ಜೆಡಿಎಸ್ನಲ್ಲಿ ದೇವೇಗೌಡರ ಕಾಲಕ್ಕೆ ಜಾತ್ಯತೀತತೆ ಮುಗಿಯಿತು: ಚಲುವರಾಯಸ್ವಾಮಿ
ಮಂಡ್ಯ, ಜೂ. 8: ಜಾತ್ಯತೀತ ಜನತಾದಳ ಪಕ್ಷ ಈಗ ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ. ದೇವೇಗೌಡರ ಕಾಲಕ್ಕೇ ಅದು ಮುಗಿದುಹೋಯಿತು. ಈಗ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣನವರ ಕಾಲವಾಗಿದ್ದು, ಅವಕಾಶವಾದಿ ರಾಜಕಾರಣದಲ್ಲಿ ಮುಂದುವರಿಯುತ್ತಿದೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರು ಜೆಡಿಎಸ್ ಅನ್ನು ಜಾತ್ಯತೀತ ತತ್ವದಡಿ ಕಟ್ಟಿ ಬೆಳೆಸಿದ್ದರು. ಈಗ ಅದರಲ್ಲಿ ಜಾತ್ಯತೀತತೆ ಮಾಯವಾಗಿದೆ. ಕಾಂಗ್ರೆಸ್ನಿಂದಲೇ ಜೆಡಿಎಸ್ಗೆ ಹೆಚ್ಚಿನ ಅನುಕೂಲವಾಗಿದೆಯೇ ವಿನಃ ಜೆಡಿಎಸ್ನಿಂದ ಕಾಂಗ್ರೆಸ್ಗೆ ಯಾವ ಅನುಕೂಲವೂ ಆಗಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನ ಋಣ ತೀರಿಸಲಿ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದನ್ನು ಬಿಟ್ಟು ದೇವೇಗೌಡರನ್ನೇ ಬೆಂಬಲಿಸಿತ್ತು. ಪರಾಭವಗೊಂಡ ನಂತರ ರಾಜ್ಯಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೊಮ್ಮೆ ದೇವೇಗೌಡರನ್ನೇ ಬೆಂಬಲಿಸಿ ಆಯ್ಕೆ ಮಾಡಿತ್ತು. ಈ ಬಾರಿಯ ರಾಜ್ಯ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ನ ಋಣ ತೀರಿಸಲಿ ಎಂದು ಹೇಳಿದರು.

ಪ್ರಸ್ತುತ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಅಲ್ಪಸಂಖ್ಯಾತ ವಿಭಾಗದ ಅಭ್ಯರ್ಥಿಯಾಗಿರುವ ಮನ್ಸೂರ್ ಖಾನ್ ಅವರಿಗೆ ಬೇಷರತ್ ಬೆಂಬಲ ನೀಡಬೇಕು. ಆತ್ಮಸಾಕ್ಷಿಯ ಮತಗಳು ನಮ್ಮ ಅಭ್ಯರ್ಥಿಗೆ ಬಂದೇ ಬರುತ್ತವೆ. ಒಂದು ವೇಳೆ ನಮ್ಮ ಅಭ್ಯರ್ಥಿ ಸೋಲನ್ನು ಅನುಭವಿಸಿದರೆ ಮುಂದೆ ಅವರಿ ಪಕ್ಷ ಉನ್ನತ ಹುದ್ದೆ ನೀಡಲಿದೆ ಎಂದು ತಿಳಿಸಿದರು.

ಕಳೆದ 2018ರಲ್ಲಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ಎದುರಾದಾಗ ನಾವೇ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಬೆಂಬಲ ನೀಡಿದ್ದೆವು. ಇದನ್ನು ಅವರೇ ಹೇಳಿದ್ದಾರೆ. ಕೆಲ ವಿರೋಧಿ ನಿರ್ಧಾರಗಳಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ವಿಧಾನ ಪರಿಷತ್ತಿನ ಸಭಾಪತಿ ಚುನಾವಣೆ ವೇಳೆಯಲ್ಲೂ ಬಿಜೆಪಿಗೆ ಬೆಂಬಲ ನೀಡಿದರು. ಅಷ್ಟೇ ಏಕೆ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲೂ ಕಾಂಗ್ರೆಸ್ 8 ಸ್ಥಾನವಿದ್ದರೂ, ಜೆಡಿಎಸ್ ನವರು ಬಿಜೆಪಿ ಬೆಂಬಲಿಸಿದ್ದರು. ಇದೆಲ್ಲವೂ ಕಾಂಗ್ರೆಸ್ಗೆ ಅವರು ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ಈಗ ಜಾತ್ಯಾತೀತ ತತ್ವದ ಮಾತುಗಳನ್ನಾಡುತ್ತಾರೆ ಎಂದು ಜರಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications