ಮಂಡ್ಯದಲ್ಲಿ ಪತ್ನಿಯ ಸಾವಿಗೆ ಹೆದರಿ ಪತಿ ಸಾವಿಗೆ ಶರಣು: ಸುಂದರ ಸಂಸಾರದಲ್ಲಿ ಆಗಿದ್ದೇನು..?
ಮಂಡ್ಯ, ಆಗಸ್ಟ್ 21: ಪತ್ನಿಯ ಆತ್ಮಹತ್ಯೆ ಹಾಗೂ ಆಕೆಯ ಅನುಮಾನಸ್ಪದ ಸಾವಿನ ಪರಿಸ್ಥಿತಿಯನ್ನು ಎದುರಿಸಲಾಗದೇ ಪತಿಯೂ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನಡೆದಿದೆ. ಗದ್ದೆ ಹೊಸೂರು ಗ್ರಾಮದ ಮೋಹನ್ (26) ಪತ್ನಿಯ ಸಾವಿಗೆ ಹೆದರಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಕೆ.ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರಿನ ಮೋಹನ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿ ಸ್ವಾತಿ (21) ಮೃತದೇಹ ಪತ್ತೆಯಾಗಿತ್ತು. ಗೃಹಿಣಿಯಾಗಿ ಮನೆಯಲ್ಲಿದ್ದ ಸ್ವಾತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾತಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೋಷಕರು ಮೋಹನ್ ಮನೆಗೆ ದೌಡಾಯಿಸಿದ್ದಾರೆ.

ಮಗಳ ಮೃತದೇಹ ಕಂಡ ಆಕ್ರೋಶಗೊಂಡ ಮೃತ ಸ್ವಾತಿ ಕುಟುಂಬಸ್ಥರು ನಮ್ಮ ಮಗಳನ್ನು ಗಂಡ ಮೋಹನ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋಹನ್ ಮನೆ ಹಾಗೂ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕೊನೆಯಲ್ಲಿ ಮನೆಗೆ ಬೆಂಕಿ ಹಚ್ಚಿದ್ದಾರೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ಮನೆ ಬೆಂಕಿಗಾಹುತಿಯಾಗಿದೆ.
ಮನೆಗೆ ಬೆಂಕಿ ಹಚ್ಚುತ್ತಿದ್ದಂತೆ ಅತ್ತ ಮೋಹನ್ ಹಾಗೂ ಆತನ ಪೋಷಕರು ಸ್ಥಳದಿಂದ ಪರಾರಿಯಾಗಿದ್ದರು. ಈ ವಿಷಯ ತಿಳಿದ ಕೂಡಲೇ ಕಿಕ್ಕೇರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಸ್ವಾತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇತ್ತ ನಾಪತ್ತೆಯಾಗಿರುವ ಮೋಹನ್ ಹಾಗೂ ಆತನ ಪೋಷಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಮೋಹನ್ ಪತ್ನಿಯ ಸಾವಿಗೆ ಹೆದರಿ ಕೆರೆಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸದ್ಯ ಕೆರೆಯಿಂದ ಪೊಲೀಸರು ಮೋಹನ್ ಶವ ಹೊರತೆಗೆದ್ದಾರೆ. ಗ್ರಾಮಸ್ಥರ ಸಹಾಯದೊಂದಿಗೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಮೋಹನ್- ಸ್ವಾತಿ ದಂಪತಿಗೆ ಒಂದೂವರೆ ವರ್ಷದ ಮಗು ಇದ್ದು, ತಂದೆ-ತಾಯಿ ದಾರುಣ ಅಂತ್ಯದಿಂದ ಮಗು ಅನಾಥವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications