ಮಂಡ್ಯದ ಜೀವನಾಡಿ ಮೈಷುಗರ್ ಕಾರ್ಖಾನೆಗೆ ಸಾಂಕೇತಿಕ ಚಾಲನೆ
ಮಂಡ್ಯ, ಸೆಪ್ಟೆಂಬರ್ 1 : ಜಿಲ್ಲೆಯ ಜೀವನಾಡಿ, ಹಾಗೂ ಸರಕಾರು ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈಷುಗರ್ ಕಾರ್ಖಾನೆಗೆ ಕಬ್ಬಿನ ಕಂತೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಗುರುವಾರ ಚಾಲನೆ ನೀಡಿದರು.
ಯಂತ್ರಕ್ಕೆ ಕಬ್ಬು ಹಾಕುವ ಮೂಲಕ ಕಾರ್ಖಾನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್, ಇದು ರೈತರ ಬದುಕಿನ ಜೀವನಾಡಿಯಾಗಿದ್ದು, ಲಾಭದಾಯಕವಾಗಿ ನಡೆಯುವಂತಾಗಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಅವರ ಇಚ್ಚೆಯಂತೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು, ಅವೈಜ್ಞಾನಿಕ ಕಾಮಗಾರಿಯೇ ಕಾರಣ: ಸಂಸದೆ ಸುಮಲತಾ
ಈಗ ಸಾಂಕೇತಿಕವಾಗಿ ಕಬ್ಬು ಅರೆಯುವ ಕಾರ್ಯವನ್ನು ಪ್ರಾರಂಭಿಸಿದ್ದೇವೆ. ಇದು ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವಂತಹ ಕಾರ್ಖಾನೆಯಾಗಿತ್ತು. ಈ ಕಾರ್ಖಾನೆಗೆ ಪುನಶ್ಚೇತನ ನೀಡಬೇಕು ಎಂದು ರೈತರು, ಜನಪ್ರತಿನಿಧಿಗಳು, ಹೋರಾಟಗಾರರು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹೋರಾಟ ಸಂದರ್ಭದಲ್ಲಿ ಭೇಟಿ ನೀಡಿದಾಗ ಅವರಿಗೆ ಭರವಸೆ ನೀಡಿದ್ದರು. ಸಿಎಂ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಲಾಭದಾಯಕವಾಗಿ ಮುನ್ನಡೆಯಬೇಕು ಎಂಬುದು ಅವರ ಮಹದಾಸೆಯಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ರೈತರಿಗೆ ಆಸರೆಯಾಗಿ ನಡೆಯಲಿದೆ. ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.
ಸದ್ಯ 4 ಸಾವಿರ ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳು ಇವೆ. ಪ್ರಾಯೋಗಿಕವಾಗಿ ಕಾರ್ಖಾನೆಯನ್ನು ಚಾಲನೆ ಮಾಡಲಾಗಿದೆ. ಇದರಿಂದ ಎಲ್ಲೆಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೋ ಅವೆಲ್ಲವನ್ನೂ ಪರಿಹರಿಸಿ ಮುನ್ನಡೆಸಲಾಗುವುದು. ಎಂಟತ್ತು ದಿನಗಳ ನಂತರ ಮುಖ್ಯಮತ್ರಿಗಳನ್ನು ಕರೆಯಿಸಿ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬಳಿಕ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೃಷ್ಣಾ ಮೇಲ್ದಂಡೆ ರೈತರನ್ನು ಕಾಡುತ್ತಿರುವ ಸವಳು-ಜವಳು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ:ನಿರಾಣಿ
ಕಾರ್ಖಾನೆಗೆ 4 ಲಕ್ಷ ಟನ್ ಕಬ್ಬನ್ನು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೈಷುಗರ್ ವ್ಯಾಪ್ತಿಯಲ್ಲಿ ಇನ್ನೂ ಎಷ್ಟು ಪ್ರಮಾಣದ ಕಬ್ಬು ಅಗತ್ಯವಿದೆಯೋ ಎಂಬುದರ ಬಗ್ಗೆ ಚರ್ಚೆ ನಡೆಸಿ ರೈತರ ಮನವೊಲಿಸಿ ಮತ್ತಷ್ಟು ಕಬ್ಬು ಪಡೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಷುಗರ್ ನಿಗದಿಪಡಿಸುವ ದರವನ್ನು ಇಡೀ ರಾಜ್ಯದ ಸಕ್ಕರೆ ಕಾರ್ಖಾನೆಗೆ ಅನ್ವಯಿಸುತ್ತಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಅಂತಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಎಂ. ಶ್ರೀನಿವಾಸ್, ಸಿ.ಎಸ್. ಪುಟ್ಟರಾಜು, ಡಾ. ಕೆ. ಅನ್ನದಾನಿ, ದಿನೇಶ್ ಗೂಳೀಗೌಡ, ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಎಸ್. ಆತ್ಮಾನಂದ, ಕೆ.ಟಿ. ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಇತರರು ಇದ್ದರು.