ಮಂಡ್ಯ: ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಮಂಡ್ಯ, ಅಕ್ಟೋಬರ್ 07 : ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯಿಂದಾಗಿ ಇದುವರೆಗೆ ಭರ್ತಿಯಾಗದೆ ಒಣಗಿದ್ದ ಕೆರೆಗಳಲ್ಲಿ ನೀರು ಕಾಣಿಸಿಕೊಂಡಿದ್ದು, ರೈತರು ಹರ್ಷ ಪಡುವಂತಾಗಿದೆ.
ಮಳೆಯಿಂದಾಗಿ ಕೆರೆಗಳಲ್ಲಿ ನೀರು ಕಾಣಿಸುತ್ತಿದ್ದು, ಬಾಗಿನ ಅರ್ಪಿಸುವ ಕಾರ್ಯಗಳು ಸಮಾರೋಪಾದಿಯಲ್ಲಿ ಸಾಗಿದೆ. ಹೇಮಾವತಿ ಜಲಾಶಯ ಯೋಜನೆಯ ಕಾಲುವೆಗಳ ಮೂಲಕ ಹರಿದ ನೀರಿನಿಂದಾಗಿ ಹಾಗೂ ಸುರಿದ ಧಾರಾಕಾರ ಮಳೆಯಿಂದಾಗಿ ಕೆ.ಆರ್.ಪೇಟೆ ತಾಲೂಕಿನ 130 ಕೆರೆಗಳ ಪೈಕಿ 115ಕ್ಕೂ ಹೆಚ್ಚಿನ ಕೆರೆ-ಕಟ್ಟೆಗಳು ಭರ್ತಿಯಾಗಿವೆ.

ಇನ್ನು ತಾಲೂಕಿನಲ್ಲಿಯೇ ಅತೀ ದೊಡ್ಡ ಕೆರೆಗಳಾದ ದೇವೀರಮ್ಮಣ್ಣಿ ಕೆರೆ, ವಳಗೆರೆಮೆಣಸ ದೊಡ್ಡಕೆರೆ, ಅಗ್ರಹಾರಬಾಚಹಳ್ಳಿ ಕೆರೆ, ಹೊಸಹೊಳಲು ದೊಡ್ಡಕೆರೆ ಹಾಗೂ ಬಳ್ಳೇಕೆರೆ ಅಮಾನಿಕೆರೆಯು, ಮಾಕವಳ್ಳಿ, ಸಿಂಧುಘಟ್ಟ ಭರ್ತಿಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ.
ಕೆ.ಆರ್.ಪೇಟೆ ಪಟ್ಟಣದ ಇತಿಹಾಸದಲ್ಲಿ ದೇವೀರಮ್ಮಣ್ಣಿ ಕೆರೆಯು ಯಾವಾಗಲೂ ಒಣಗಿರಲಿಲ್ಲ. ಆದರೆ ಈ ಬಾರಿ ಒಣಗಿತ್ತು. ಇದರಿಂದ ಕುಡಿಯುವ ನೀರಿಗೆ ತೀವ್ರವಾದ ಸಂಕಷ್ಟ ಎದುರಾಗಿತ್ತು.
ಹೀಗಾಗಿ ಹೇಮಾವತಿ ನದಿಯ ಕಾಲುವೆಗಳ ಮೂಲಕ ನೀರನ್ನು ಕೆರೆಗಳಿಗೆ ಹರಿಸಿ ತುಂಬಿಸುವ ಪ್ರಯತ್ನವನ್ನು ಮಾಡುತ್ತಿರುವಾಗಲೇ ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಮೂರು ವರ್ಷಗಳ ಬರಗಾಲವು ಮೂರೇ ಮೂರು ದಿನದಲ್ಲಿ ಮಾಯವಾಗಿ ಕೆರೆ ಭರ್ತಿಯಾಗಿದೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ ಈ ಹಿಂದೆ ಬರದ ಛಾಯೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿತ್ತಲ್ಲದೆ, ಬಹಳಷ್ಟು ರೈತರು ಬೆಳೆಬೆಳೆಯಲು, ಜಾನುವಾರು ಸಾಕಲು ಮೇವಿಲ್ಲದೆ ಸಂಕಷ್ಟ ಸಿಲುಕಿದ್ದರು.
ಅಂತರ್ಜಲ ಕುಸಿದ ಪರಿಣಾಮ ಕೊಳವೆ ಬಾವಿಗಳಲ್ಲೂ ನೀರು ಬರುತ್ತಿರಲಿಲ್ಲ. ಈಗ ಎಲ್ಲೆಡೆ ಉತ್ತಮವಾಗಿ ಮಳೆಯಾದ ಪರಿಣಾಮ ಕೆರೆಕಟ್ಟೆಗಳು ತುಂಬಿವೆ. ಅಂತರ್ಜಲವೂ ಹೆಚ್ಚಾಗಿರುವುದು ಎಲ್ಲರಿಗೂ ಸಮಾಧಾನ ತಂದಿದೆ.
ಈಗಾಗಲೇ ಕೆ.ಆರ್.ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆ, ಹೊಸಹೊಳಲು ದೊಡ್ಡಕೆರೆ ಹಾಗೂ ಬಳ್ಳೇಕೆರೆಯ ಅಮಾನಿಕೆರೆ ಭರ್ತಿಯಾಗಿದ್ದು, ವಿಶೇಷ ಪೂಜೆಯೊಂದಿಗೆ ಬಾಗಿನ ಅರ್ಪಿಸುವ ಕಾರ್ಯವೂ ನಡೆದಿದೆ.
ಒಟ್ಟಾರೆ ಎಲ್ಲೆಡೆ ಕೆರೆಕಟ್ಟೆಗಳಲ್ಲಿ ನೀರು ಕಾಣಿಸುತ್ತಿರುವುದು ಬರಗಾಲ ನೀಗುವ ಕಾಲ ಬಂತು ಎಂಬುದನ್ನು ತೋರಿಸುತ್ತಿದೆ.












Click it and Unblock the Notifications