Get Updates
Get notified of breaking news, exclusive insights, and must-see stories!

Mandya: ಕೆರಗೋಡು ಹನುಮ ಧ್ವಜ ವಿವಾದಕ್ಕೆ ಇದೇ ಕಾರಣ!

ಮಂಡ್ಯ : ಕೆರಗೋಡು ಧ್ವಜಸ್ತಂಭ ಸ್ಥಾಪನೆ, ಹನುಮ ಧ್ವಜ ಹಾರಾಟ ವಿವಾದದ ಸ್ವರೂಪ ಪಡೆಯುವುದಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಆಗಿರುವ ನಿರ್ಣಯಗಳು, ಒತ್ತಡಕ್ಕೆ ಸಿಲುಕಿ ಅಧಿಕಾರಿಗಳು ಮಾಡಿದ ಎಡವಟ್ಟಿನ ನಿರ್ಧಾರಗಳು ಮೂಲ ಕಾರಣ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.

ಗೌರಿಶಂಕರ ಸೇವಾ ಟ್ರಸ್ಟ್‌ನವರು ಧ್ವಜಸ್ಥಂಭ ಸ್ಥಾಪನೆಗೆ ಅನುಮತಿ ಕೋರಿದಾಗ ಸ್ಥಳ ಮಹಜರಿಗೆ ಹೋದ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಆ ಸ್ಥಳ ಸರ್ಕಾರಕ್ಕೆ ಸೇರಿದ್ದೋ, ಖಾಸಗಿಯವರಿಗೆ ಸೇರಿದ್ದೋ ಎಂಬುದನ್ನು ಖಚಿತಪಡಿಸಿಕೊಳ್ಳದಿರುವುದು. ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರದಿರುವುದು, ಏಕಪಕ್ಷೀಯವಾಗಿ ಪಂಚಾಯಿತಿಯವರೇ ನಿರ್ಣಯ ಕೈಗೊಂಡಿರುವುದು ಪತ್ತೆಯಾಗಿದೆ.

 Gram Panchayat and Officials Mistakes Lead to Keragodu Hanuman Flag Controversy

ಅಷ್ಟೇ ಅಲ್ಲದೆ, ಜನವರಿ 20ರಂದು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಡಿದ್ದು, ಪರಿಸ್ಥಿತಿ ಗಂಭೀರಗೊಳ್ಳುತ್ತಿರುವುದನ್ನು ಮನಗಂಡೂ ಧ್ವಜವನ್ನು ಜ.25ರವರೆಗೆ ಧ್ವಜ ಹಾರಾಟಕ್ಕೆ ಅವಕಾಶ ನೀಡಿದ್ದು ಹಾಗೂ ಗಣರಾಜ್ಯೋತ್ಸವ ದಿನದಂದು ಹನಮಧ್ವಜ ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸಿದ ಬಳಿಕ ಸಂಜೆ ಮತ್ತೆ ಅದನ್ನು ಕೆಳಗಿಳಿಸಿ ಹನುಮಧ್ವಜವನ್ನು ಹಾರಿಸಲು ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಘಟನೆಗೆ ಕಾರಣವಾಗಿದೆ.

ಕೆರಗೋಡು ವಿವಾದದ ಕೇಂದ್ರಬಿಂದುವಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುವುದಕ್ಕೆ ಅಧಿಕಾರಿಗಳ ಎಡವಟ್ಟು ಕಾರಣ ಎನ್ನುವುದು ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್ ಅವರು ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಂದ ತಿಳಿದುಬಂದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೇಳಿದ್ದೇನು?

2023ರ ನವೆಂಬರ್ 28ರಂದು ರಂದು ಶ್ರೀರಾಮ ಭಜನಾ ಮಂಡಳಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಎದುರು ಧ್ವಜಸ್ತಂಭ ಸ್ಥಾಪನೆಗೆ ಪಂಚಾಯಿತಿ ಅನುಮತಿ ಕೋರಿದ್ದರು. ಡಿ. 21ರಂದು ಯೋಗೇಶ್ ಎಂಬುವರು ಹನುಮ ಧ್ವಜ ಹಾರಿಸುವುದಕ್ಕೆ ಅನುಮತಿ ಕೋರಿದ್ದರು. ಡಿ. 29ರಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ಬಗ್ಗೆ ಸಾಮಾನ್ಯಸಭೆಯಲ್ಲಿ ಚರ್ಚಿಸಲಾಯಿತು. ಶ್ರೀಗೌರಿಶಂಕರ ಸೇವಾ ಟ್ರಸ್ಟ್‌ ನೀಡಿದ ಧ್ವಜಸ್ತಂಭಸ್ಥಾಪನೆ ಕುರಿತಂತೆ 22 ಸದಸ್ಯಬಲದ ಪೈಕಿ ಜೆಡಿಎಸ್, ಕಾಂಗ್ರೆಸ್‌ನ ತಲಾ ಒಬ್ಬರು ಸದಸ್ಯರು ವೈಯಕ್ತಿಕ ಕಾರಣಗಳಿಂದ ಗೈರು ಹಾಜರಾಗಿದ್ದರಿಂದ 20 ಸದಸ್ಯರ ಪೈಕಿ 18 ಸದಸ್ಯರು ಧ್ವಜಸ್ತಂಭ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್ ಬೆಂಬಲಿತ ಸದಸ್ಯನೋರ್ವ ವಿರೋಧಿಸಿದರೆ, ಮತ್ತೋರ್ವ ಸದಸ್ಯ ತಟಸ್ಥರಾಗಿ ಉಳಿದಿದ್ದರು.

ಧ್ವಜಸ್ತಂಭ ಸ್ಥಾಪಿಸಲು ಅನುಮತಿ ನೀಡಿ 2024 ಜನವರಿ 5ರಂದು ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಸ್ಥಳ ಪರಿಶೀಲನೆ ನಡೆಸಿದರು. ಧ್ವಜಸ್ತಂಭ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು. ಧ್ವಜಸ್ತಂಭದಲ್ಲಿ ತ್ರಿವರ್ಣಧ್ವಜ ಹಾಗೂ ಕನ್ನಡ ಧ್ವಜ ಆರೋಹಣ ಮಾಡುವುದಕ್ಕಷ್ಟೇ ಟ್ರಸ್ಟ್‌ನವರು ಒಪ್ಪಿಗೆ ಸೂಚಿಸಿದ್ದರು.

ಇದರ ನಡುವೆ ಟ್ರಸ್ಟ್‌ನವರು ಜ.20ರಂದು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿದ್ದರು. ಮರುದಿನವೇ ಗ್ರಾಮದ ಕೆಲವರು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆಯೇ ಎಂದು 30 ರಿಂದ 40 ಜನರು ಪಂಚಾಯಿತಿ ಕಚೇರಿಗೆ ಆಗಮಿಸಿ ಪಿಡಿಒ ಅವರನ್ನು ಪ್ರಶ್ನಿಸಿದರು. ಇದರ ಗಂಭೀರತೆ ಅರಿತ ಪಿಡಿಓ ಧ್ವಜ ತೆರವುಗೊಳಿಸುವಂತೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ಸಬ್‌ಇನ್ಸ್‌ಪೆಕ್ಟರ್ ಮತ್ತು ಪಿಡಿಒ ಅವರು ಟ್ರಸ್ಟ್‌ನವರೊಂದಿಗೆ ಚರ್ಚಿಸಿದರು.

ಜ.22ರಂದು ಶ್ರೀರಾಮಮಂದಿರ ಉದ್ಘಾಟನೆ ಇರುವುದರಿಂದ ಯಥಾಸ್ಥಿತಿ ಕಾಪಾಡುವ ನಿರ್ಧಾರ ಮಾಡಿದ್ದರು. ಜ.21ರಿಂದ 25ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಸೆ.25ರಂದು ಸಾಮಾನ್ಯ ಸಭೆ ಸೇರಿ ಹನುಮ ಧ್ವಜವನ್ನು ಇಳಿಸುವ ನಿರ್ಧಾರ ಮಾಡಲಾಗಿತ್ತು. ಅಂದು ತಾಪಂ ಇಒ ವೀಣಾ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ವಿಷಯ ಜಿಪಂ ಸಿಇಒ ಅವರ ಗಮನಕ್ಕೂ ತರಲಾಗಿತ್ತು. ಅವರೂ ಸಹ ಧ್ವಜ ತೆರವುಗೊಳಿಸುವಂತೆ ಸೂಚಿಸಿದ್ದರು ಎಂದು ವಿವರಿಸಿದರು.

ಗಣರಾಜ್ಯೋತ್ಸವ ದಿನ ಆ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು. ಅದೇ ದಿನ ಸಂಜೆ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿತ್ತು. ತದನಂತರದಲ್ಲಿ ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‌ನವರು ಹನುಮಧ್ವಜವನ್ನು ಮತ್ತೆ ಆರೋಹಣ ಮಾಡಿದ್ದರು. ವಿಷಯ ತಿಳಿದು ಜ.27ರಂದು ಮತ್ತೆ ತಾಪಂ ಇಒ ವೀಣಾ ಅವರು ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಧ್ವಜ ತೆರವುಗೊಳಿಸುವಂತೆ ಸೂಚಿಸಿದ್ದರು. ಮರುದಿನ ಬೆಳಗ್ಗೆಯೇ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಧ್ವಜ ತೆರವುಗೊಳಿಸುವುದಕ್ಕೆ ಬಂದಿರುವ ವಿಚಾರ ನಮಗೆ ತಿಳಿಯಿತು ಎಂಬುದಾಗಿ ಗ್ರಾಪಂ ಅಧ್ಯಕ್ಷ ನವೀನ್ ತಿಳಿಸಿದರು.

ನಂತರ ಧ್ವಜ ತೆರವು ವಿವಾದ ತೀವ್ರಗೊಂದು ಅಹಿತರ ಘಟನೆಗೆ ಕಾರಣವಾಯಿತು. ಇದರಲ್ಲಿ ನಮ್ಮ ಕ್ಷೇತ್ರದ ಶಾಸಕರ ಪಾತ್ರವೇನೂ ಇಲ್ಲ ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+