ಮಂಗಳವಾರ ಮಂಡ್ಯದಲ್ಲೂ ಭೂಕಂಪ : ನಿಜವೇ, ಸುಳ್ಳೇ
ಮಂಡ್ಯ, ಫೆಬ್ರವರಿ 7: ಮಳವಳ್ಳಿ ತಾಲೂಕಿನ ಚಿಕ್ಕಬಾಗಲು ಗ್ರಾಮದಲ್ಲಿ ಮನೆಯ ಗೋಡೆಯೊಂದು ಬಿರುಕು ಬಿಟ್ಟಿದ್ದು, ಇದು ಭೂಕಂಪನದಿಂದಲೇ ಆಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಭೂಕಂಪನದಿಂದ ಒಂದೇ ಮನೆಯ ಗೋಡೆ ಬಿರುಕು ಬಿಡಲು ಸಾಧ್ಯವೇ ಎಂಬುದು ಮಾತ್ರ ಉತ್ತರ ಸಿಕ್ಕದ ಪ್ರಶ್ನೆ. ಆದರೆ ಗ್ರಾಮದಲ್ಲಂತೂ ಭಯದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ಮಹದೇವಸ್ವಾಮಿ ಅವರಿಗೆ ಸೇರಿದ ಮನೆ ಗೋಡೆ ಬಿರುಕು ಬಿಟ್ಟಿದ್ದು, ಅವರು ಭಯಗೊಂಡಿದ್ದಾರೆ. ಗೋಡೆ ಅಷ್ಟೇ ಅಲ್ಲ, ಮನೆಯ ಒಳಗೆ ಮತ್ತು ಹೊರಗೆ ನೆಲವೂ ಬಿರುಕು ಬಿಟ್ಟಿದೆ. ಮೇಲ್ನೋಟಕ್ಕೆ ಭೂಮಿಯ ಮೇಲ್ಭಾಗ ಕೆಲವು ಮೀಟರ್ ನಷ್ಟು ಬಿರುಕು ಕಾಣಿಸಿಕೊಂಡಿದೆ. ಆದರೆ ಬೇರೆ ಯಾವುದೇ ಜಾಗದಲ್ಲಿ ಈ ರೀತಿ ಚಿಹ್ನೆಗಳು ಕಂಡು ಬಂದಿಲ್ಲ.[ವಿರೋಧಿಗಳನ್ನು ರೊಚ್ಚಿಗೆಬ್ಬಿಸಿದ ಮೋದಿಯ 'ಭೂಕಂಪ'ದ ಮಾತು!]

ಉತ್ತರ ಭಾರತದ ಕೆಲವು ಕಡೆ ಭೂಮಿ ಕಂಪಿಸಿರುವ ಬಗ್ಗೆ ವರದಿಗಳು ಬಂದ ಬೆನ್ನಲ್ಲೇ ಇಲ್ಲಿನ ಮನೆಯ ಸುತ್ತಮುತ್ತ ಕಂಪನ ಮತ್ತು ಬಿರುಕು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಮನೆ ಮಾಲೀಕ ಮಹದೇವಸ್ವಾಮಿ ಅವರ ಪ್ರಕಾರ ಭಾನುವಾರ ರಾತ್ರಿ ಕಡಿಮೆ ಪ್ರಮಾಣದಲ್ಲಿ ಕಂಪಿಸುತ್ತಿದ್ದ ಭೂಮಿಯು ಸೋಮವಾರ ಮಧ್ಯಾಹ್ನ ಹೆಚ್ಚಾಯಿತು. ಹೀಗಾಗಿ ಮನೆಯ ಗೋಡೆ ಬಿರುಕು ಬಿಟ್ಟಿದೆ.
ಘಟನೆ ಮಾಹಿತಿ ತಿಳಿದ ತಹಸೀಲ್ದಾರ್ ದಿನೇಶ್ಚಂದ್ರ, ತಾಲೂಕು ಪಂಚಾಯಿತಿ ಇಇ ಮಣಿಕಂಠ, ಲೋಕೋಪಯೋಗಿ ಇಂಜಿನಿಯರ್ ಮಹದೇವಸ್ವಾಮಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್.ವಿಶ್ವಾಸ್, ಸದಸ್ಯರಾದ ಆಶಾ ಪ್ರಭುಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯ ಕಾಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮಣ್ಣಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಸ್ವೀವನ್ ಸನ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.[ದೆಹಲಿ ಸೇರಿದಂತೆ ಉತ್ತರ ಭಾರತದ ಹಲೆವೆಡೆ ಭೂಕಂಪ]

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಅಂತರ್ಜಲ ಕಡಿಮೆ ಆಗಿರುವುದರಿಂದ ಭೂಮಿ ಬಿರುಕು ಬಿಟ್ಟಿದೆ ಹೊರತು ಭೂಕಂಪನದಿಂದ ಅಲ್ಲ ಎಂದಿದ್ದಾರೆ. ಯಾವುದಕ್ಕೂ ರಿಕ್ಟರ್ ಮಾಪನದಿಂದ ಪರಿಶೀಲಿಸಿದ ಬಳಿಕವಷ್ಟೆ ನಿಜವಾಗಿಯೂ ಆಗಿದ್ದು ಭೂಕಂಪನವೇ ಎಂಬುದು ತಿಳಿಯಬೇಕಿದೆ.
ಇನ್ನೊಂದು ಮಾತು ಮಂಡ್ಯ ಜಿಲ್ಲೆಯಿಂದ ಭೂಕಂಪದ ಸುದ್ದಿ ಪದೇ ಪದೇ ಕೇಳಿಬರುತ್ತಿದೆ. ಆದರೆ ಅದು ರಾಜಕೀಯ ಭೂಕಂಪ.












Click it and Unblock the Notifications