ಚೆಲುವರಾಯಸ್ವಾಮಿಗೆ ರಣವೀಣ್ಯ ನೀಡಿದ ಸುರೇಶ್ ಗೌಡ!
ಮಂಡ್ಯ, ಮಾರ್ಚ್ 31 : ನಾಗಮಂಗಲ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೃಪಾ ಕಟಾಕ್ಷ ಹಾಗೂ ಜೆಡಿಎಸ್ ಪಕ್ಷ ಚಿನ್ನೆಯಡಿ ನಿರಾಯಾಸವಾಗಿ ಗೆದ್ದು ಬರುತ್ತಿದ್ದ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿಗೆ ಈ ಬಾರಿ ಸುಲಭ ಗೆಲುವು ಸಾಧ್ಯವಾಗುತ್ತಾ? ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡತೊಡಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಕಳೆದ ಎರಡು ವರ್ಷಗಳಿಂದ ಜೆಡಿಎಸ್ ವಿರುದ್ಧ ಬಂಡಾಯ ಎದ್ದು ಕಾಂಗ್ರೆಸ್ ಸಖ್ಯದಲ್ಲಿದ್ದ ಚೆಲುವರಾಯಸ್ವಾಮಿ ಕೆಲವು ದಿನಗಳ ಹಿಂದೆಯಷ್ಟೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಅಷ್ಟೇ ಅಲ್ಲ ಈ ಬಾರಿ ನಾನೇ ಗೆಲ್ಲುವ ಮೂಲಕ ಕಾಂಗ್ರೆಸ್ ಬಾವುಟವನ್ನು ಹಾರಿಸುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮತ್ತು ಜೆಡಿಎಸ್ ಈ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದನ್ನು ನೋಡಿದರೆ ಭಾರೀ ಪೈಪೋಟಿ ಏರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಚೆಲುವರಾಯಸ್ವಾಮಿ ಅವರ ಸ್ವ ಕ್ಷೇತ್ರದಲ್ಲೇ ಜೆಡಿಎಸ್ ಯಶಸ್ವಿ ಸಮಾವೇಶ ನಡೆಸಿದೆ. ಈ ಸಮಾವೇಶದಲ್ಲಿ ಅವರಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿರುವ ಕೆ.ಸುರೇಶ್ಗೌಡ ಅವರು ಸವಾಲುಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
'ನಾವು ಪಾಂಡವರು, ನಮ್ಮಲ್ಲಿ ಹಣವಿಲ್ಲ. ಆದರೆ, ಶ್ರೀಕೃಷ್ಣನ ರೀತಿ ದೇವೇಗೌಡರಿದ್ದಾರೆ. ಬಾ ಗೆಲುವು ನನ್ನದೋ-ನಿನ್ನದೋ ನೋಡೋಣ. ರಾಜಕೀಯದಲ್ಲಿ ನಾನು ಐಶ್ವರ್ಯ, ಅಂತಸ್ತು ಕಳೆದುಕೊಂಡಿರಬಹುದು. ಜನರ ಪ್ರೀತಿ-ವಿಶ್ವಾಸ ಸಂಪಾದಿಸಿದ್ದೇನೆ. ಆದರೆ, ನೀವು ಮಾಡಿದ್ದು ಏನು? ಹಣಕ್ಕಾಗಿ ಹೆತ್ತ ತಾಯಿಯನ್ನೇ ಒದ್ದು ಬೇರೆಯವರ ಜೊತೆ ಕೈಜೋಡಿಸಿ ಬೆನ್ನಿಗೆ ಚೂರಿ ಹಾಕಿದಿರಿ' ಎಂದು ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
'ಕ್ಷೇತ್ರದ ಅಭಿವೃದ್ಧಿಯನ್ನೇ ಮರೆತ ನೀವು ಚುನಾವಣೆ ಸಮೀಪಿಸುತ್ತಿದ್ದಂತೆ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಂಡು ಪರ್ಸೆಂಟೇಜ್ ಪಡೆದು, ಆ ಹಣದಲ್ಲಿ ಚುನಾವಣೆ ನಡೆಸಲು ಸಿದ್ಧರಾಗಿದ್ದೀರಿ. ನಾನು ಹಣ ಕಳೆದುಕೊಂಡಿರಬಹುದು. ಆದರೆ, ಜನತೆಯ ಪ್ರೀತಿ-ವಿಶ್ವಾಸ ಗಳಿಸಿರುವ ನನ್ನನ್ನು ಆ ಜನತೆಯೇ ಕೈಹಿಡಿಯಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ನೀನು, ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, 27 ಕೇಸ್ ದಾಖಲಿಸಿ ಕಿರುಕುಳ ನೀಡಿ ನನ್ನ ಕಣ್ಣಲ್ಲಿ ರಕ್ತ ಬರಿಸಿದ್ದೀಯೇ. ನನ್ನ ಬೆಂಬಲಕ್ಕೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ಈ ಕ್ಷೇತ್ರದ ಜನತೆ ಇದ್ದಾರೆ. ಈ ಚುನಾವಣೆಯಲ್ಲಿ ನಾನಾ-ನೀನಾ ನೋಡೋಣ' ಎಂದ ಸವಾಲು ಎಸೆದರು.
'ಬೆಂಗಳೂರಿನ ಮೀರ್ ಸಾದಿಕ್ (ಜಮೀರ್ ಅಹ್ಮದ್) ಹಾಗೂ ನಾಗಮಂಗಲದ ಮಲ್ಲಪ್ಪ ಶೆಟ್ಟಿ (ಚಲುವರಾಯಸ್ವಾಮಿ) ಉಂಡ ಮನೆಗೆ ದ್ರೋಹ ಮಾಡಿ ಹೋಗಿದ್ದೀರಿ. ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಹಣ ಹಂಚಿಸಿದ್ದೀರಿ. ಆದರೆ, ಅದಕ್ಕೆ ಜನತೆಯೇ ಉತ್ತರ ಕೊಟ್ಟಿದ್ದಾರೆ. ನನ್ನ ಆರ್ಥಿಕ ಮೂಲವನ್ನೆಲ್ಲಾ ಮುಚ್ಚಿಸಿರುವ ನಿನ್ನನ್ನು ಈ ಕ್ಷೇತ್ರದಿಂದ ಖಾಲಿ ಮಾಡಿಸುವುದೇ ನನ್ನ ಗುರಿ' ಎಂದರು.
ಸುರೇಶ್ ಗೌಡ ಅವರು ಹಾಕಿರುವ ಸವಾಲುಗಳಿಗೆ ಚೆಲುವರಾಯ ಸ್ವಾಮಿ ಯಾವ ರೀತಿಯ ಜವಾಬ್ ನೀಡುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.











Click it and Unblock the Notifications