ಬೂಕನಕೆರೆಯಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ನಾದಿನಿಯಿಂದ ಗೃಹಿಣಿಯ ಹತ್ಯೆ
ಕೆ.ಆರ್.ಪೇಟೆ, ಅಕ್ಟೋಬರ್.03: ಗೃಹಿಣಿಗೆ ತವರಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಲ್ಲದೆ, ಅದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದಿದೆ.
ಬೂಕನಕೆರೆ ಗ್ರಾಮದ ಅಶೋಕ್ ಎಂಬಾತನ ಪತ್ನಿ ಗಾನಶ್ರೀ ಅಲಿಯಾಸ್ ಶೃತಿ(28) ವರದಕ್ಷಿಣೆ ಭೂತಕ್ಕೆ ಬಲಿಯಾದ ನತದೃಷ್ಟ ಗೃಹಿಣಿ. ಘಟನೆಗೆ ಸಂಬಂಧಿಸಿದಂತೆ ಮೃತಳ ತಂದೆ ಎ.ಎಸ್.ಪರಶಿವಮೂರ್ತಿ ನೀಡಿದ ದೂರಿನ ಮೇರೆಗೆ ಮೃತ ಗಾನಶ್ರೀ ಮಾವ ಬೂಕನಕೆರೆಯ ನಂಜೇಗೌಡ, ಅತ್ತೆ ಜಯಮ್ಮ, ನಾದನಿ ಆಶಾ ಅವರನ್ನು ಬಂಧಿಸಲಾಗಿದೆ.
ನಾಪತ್ತೆಯಾಗಿರುವ ಪತಿ ಅಶೋಕ ಪತ್ತೆಗೆ ಬಲೆ ಬೀಸಲಾಗಿದೆ. ಕಳೆದ ಎಂಟು ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಎ.ಎಸ್.ಪರಶಿವಮೂರ್ತಿ ಅವರ ಮಗಳು ಗಾನಶ್ರೀ(ಶೃತಿ)ಯನ್ನು ಬೂಕನಕೆರೆ ಗ್ರಾಮದ ನಂಜೇಗೌಡ ಅವರ ಪುತ್ರ ಅಶೋಕನಿಗೆ ಸಾಕಷ್ಟು ವರೋಪಚಾರ ನೀಡಿ ವಿವಾಹ ಮಾಡಿಕೊಡಲಾಗಿತ್ತು.

ವಿವಾಹವಾದ ಮೂರು ವರ್ಷಗಳವರೆಗೆ ದಂಪತಿಗಳು ಅನ್ಯೋನ್ಯವಾಗಿದ್ದರು. ಆ ನಂತರ ಪತಿ ಅಶೋಕ ಕುಡಿತ ಮತ್ತಿತರರ ಚಟಗಳ ದಾಸನಾಗಿ ತವರು ಮನೆಯಿಂದ ಇನ್ನಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಪತ್ನಿ ಗಾನಶ್ರೀಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು.
ಇದಕ್ಕೆ ಅತ್ತೆ ಜಯಮ್ಮ, ಮಾವ ನಂಜೇಗೌಡ, ನಾದನಿ ಆಶಾ ಕೂಡ ಕುಮ್ಮಕ್ಕು ನೀಡುತ್ತಿದ್ದರಲ್ಲದೆ ಸದಾ ಮನೆಯಲ್ಲಿ ಜಗಳವಾಡುತ್ತಾ ಗಂಡ ಹೆಂಡತಿ ಜೊತೆಯಾಗಿರಲು ಬಿಡದೇ ಬೇರೆ ಮಾಡಲು ಪ್ರಯತ್ನಿಸುತ್ತಾ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಹಲವು ಬಾರಿ ಗಾನಶ್ರೀ ತವರು ಮನೆಯವರು ಬಂದು ನ್ಯಾಯ ಪಂಚಾಯಿತಿ ಮಾಡಿ ತಿಳುವಳಿಕೆ ನೀಡಿದ್ದರೂ ಸಹ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ. ಈ ನಡುವೆ ಸೆ.30ರಂದು ಬೆಳಗ್ಗೆ ಸುಮಾರು 10ಗಂಟೆ ಸಮಯದಲ್ಲಿ ಗಾನಶ್ರೀ ಅವರಿಗೆ ಗಂಡ, ಅತ್ತೆ, ಮಾವ, ನಾದನಿ ಸೇರಿಕೊಂಡು ದೈಹಿಕವಾಗಿ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆ ಮಾಡಿದ್ದಾರೆ.
ನಂತರ ಆಕೆಯ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿ ಪೋಷಕರು ಬರುವಷ್ಟರಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು ಎಂದು ಮೃತಳ ತಂದೆ ಎ.ಎಸ್.ಪರಶಿವಮೂರ್ತಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರನಲ್ಲಿ ತಿಳಿಸಿದ್ದಾರೆ.
ಮೃತ ಗಾನಶ್ರೀ ಅವರಿಗೆ ಪುತ್ರಿ ಅಹಲ್ಯ(6) ಮತ್ತು ಪುತ್ರ ಮೌನಿತ್(8) ಎಂಬ ಇಬ್ಬರು ಮಕ್ಕಳೂ ಕೂಡ ಇದ್ದಾರೆ. ದೂರು ಸ್ವೀಕರಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ಇನ್ಸ್ ಪೆಕ್ಟರ್ ಆನಂದ್ ಗೌಡ ಅವರು ಗ್ರಾಮದಲ್ಲಿಯೇ ತಲೆ ಮರೆಸಿಕೊಂಡಿದ್ದ ಮೃತ ಗೃಹಿಣಿಯ ಅತ್ತೆ ಜಯಮ್ಮ, ಮಾವ ನಂಜೇಗೌಡ, ನಾದನಿ ಆಶಾ ಅವರನ್ನು ಬಂಧಿಸಿದ್ದಾರೆ.
ತಲೆ ಮರೆಸಿಕೊಂಡಿರುವ ಗಂಡ ಅಶೋಕನಿಗಾಗಿ ತೀವ್ರ ಶೋಧ ನಡೆದಿದೆ.












Click it and Unblock the Notifications