5 ವರ್ಷದ ಹಿಂದೆ ನಾಪತ್ತೆಯಾದ ಮಗಳಿಗಾಗಿ ತಾಯಿ ದೂರು; ಮರ್ಯಾದಾ ಹತ್ಯೆ ಶಂಕೆ
ಮಂಡ್ಯ, ಅಕ್ಟೋಬರ್ 21: ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಯುವತಿಯ ತಾಯಿ ದೂರು ನೀಡಿದ್ದು, ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ.
ಮಂಡ್ಯದ ಮಳವಳ್ಳಿ ತಾಲೂಕಿನ ನಂಜೇಗೌಡದೊಡ್ಡಿ ಗ್ರಾಮದ ಮೇಘನಾ ನಾಪತ್ತೆಯಾಗಿರುವ ಯುವತಿ. ಈಕೆಯ ತಾಯಿ ಮಹದೇವಮ್ಮ, ಮಗಳು ನಾಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
2014ರಲ್ಲಿ ಬೆಂಗಳೂರಿನಲ್ಲಿಪಿಯುಸಿ ಓದುತ್ತಿದ್ದ ಮೇಘಾ ಪಾಂಡವಪುರ ತಾಲೂಕಿನ ತಿರುಮಲಪುರ ಮೂಲದ ಸ್ವಾಮಿಗೌಡ ಎಂಬ ಯುವಕನನ್ನು ಮದುವೆಯಾಗಿದ್ದಳು. ಮದುವೆಯಾದ ಬಳಿಕ ಮೇಘಾ ತನ್ನ ತವರು ಮನೆಯವರ ಸಂಪರ್ಕ ಬಿಟ್ಟಿದ್ದಳು. ಮದುವೆಯಾದ ಆರು ತಿಂಗಳ ಬಳಿಕ ಅಕ್ಕನ ಮದುವೆಗೆ ಬಂದು ಹೋಗಿದ್ದಳು. ನಂತರ ಕೆಲ ದಿನ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದವಳು ಮತ್ತೆ ಸಂಪರ್ಕ ಕಡಿದುಕೊಂಡಿದ್ದಳು. ಇದಾದ ಕೆಲ ವರ್ಷಗಳ ಬಳಿಕ ಮನೆ ಸ್ವಚ್ಛ ಮಾಡುವಾಗ ಮಹದೇವಮ್ಮ ಅವರಿಗೆ ಬೀರುವಿನಲ್ಲಿ ಮೇಘ ಮತ್ತು ಸ್ವಾಮಿಯ ಐಡಿ ಕಾರ್ಡ್ ಸಿಕ್ಕಿದೆ.

ಆ ಕಾರ್ಡಿನಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ಮಹದೇವಮ್ಮ ಸ್ವಾಮಿ ಊರಿಗೆ ಹೋಗಿ ವಿಚಾರಿಸಿದಾಗ, ಆಘಾತದ ಮಾಹಿತಿ ತಿಳಿದುಬಂದಿದೆ. ಮೇಘಾಳ ಹತ್ಯೆಯಾಗಿದೆ, ಈ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದರೆ, ಸಾಕ್ಷ್ಯಾಧಾರವಿಲ್ಲ ಎಂದು ದೂರನ್ನೂ ದಾಖಲಿಸಿಕೊಂಡಿಲ್ಲ. ಇದೀಗ ಮಹದೇವಮ್ಮ ಅವರು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫೋರಂ ಸಂಘಟನೆಯ ಸಹಾಯ ಪಡೆದು ಮಾನವ ಹಕ್ಕು ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಮೇಘಾಳನ್ನು ಆಕೆಯ ಗಂಡ ಹಾಗೂ ಅವರ ಮನೆಯವರು ಕೊಲೆ ಮಾಡಿದ್ದು, ಅನ್ಯ ಜಾತಿ ಎಂಬ ಕಾರಣಕ್ಕೆ ಮರ್ಯಾದಾ ಹತ್ಯೆ ನಡೆದಿದೆ ಎಂದು ಯುವತಿ ಪೋಷಕರು ಆರೋಪ ಮಾಡಿದ್ದಾರೆ. ಐದು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ನಿಜಾಂಶ ಹೊರಬರಬೇಕಿದೆ.












Click it and Unblock the Notifications