ಚಿತ್ರಗಳು : ಆದಿಚುಂಚನಗಿರಿ ಮಠದಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ
Recommended Video

ಮಂಡ್ಯ, ಜೂನ್ 13 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಬುಧವಾರ ಕ್ಷೇತ್ರದ ಕಾಲಭೈರವೇಶ್ವರ ದೇವಾಲಯದಲ್ಲಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆ ವಿಶೇಷ ಪೂಜೆ ಸಲ್ಲಿಸಿದರು.
ಬುಧವಾರ ಅಮಾವಾಸ್ಯೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಬೆಂಗಳೂರಿನಲ್ಲಿನ ವಿಜಯನಗರದಲ್ಲಿ ಶಾಖಾ ಮಠಕ್ಕೆ ಅವರು ಹಲವು ಬಾರಿ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ನಾಗಮಂಗಲ ಶಾಸಕ ಸುರೇಶ್ ಗೌಡ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಮಾವಾಸ್ಯೆ ಪೂಜೆಯಲ್ಲಿ ಭಾಗಿ
ಮುಖ್ಯಮಂತ್ರಿಯಾಗುವ ಮೊದಲು ಸಹ ಎಚ್.ಡಿ.ಕುಮಾರಸ್ವಾಮಿ ಅವರು ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುವ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 2017ರಲ್ಲಿ ಸತತವಾಗಿ 5 ಅಮಾವಾಸ್ಯೆಗಳಲ್ಲಿ ವಿಶೇಷ ಪೂಜೆಯಲ್ಲಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಬುಧವಾರ ಪಾಲ್ಗೊಂಡಿದ್ದಾರೆ.

ಎಚ್.ಡಿ.ದೇವೇಗೌಡರ ಸಲಹೆ
ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುವ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಎಚ್.ಡಿ.ದೇವೇಗೌಡರು ಕುಮಾರಸ್ವಾಮಿ ಅವರಿಗೆ ಹಿಂದೆ ಸಲಹೆ ನೀಡಿದ್ದರು. ಅಂದಿನಿಂದ ಕುಮಾರಸ್ವಾಮಿ ಅವರು ಸತತವಾಗಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆಲವು ತಿಂಗಳ ಹಿಂದ ನಡೆದ ಅಮಾವಾಸ್ಯೆ ಪೂಜೆಯಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ರೇವಣ್ಣ ಅವರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಮೊದಲ ಬಾರಿಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಪೂಜೆಯಲ್ಲಿ ಪಾಲ್ಗೊಂಡರು.

ಪಂಚಲಿಂಗಗಳ ಕ್ಷೇತ್ರ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಆದಿಚುಂಚನಗಿರಿ ಕ್ಷೇತ್ರವಿದೆ. ಇದು ಪಂಚಲಿಂಗಗಳ ಕ್ಷೇತ್ರವಾಗಿದೆ. ಸುಮಾರು 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಾಲ ಭೈರವೇಶ್ವರ ಸ್ವಾಮಿ ದೇವಾಲಯ ಇಲ್ಲಿದ್ದು, ಪ್ರಾಚೀನ ಮತ್ತು ಆಧುನಿಕ ಶಿಲ್ಪ ಕಲಾ ವೈಭವಕ್ಕೆ ಇದು ಸಾಕ್ಷಿಯಾಗಿದೆ.
ಇತಿಹಾಸದ ಪ್ರಕಾರ ಮಹೇಶ್ವರನು ಸಿದ್ಧಯೋಗಿಗೆ ಈ ಕ್ಷೇತ್ರವನ್ನು ಬಿಟ್ಟು ಕೈಲಾಸಕ್ಕೆ ಹೋಗುವಾಗ ತನ್ನ ಸಾನ್ನಿಧ್ಯವನ್ನು ಬಯಸಿದ ಯೋಗಿಗೆ ನಾನು ಪಂಚಲಿಂಗ ರೂಪದಲ್ಲಿ ಕ್ಷೇತ್ರದಲ್ಲಿ ನೆಲಸಿರುತ್ತೇನೆ ಎಂದು ಮಾತು ನೀಡುತ್ತಾನೆ.
ಈ ಮಾತಿನಂತೆ ಕ್ಷೇತ್ರದಲ್ಲಿ ಗಂಗಾಧರೇಶ್ವರ, ಕತ್ತಲೆ ಸೋಮೇಶ್ವರ, ಚಂದ್ರಮೌಳೀಶ್ವರ, ಗವಿಸಿದ್ದೇಶ್ವರ ಮತ್ತು ಮಲ್ಲೇಶ್ವರ ಎಂಬ ಪಂಚಲಿಂಗಗಳಿವೆ.

ಸುಧೀರ್ಘ ಇತಿಹಾಸವಿದೆ
ಆದಿಚುಂಚನಗಿರಿ ಕ್ಷೇತ್ರ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಚೋಳರು, ಹೊಯ್ಸಳರು, ಬಲ್ಲಾಳರು, ವಿಜಯನಗರದ ಅರಸರು ಈ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಿದ್ದರು. ಕ್ಷೇತ್ರವು ನಾಥ ಸಂಪ್ರದಾಯವನ್ನು ಅಂಗೀಕರಿಸಿದ ದಿನದಿಂದಲೂ ಶೈವ ಕ್ಷೇತ್ರವಾಗಿದೆ.
ಆದಿಚುಂಚನಗಿರಿ ಮಠದ ಗುರು ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ. ಇದುವರೆಗೆ 71 ಮಂದಿ ಗುರುಗಳು ಪೀಠಾಧಿಪತಿಗಳಾಗಿದ್ದಾರೆ.












Click it and Unblock the Notifications