'ರಮ್ಯಾ ಅವರ ಹಿಂದಿನ ಜನ್ಮದ ಬಗ್ಗೆ ಗೊತ್ತಿಲ್ಲ'
ಮಂಡ್ಯ, ಆಗಸ್ಟ್ 31 : ಆರ್ಎಸ್ಎಸ್ ಮತ್ತು ಬಿಜೆಪಿ ಕುರಿತು ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ನೀಡಿರುವ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು' ಎಂದು ಅವರು ಸಲಹೆ ಕೊಟ್ಟಿದ್ದಾರೆ.
ಮಂಗಳವಾರ ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಸ್ವಾತಂತ್ರ್ಯ ಹೋರಾಟ ನಡೆದಾಗ ನಾನು ಹುಟ್ಟಿರಲಿಲ್ಲ. ಬಹುಶಃ ರಮ್ಯಾ ಅವರ ಹಿಂದಿನ ಜನ್ಮದ ಬಗ್ಗೆ ಗೊತ್ತಿಲ್ಲ. ಹಿಂದಿನ ಜನ್ಮದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರಬಹುದು' ಎಂದು ವ್ಯಂಗ್ಯವಾಡಿದರು.[ಸ್ವತಂತ್ರ ಸಂಗ್ರಾಮದಲ್ಲಿ ಬಿಜೆಪಿ, ಆರೆಸ್ಸೆಸ್ ಭಾಗವಹಿಸಿಲ್ಲ: ರಮ್ಯಾ]

'ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಮಂಡ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ವಿಷಯಗಳ ಬಗೆಗೆ ಗಮನ ನೀಡಬೇಕು. ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು' ಎಂದು ರಮ್ಯಾ ಅವರಿಗೆ ಸಲಹೆ ನೀಡಿದರು.[ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]
ಜಾಗರೂಕರಾಗಿರಬೇಕು : 'ಸ್ವಾತಂತ್ರ್ಯ ಹೋರಾಟದ ಬಗೆಗೆ ಇತಿಹಾಸದ ಪುಸ್ತಕಗಳಲ್ಲಿ ಓದಿದ್ದೇನೆ. ಅಲ್ಲಿಯೂ ವಿಭಿನ್ನ ಅಭಿಪ್ರಾಯಗಳಿವೆ. ಸಾವರ್ಕರ್, ಬೋಸ್ ಕುರಿತು ಕೆಟ್ಟದ್ದು ಹಾಗೂ ಒಳ್ಳೆಯದ್ದು ಎರಡನ್ನೂ ಹೇಳುತ್ತಾರೆ. ಅಂತಹ ವಿಷಯಗಳ ಬಗೆಗೆ ಮಾತನಾಡುವಾಗ ಜಾಗರೂಕತೆ ವಹಿಸಬೇಕು' ಎಂದು ಕುಮಾರಸ್ವಾಮಿ ಹೇಳಿದರು.
ರಮ್ಯಾ ಹೇಳಿದ್ದೇನು? : ಮಂಗಳವಾರ ಮಂಡ್ಯದಲ್ಲಿ ಮಾತನಾಡಿದ್ದ ರಮ್ಯಾ ಅವರು, 'ಕಾಂಗ್ರೆಸ್ನವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ಹೋರಾಟ ಮಾಡಿಲ್ಲ. ಅವರು ಬ್ರಿಟಿಷರೊಂದಿಗೆ ಸೇರಿದ್ದರು' ಎಂದು ಹೇಳಿದ್ದರು.












Click it and Unblock the Notifications