ಚುನಾವಣೆಯಲ್ಲಿ ತಾಕತ್ ತೋರಿಸ್ತೀನಿ: ಕೆಸಿಎನ್ ಗೆ ಪುಟ್ಟರಾಜು ಸವಾಲ್
ಮಂಡ್ಯ, ಡಿಸೆಂಬರ್ 02: ಉಪ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ನಾಯಕರ ಮಾತಿನ ಭರಾಟೆ ಜೋರಾಗಿದೆ. ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರಿಗೆ ಜೆಡಿಎಸ್ ಶಾಸಕ ತರಾಟೆಗೆ ತೆಗೆದುಕೊಂಡಿದ್ದು, ಉಪ ಚುನಾವಣೆಯಲ್ಲಿ ನನ್ನ ತಾಕತನ್ನು ತೋರಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
ಸಿ.ಎಸ್. ಪುಟ್ಟರಾಜು ಮಂತ್ರಿಯಾಗಿದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನ ಕೊಟ್ಟರು, ನಾನು ಸೀರೆ ಹುಟ್ಟು ಹೋಗಿದ್ದರೆ ನನಗೂ ಅನುದಾನ ಕೊಟ್ಟಿರುತ್ತಿದ್ದರು ಎಂದಿದ್ದರು. ಈ ಮಾತಿಗೆ ಸಿ.ಎಸ್.ಪುಟ್ಟರಾಜು ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಸಂದರ್ಭದಲ್ಲಿ ಮಾತನಾಡುತ್ತಾ, ಡಿ.ಸಿ.ತಮ್ಮಣ್ಣ ಕಾಮಾಟಿಪುರ ಅಂದಿದ್ದಕ್ಕೆ ಬಾಂಬೆಯಿಂದ ಕೆ.ಆರ್.ಪೇಟೆಗೆ ಬಂದು ಸುದ್ದಿಗೋಷ್ಠಿ ಮಾಡುತ್ತಾರೆ, ಅದೇ ನಾರಾಯಣಗೌಡ ಮಹಿಳೆಯರ ಬಗ್ಗೆ ಮಾತನಾಡಿದರೆ ಅದು ಅವಮಾನ ಅಲ್ವಾ ಎಂದು ಟೀಕಿಸಿದರು.

ಕಳೆದ ಚುನಾವಣೆಯಲ್ಲಿ ಹೆಚ್,ಡಿ,ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಕಾಲಿಡಿದು ನಾರಾಯಣಗೌಡ ಅವರಿಗೆ ಟಿಕೆಟ್ ಕೊಡಿಸಿದೆ, ಈಗ ನನ್ನ ಬಗ್ಗೆಯೇ ಆ ಅಯೋಗ್ಯ ಮಾತನಾಡುತ್ತಾನೆ. ಅವನಿಗೆ ನನ್ನ ತಾಕತ್ತು ಏನೆಂಬುದು ಉಪ ಚುನಾವಣೆಯಲ್ಲಿ ತೋರಿಸುತ್ತೆನೆ ಎಂದರು.
ಸುಪ್ರೀಂ ಕೋರ್ಟ್ ನಿಂದ ಅನರ್ಹಗೊಂಡಿರುವವರಿಗೆ ಮತ ಹಾಕಬಾರದು, ನೀವು ಅವರನ್ನು ಕ್ಷೇತ್ರದಿಂದ ತಿರಸ್ಕರಿಸಬೇಕೆಂದು ಮತದಾರರಿಗೆ ಹೇಳಿದರು.
ಇದೇ ಸಂದರ್ಭದಲ್ಲಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಹಂಚಿದ ಸೀರೆಗಳನ್ನು ಪ್ರದರ್ಶಿಸಿ, ಅವರು ಸೀರೆಗಳನ್ನು ಕೆಜಿ ಲೆಕ್ಕದಲ್ಲಿ ತಂದು ಹಂಚುತ್ತಿದ್ದಾರೆ ಎಂದು ಆರೋಪ ಮಾಡಿದರು. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications