ಮಂಡ್ಯದಲ್ಲಿ ನಡೆದಿದ್ದು, ಇನ್ಮುಂದೆ ನಡೆಯೋದು ದ್ವೇಷದ ರಾಜಕಾರಣನಾ?
Recommended Video
ಮಂಡ್ಯ, ಏಪ್ರಿಲ್ 30:ಮಂಡ್ಯದ ರಾಜಕೀಯ ಇತಿಹಾಸವನ್ನು ಕೆದಕಿ ನೋಡಿದರೆ ಅಲ್ಲಿ ನಮಗೆ ದ್ವೇಷದ ರಾಜಕಾರಣಗಳ ದೊಡ್ಡದಾದ ಪಟ್ಟಿಯೇ ಸಿಕ್ಕಿಬಿಡುತ್ತದೆ. ಇವತ್ತಿಗೂ ತಳಮಟ್ಟದ ಕಾರ್ಯಕರ್ತರು, ನಾಯಕರು ಬಡಿದಾಡಿಕೊಂಡು ಸಾವನ್ನಪ್ಪಿದ ಮತ್ತು ಜೈಲ್ ಸೇರಿದ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಚುನಾವಣೆಗಳಂತು ಗ್ರಾಮಗಳಲ್ಲಿ ದ್ವೇಷದ ಬೀಜವನ್ನೇ ಬಿತ್ತಿವೆ. ಅಷ್ಟೇ ಅಲ್ಲ, ಹಲವು ನಾಯಕರನ್ನು ಬಲಿ ತೆಗೆದುಕೊಂಡಿದೆ. ಹೀಗಿರುವಾಗಲೇ ಈ ಬಾರಿಯ ಲೋಕಸಭಾ ಚುನಾವಣೆ ದ್ವೇಷದ ರಾಜಕಾರಣವನ್ನು ಬಿತ್ತುವಲ್ಲಿ ಇಂಬು ನೀಡಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಇಡೀ ಆಡಳಿತ ಯಂತ್ರವೇ ಮಂಡ್ಯಕ್ಕೆ ಬಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಿದ್ದನ್ನು ಜನ ನೋಡಿದ್ದಾರೆ. ಜತೆಗೆ ನಾಯಕರ ಬಾಯಿಯಲ್ಲಿ ಹೊರ ಬಂದ ಮಾತುಗಳು ಹೇಗಿತ್ತು ಎಂಬುದನ್ನು ಕೂಡ ಕೇಳಿಸಿಕೊಂಡಿದ್ದಾರೆ.
ಸದ್ಯ ಚುನಾವಣೆ ಮುಗಿದಿದೆ. ಫಲಿತಾಂಶಕ್ಕೆ ಇನ್ನೂ ಮೂರು ವಾರಗಳು ಬಾಕಿಯಿವೆ. ಹೀಗಾಗಿ ಎಲ್ಲರೂ ಚುನಾವಣೆ ಗುಂಗಿನಿಂದ ಹೊರಬಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಮೇ.23ರ ಫಲಿತಾಂಶ ಬಂದ ಬಳಿಕ ಏನಾಗುತ್ತದೆ ಎಂಬುದು ಕೆಲವರಲ್ಲಿ ಭಾರೀ ಕುತೂಹಲ ಹುಟ್ಟು ಹಾಕಿದ್ದರೆ, ಮತ್ತೆ ಕೆಲವರಲ್ಲಿ ಭಯವನ್ನು ಸೃಷ್ಟಿಸಿದೆ.
ಈಗಾಗಲೇ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಜ್ಯೋತಿಷಿಗಳು ಕೂಡ ಒಬ್ಬೊಬ್ಬರು ಒಂದೊಂದು ಬಗೆಯಾಗಿ ಹೇಳಿಕೆಗಳನ್ನು ನೀಡುತ್ತಾರೆ. ಗುಪ್ತಚರ ವರದಿಯನ್ನು ತರಿಸಿಕೊಂಡಿರುವ ಮುಖ್ಯಮಂತ್ರಿಗಳು ಅಲ್ಪ ಮುನ್ನಡೆಯಿಂದ ನಿಖಿಲ್ ಗೆಲ್ಲುತ್ತಾರೆ ಎಂಬ ಸಂತೋಷದಿಂದ ಆಯುರ್ವೇದ ಚಿಕಿತ್ಸೆಗೆ ಉಡುಪಿಯತ್ತ ತೆರಳಿದ್ದಾರೆ. ಮಂಡ್ಯದಲ್ಲಿ ಸಣ್ಣಪುಟ್ಟ ನಾಯಕರಲ್ಲಿ ಈಗ ಗೊಂದಲ ಆರಂಭವಾಗಿದೆ. ಮುಂದೇನು ಎಂಬ ಚಿಂತೆ ಅವರನ್ನು ಆವರಿಸಿದೆ.

ದ್ವೇಷದ ರಾಜಕಾರಣ ಮುಂದುವರೆಯಲಿದೆ
ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ಅವರ ವಿರುದ್ಧವಾಗಿ ಕೆಲಸ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಂಬರೀಶ್ ಅಭಿಮಾನಿಗಳಿಗೆ ಉಳಿಗಾಲವಿಲ್ಲ ಎಂಬ ಮಾತುಗಳು ಮಂಡ್ಯದಲ್ಲಿ ತೇಲಿ ಬರುತ್ತಿವೆ. ಜತೆಗೆ ಸೋತರೂ ಕೂಡ ದ್ವೇಷದ ರಾಜಕಾರಣ ಮುಂದುವರೆಯಲಿದೆ ಎಂಬ ಮಾತುಗಳನ್ನಾಡುತ್ತಿದ್ದಾರೆ.

ಸುಮಲತಾ ಹೇಳುವ ಹಾಗೆ...
ಹಾಗಾದರೆ ಮಂಡ್ಯದಲ್ಲಿ ಈ ಬಾರಿ ನಡೆದಿದ್ದು ದ್ವೇಷದ ರಾಜಕಾರಣನಾ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಹೌದು ಎಂಬುದನ್ನು ಲೋಕಸಭಾ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ಅವರೇ ಮಾಧ್ಯಮಗಳ ಮುಂದೆ ಹೇಳಿರುವಂತೆ "ಮುಖ್ಯಮಂತ್ರಿಗಳು ಬೆದರಿಕೆಯ ಮಾತುಗಳನ್ನಾಡುತ್ತಿದ್ದು, ನನ್ನನ್ನು ಬೆಂಬಲಿಸಿದವರ ಮೇಲೆ ದ್ವೇಷ ಸಾಧಿಸಲು ಮುಂದಾಗಿದ್ದು, ಅವರನ್ನು ಈಗಾಗಲೇ ಟಾರ್ಗೆಟ್ ಮಾಡಲಾಗಿದೆ. ಅಧಿಕಾರದಲ್ಲಿರುವವರು ಅಥವಾ ಬೇರೆಯವರು ಯಾರೂ ಈ ರೀತಿ ಮಾಡಬಾರದು. ರಾಜಕಾರಣ ಮತ್ತು ಚುನಾವಣೆ ಬಗ್ಗೆ ಜನರಿಗೆ ಬೇರೆಯದೇ ಅಭಿಪ್ರಾಯವಿದೆ. ಈ ಚುನಾವಣೆಯಲ್ಲಿ ನನ್ನ ವಿರುದ್ಧವಾದ ಇಷ್ಟೊಂದು ನೆಗೆಟೀವ್ ಮಾತುಗಳು ಬೇಕಿರಲಿಲ್ಲ. ಅವರು ಏನೇ ಮಾತನಾಡಿದರೂ ಅವೆಲ್ಲವನ್ನೂ ಜನರಿಗೆ ಬಿಟ್ಟಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.

ನ್ಯಾಯ-ಅನ್ಯಾಯದ ವಿರುದ್ಧದ ಹೋರಾಟ
"ಚುನಾವಣೆಗೆ ನಿಲ್ಲಬೇಕೆಂದು ನಾನು ಮಂಡ್ಯಕ್ಕೆ ಬರಲಿಲ್ಲ. ಮಂಡ್ಯಕ್ಕೆ ಬರಲೆಂದೇ ರಾಜಕೀಯ ಪ್ರವೇಶಿಸಿದೆ. ಜನರ ಒತ್ತಾಯದ ಮೇರೆಗೆ ಹಾಗೂ ಅಧಿಕಾರವಿದ್ದರೆ ಜನರಿಗೆ ಹೆಚ್ಚಿನ ರೀತಿ ನೆರವಾಗಬಹುದೆಂಬ ಆಶಯದಿಂದ ಇದೇ ಒಳ್ಳೆಯ ಮಾರ್ಗ ಎಂದು ಆಯ್ಕೆ ಮಾಡಿಕೊಂಡೆ. ಒಂದು ಹಂತದಲ್ಲಿ ನನಗೆ ಇದೆಲ್ಲಾ ಯಾಕಪ್ಪಾ ಬೇಕು? ಅನಿಸಿತ್ತು. ಆದರೆ, ಜನರಿಗೆ ನಿರಾಸೆ ಮಾಡಬಾರದೆಂದು ತಿಳಿದು ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿದ್ದೇನೆ. ಈ ಚುನಾವಣೆ ಸೋಲು-ಗೆಲುವಿಗೆ ಸೀಮಿತವಾಗಿಲ್ಲ. ನ್ಯಾಯ-ಅನ್ಯಾಯದ ವಿರುದ್ಧದ ಹೋರಾಟವಾಗಿದೆ" ಎಂದು ಸುಮಲತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸವಾಲ್ ಆಗಿ ತೆಗೆದುಕೊಳ್ಳುತ್ತಾರಾ ಸುಮಲತಾ?
ಸುಮಲತಾ ಅವರ ಈ ಮಾತುಗಳು ರಾಜಕೀಯದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ತುಂಬಿದೆ ಎನ್ನುವುದನ್ನು ಹೇಳುತ್ತಿದೆ. ಬಹುಶಃ ಸುಮಲತಾ ಅವರು ರಾಜಕೀಯವನ್ನು ಸವಾಲ್ ಆಗಿಯೇ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತಾರೆ ಎಂಬುದು ಅವರ ನಡೆಯಲ್ಲಿಯೇ ಗೊತ್ತಾಗುತ್ತಿದೆ. ಮಂಡ್ಯದತ್ತ ರಾಜ್ಯ ಮಾತ್ರವಲ್ಲ ಇಡೀ ದೇಶವೇ ದೃಷ್ಠಿ ನೆಟ್ಟಿದೆ. ಇಲ್ಲಿ ಆಗುವ ಪ್ರತಿ ಬೆಳವಣಿಗೆಗಳನ್ನು ಜನ ತುಂಬಾ ಕುತೂಹಲದಿಂದ ಗಮನಿಸುತ್ತಿದ್ದಾರೆ ಎನ್ನುವುದಂತು ಸತ್ಯ. ಯಾರೇ ಗೆಲ್ಲಲಿ ಸೋಲಲಿ ರಾಜಕಾರಣ ರಾಜಕಾರಣವಾಗಿಯೇ ಉಳಿಯಲಿ. ಅದು ದ್ವೇಷದ ರಾಜಕಾರಣವಾಗದಿರಲಿ.












Click it and Unblock the Notifications