಂಡು ಹೇಗೆ ಬಜೆಟ್ ಮಂಡನೆ ಮಾಡುತ್ತಾರೆ? ಎಂಬುದು ಜನಸಾಮಾನ್ಯರಲ್ಲಿ ಕುತೂಹಲವನ್ನು ಕೆರಳಿಸಿದೆ.

ಅಷ್ಟೇ ಅಲ್ಲದೆ ಅನುದಾನ ಕಡಿತದೊಂದಿಗೆ ಜನರ ಮೇಲೆ ತೆರಿಗೆಯ ಹೊರೆಯನ್ನು ಹೇರಿದರೂ ಅಚ್ಚರಿಪಡಬೇಕಾಗಿಲ್ಲ. ಪ್ರತಿವರ್ಷ ರಾಜ್ಯ ಬಜೆಟ್ ಎಂದ ಮೇಲೆ ಪ್ರತಿ ಜಿಲ್ಲೆಯ ಜನರೂ ತಮ್ಮ ಜಿಲ್ಲೆಗೆ ಬಜೆಟ್‍ನಲ್ಲಿ ಏನು ಕೊಡುಗೆಗಳನ್ನು ಸರ್ಕಾರ ನೀಡಬಹುದು ಎಂಬ ಆಸೆಗಣ್ಣಿನಿಂದ ನೋಡುವುದು ಸಹಜ.

ಹಿಂದಿನ ಬಜೆಟ್‍ಗಳಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಮಂಡನೆ ಸರ್ಕಾರಕ್ಕೊಂದು ಸವಾಲು ಎಂದರೂ ತಪ್ಪಾಗಲಾರದು. ಅನುದಾನಗಳನ್ನು ಜಿಲ್ಲೆಗಳಿಗೆ ಪ್ರತ್ಯೇಕವಾಗಿ ನೀಡುವ ಬದಲು ಬಹುಶಃ ಇಲಾಖೆಗಳಿಗೆ ನೀಡಿ ಕೈತೊಳೆದುಕೊಂಡರೂ ಅಚ್ಚರಿಪಡಬೇಕಾಗಿಲ್ಲ.

ಮಾರ್ಚ್ 8ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ಮಂಡ್ಯ ಜಿಲ್ಲೆ ಯಡಿಯೂರಪ್ಪ ಹುಟ್ಟೂರು ಆಗಿರುವುದರಿಂದ ಹುಟ್ಟೂರಿಗೆ ಅನೇಕ ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿದೆ.

ಮಂಡ್ಯಕ್ಕೆ ಹೆಚ್ಚಿನ ಒತ್ತು ನೀಡಬಹುದಾ?

ಮಂಡ್ಯಕ್ಕೆ ಹೆಚ್ಚಿನ ಒತ್ತು ನೀಡಬಹುದಾ?

ಕಳೆದ ಬಾರಿಯ ಬಜೆಟ್ ಮಂಡನೆ ಬಳಿಕ ಕರೋನಾ ಮಹಾಮಾರಿ ಕಾಡಿದ್ದರಿಂದ ಇಡೀ ಅರ್ಥ ವ್ಯವಸ್ಥೆಯೇ ಬುಡಮೇಲಾಯಿತು. ಮಳೆಗಾಲದಲ್ಲಿನ ಪ್ರವಾಹ, ಅತಿವೃಷ್ಟಿ ಸರ್ಕಾರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಇವತ್ತಿಗೂ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರಿಗೆ ಇನ್ನೂ ಕೂಡ ಪರಿಹಾರ ತಲುಪಿಲ್ಲ. ಹೀಗಿರುವಾಗ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂಬುದೇ ಸಂಶಯವಾಗಿದೆ.

ಸಾಮಾನ್ಯವಾಗಿ ಆಡಳಿತ ರೂಢ ಸರ್ಕಾರಗಳು ಯಾವುದೇ ಕಾರ್ಯಯೋಜನೆ ಜಾರಿಗೆ ತಂದರೂ ಅದರ ಹಿಂದೆ ರಾಜಕೀಯ ಲಾಭದ ಉದ್ದೇಶವಿರುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚಾಗಿ ಮಂಡ್ಯಕ್ಕೆ ಹೆಚ್ಚಿನ ಒತ್ತು ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆಯಿದ್ದಾರೆ.

ಹುಟ್ಟೂರಿಗೆ ಕೊಡುಗೆಗಳನ್ನು ನೀಡಬಹುದಾ?

ಹುಟ್ಟೂರಿಗೆ ಕೊಡುಗೆಗಳನ್ನು ನೀಡಬಹುದಾ?

ಹಾಗೆ ನೋಡಿದರೆ ಹಿಂದಿನ ಸರ್ಕಾರಗಳು ಮಂಡ್ಯದತ್ತ ಒಲವು ತೋರಿದ್ದನ್ನು ನಾವೆಲ್ಲ ನೋಡಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಂಡ್ಯದ ಅಭಿವೃದ್ಧಿಗಾಗಿ ಸುಮಾರು 800 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಆದರೆ ತದ ನಂತರ ಸರ್ಕಾರ ಪತನವಾಗಿದ್ದರಿಂದ ಅಂದುಕೊಂಡ ಯಾವ ಯೋಜನೆಗಳು ಕಾರ್ಯರೂಪಕ್ಕೆ ಬರಲೇ ಇಲ್ಲ.

ಇದೀಗ ಜಿಲ್ಲೆಯ ಅಭಿವೃದ್ಧಿ ಒಂದು ಕಡೆಯಾದರೆ ಮತ್ತೊಂದು ಕಡೆ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದು, ಒಂದಷ್ಟು ಯೋಜನೆಗಳ ಘೋಷಣೆ ಮಾಡಿ ಜನರ ಗಮನಸೆಳೆಯುವ ಪ್ರಯತ್ನ ಮಾಡಿದರೂ ಅಚ್ಚರಿಯಿಲ್ಲ. ಜತೆಗೆ ಜಿಲ್ಲೆಯಲ್ಲಿ ಪಕ್ಷ ಮುಂದಿನ ದಿನಗಳಲ್ಲಿ ನೆಲೆಯೂರ ಬೇಕಾದರೆ ಜಿಲ್ಲೆಯ ಜನರ ಸೆಳೆಯುವ ಅಗತ್ಯವಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರು ಆಗಿರುವುದರಿಂದ ಹುಟ್ಟೂರಿಗೆ ಅನೇಕ ಕೊಡುಗೆಗಳನ್ನು ನೀಡಬಹುದು ಎಂಬ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿದೆ.

ಮೈಷುಗರ್ ಮರು ಚಾಲನೆ ಸಿಗಬಹುದಾ?

ಮೈಷುಗರ್ ಮರು ಚಾಲನೆ ಸಿಗಬಹುದಾ?

ಈಗಾಗಲೇ ಹಲವು ಯೋಜನೆಗಳನ್ನು ಜಿಲ್ಲೆಗೆ ತರುವ ಭರವಸೆಗಳನ್ನು ನೀಡಲಾಗಿದೆ. ರಾಜಕೀಯವನ್ನು ಬದಿಗಿಟ್ಟು ನೋಡಿದರೆ ಮಂಡ್ಯದ ಜನ ಅದರಲ್ಲೂ ಕಬ್ಬು ಬೆಳೆಗಾರರು ನಿರೀಕ್ಷೆ ಮಾಡುತ್ತಿರುವುದು ಏನೆಂದರೆ ಕಬ್ಬು ಬೆಳೆಗಾರರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಗೊಳಿಸದೆ ಆರಂಭಿಸುವುದಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆ ಅರ್ಥಾತ್ ಮೈಷುಗರನ್ನು ಖಾಸಗೀಕರಣಗೊಳಿಸದೆ ಒ ಅಂಡ್ ಎಂ (ನಿರ್ವಹಣೆ ಮತ್ತು ಕಾರ್ಯಾಚರಣೆ) ಮುಖಾಂತರವೇ ನಡೆಸಬೇಕು ಎಂದು ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟ ಸೇರಿದಂತೆ ರೈತಪರ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದಾರೆ.

ಒಂದು ವೇಳೆ ಈ ಕುರಿತಂತೆ ಬಜೆಟ್‍ನಲ್ಲಿ ಏನಾದರೂ ಯೋಜನೆಯನ್ನು ಹಮ್ಮಿಕೊಳ್ಳುತ್ತಾರಾ? ಆ ಮೂಲಕ ಮೈಷುಗರ್ ಆರಂಭಕ್ಕೆ ಹಸಿರು ನಿಶಾನೆ ತೋರುತ್ತಾರಾ ಎಂಬುದನ್ನು ಕಬ್ಬು ಬೆಳೆಗಾರರು ಕಾಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಮೈಷುಗರ್ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಈ ಕಾರ್ಖಾನೆಯನ್ನೇ ನಂಬಿದ್ದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಬಜೆಟ್‍ನಲ್ಲಿ ಮೈಷುಗರ್ ಕಾರ್ಖಾನೆ ಕಾರ್ಯಾರಂಭಕ್ಕೆ ಏನಾದರೂ ಯೋಜನೆ ಇದೆಯಾ ಎಂದು ಕಾಯುತ್ತಿದ್ದಾರೆ.

Recommended Video

    10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada
    ಬಜೆಟ್ ಮಂಡನೆ ಬಳಿಕವಷ್ಟೆ ಎಲ್ಲದಕ್ಕೂ ಉತ್ತರ

    ಬಜೆಟ್ ಮಂಡನೆ ಬಳಿಕವಷ್ಟೆ ಎಲ್ಲದಕ್ಕೂ ಉತ್ತರ

    ಇದಲ್ಲದೆ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿಯ ಬಳಿ ನಿರ್ಮಾಣವಾಗುತ್ತಿರುವ ರಾಜ್ಯದ ಎರಡನೇ ಬೃಹತ್ ಆಹಾರ ಸಂಸ್ಕರಣಾ ಘಟಕದತ್ತ ಕಾಳಜಿ ವಹಿಸಿ ಬಹುಬೇಗ ಆರಂಭಕ್ಕೆ ಮುಂದಡಿ ಇಡುತ್ತಾರಾ ಎಂಬ ಕಾತರವೂ ಇಲ್ಲದಿಲ್ಲ. ಒಂದು ವೇಳೆ ಇದು ಬಹುಬೇಗ ಕಾರ್ಯರೂಪಕ್ಕೆ ಬಂದರೆ ಸಾವಿರಾರು ಮಂದಿಗೆ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಯಡಿಯೂರಪ್ಪ ಅವರು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಯೋಜನೆ ತಯಾರಾಗಿತ್ತು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

    ಒಂದು ಜಿಲ್ಲೆ ಒಂದು ಉತ್ಪನ್ನದಡಿ ಮಂಡ್ಯಕ್ಕೆ ಬೆಲ್ಲವನ್ನು ಘೋಷಣೆ ಮಾಡಿದ್ದು, ಇದರಿಂದ ಅಲೆಮನೆಗಳು ಮತ್ತೆ ಪ್ರವರ್ಧಮಾನಕ್ಕೆ ಬರಲಿದ್ದು, ಇದಕ್ಕೆ ಪೂರಕವಾಗಿ ರೈತರಿಗೆ ಉಪಯೋಗವಾಗುವಂತಹ ಯಾವುದಾದರೂ ಪ್ಯಾಕೇಜ್ ಫೋಷಣೆಯಾದರೂ ಆಗಬಹುದೇನೋ? ಒಟ್ಟಾರೆ ಒಂದಷ್ಟು ನಿರೀಕ್ಷೆಗಳು ಜಿಲ್ಲೆಯ ರೈತರು ಸೇರಿದಂತೆ ಜನ ಸಾಮಾನ್ಯರಲ್ಲಿದ್ದು, ಬಜೆಟ್ ಮಂಡನೆ ಬಳಿಕವಷ್ಟೆ ಎಲ್ಲದಕ್ಕೂ ಉತ್ತರ ಸಿಗಬೇಕಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+