ಮಂಡ್ಯದ ರೈತನ ಮನೆಯೀಗ ಭತ್ತ ವೈವಿಧ್ಯ ಕೇಂದ್ರ!

ಮಂಡ್ಯ, ಫೆಬ್ರವರಿ 08; ಭತ್ತದ ಕೃಷಿಯ ಮೂಲಕ ಅಪರೂಪದ ಭತ್ತದ ತಳಿಯನ್ನು ಸಂರಕ್ಷಿಸುವ ಕೆಲಸವನ್ನು ತಪಸ್ಸಿನಂತೆ ಮಾಡುತ್ತಾ ಬಂದಿದ್ದ ರೈತರೊಬ್ಬರ ಮನೆಯೀಗ 'ಭತ್ತ ವೈವಿಧ್ಯ ಕೇಂದ್ರ'ವಾಗಿ ಗಮನ ಸೆಳೆಯುತ್ತಿದೆ.

ರೈತರ ಪಾಲಿನ ಧಾನ್ಯ ಲಕ್ಷ್ಮಿಯಾಗಿರುವ ಭತ್ತದಲ್ಲಿ ಸಾವಿರಾರು ತಳಿಗಳಿದ್ದು, ಆಧುನಿಕ ಭರಾಟೆಯಲ್ಲಿ ಹೊಸ ತಳಿಗಳು ಆವಿಷ್ಕಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಿಂದಿನ ಬಹುತೇಕ ತಳಿಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ.

ಹೀಗಿರುವಾಗ ಭತ್ತದ 1,350ಕ್ಕೂ ಹೆಚ್ಚು ತಳಿಗಳನ್ನು ಸಂರಕ್ಷಿಸಿಡುವ ಮೂಲಕ ಭತ್ತದ ಸಂಗ್ರಹಾಲಯವನ್ನೇ ಸ್ಥಾಪಿಸಿ ಪ್ರಗತಿಪರ ರೈತರೊಬ್ಬರು ಗಮನಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲಿನ ಪ್ರಗತಿ ಪರ ರೈತ ಸಯ್ಯದ್ ಗನಿಖಾನ್ ಈ ಸಾಧನೆ ಮಾಡಿದವರು.

ಇವರ ಕಾಳಜಿಗೆ ಸಲಾಮ್ ಹೇಳಲೇ ಬೇಕಾಗುತ್ತದೆ. ಇವರು ಮನೆಯನ್ನೇ ಭತ್ತದ ಸಂಗ್ರಹಾಲಯವನ್ನಾಗಿ ಮಾಡಿ ಅಲ್ಲಿ ವಿವಿಧ ಬಗೆಯ ಭತ್ತದ ತಳಿಗಳು ಮತ್ತು ಅಕ್ಕಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿಟ್ಟಿದ್ದಾರೆ.

ಇದು ಸುಲಭದ ಕೆಲಸವಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಇಂತಹ ಸಂಗ್ರಹಾಲಯ ಸ್ಥಾಪಿಸಿದರ ಹಿಂದೆ ಅವರ ಆಸಕ್ತಿ, ಶ್ರಮ, ಕಾಳಜಿ ಎಲ್ಲವೂ ಇರುವುದು ಗೋಚರಿಸುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಇವರು ಸಂಗ್ರಹಿಸಿಟ್ಟಿರುವ ಭತ್ತದ ತಳಿಗಳೆಲ್ಲವೂ ಅವರ ಜಮೀನಿನಲ್ಲಿಯೇ ಬೆಳೆದ ತಳಿಗಳಾಗಿವೆ.

ಸುವಾಸನೆ ಭರಿತ ಔಷಧೀಯ ಗುಣಗಳ ಭತ್ತ

ಸುವಾಸನೆ ಭರಿತ ಔಷಧೀಯ ಗುಣಗಳ ಭತ್ತ

ಹಾಗೆ ನೋಡಿದರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಭತ್ತದ ತಳಿಗಳಿದ್ದು, ಆ ತಳಿಗಳು ಆಯಾ ಪ್ರದೇಶಕ್ಕೆ ಹೊಂದಿಕೊಂಡು ಬೆಳೆಯುತ್ತಿರುತ್ತವೆ. ಇಂತಹ ಭತ್ತದ ತಳಿಗಳನ್ನು ಹುಡುಕಿ ತಂದು ಸಂಗ್ರಹಿಸಿಟ್ಟಿರುವ ಸಯ್ಯದ್ ಗನಿಖಾನ್ ಕಾರ್ಯವನ್ನು ಮೆಚ್ಚಲೇ ಬೇಕಾಗಿದೆ. ಇನ್ನು ಇವರ ಬಳಿಯಿರುವ ತಳಿಗಳಲ್ಲಿಯೂ ವೈವಿಧ್ಯತೆಯಿದೆ. ಕೆಲವು ಸುವಾಸನೆ ಬೀರುವ ಭತ್ತಗಳಾಗಿದ್ದರೆ, ಮತ್ತೆ ಕೆಲವು ಔಷಧೀಯ ಗುಣಗಳನ್ನು ಹೊಂದಿದ ಭತ್ತಗಳಾಗಿವೆ. ಅಷ್ಟೇ ಅಲ್ಲದೆ ಮೂರು, ಆರು ತಿಂಗಳಲ್ಲಿ ಕೊಯ್ಲಿಗೆ ಬರುವ ತಳಿಗಳು ಇಲ್ಲಿವೆ.

ದೇಶಾದ್ಯಂತ ಸುತ್ತಾಡಿ ತಳಿ ಸಂಗ್ರಹಣೆ

ದೇಶಾದ್ಯಂತ ಸುತ್ತಾಡಿ ತಳಿ ಸಂಗ್ರಹಣೆ

ಕೆಲವು ಭತ್ತದ ತಳಿಗಳು ವಿಟಮಿನ್, ಕ್ಯಾಲ್ಸಿಯಂ, ನಾರಿನ ಪ್ರಮಾಣ ಸೇರಿದಂತೆ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಇವುಗಳನ್ನು ರಾಜ್ಯ ಮಾತ್ರವಲ್ಲದೆ, ದೇಶದಾದ್ಯಂತ ಸುತ್ತಾಡಿ ಸಂಗ್ರಹಣೆ ಮಾಡಿರುವುದು ಮೆಚ್ಚತಕ್ಕ ವಿಷಯವಾಗಿದೆ. ಬಹಳಷ್ಟು ಭತ್ತದ ತಳಿಗಳು ಇವತ್ತು ಅವನತಿಯ ಹಾದಿ ಹಿಡಿದಿದೆ. ಹೀಗಾಗಿ ಇಂತಹ ತಳಿಗಳನ್ನು ಬೆಳೆಸಿ ಮುಂದಿನ ತಲೆಮಾರಿಗೆ ಸಂರಕ್ಷಿಸಿಡುವುದು ಮತ್ತು ಆಸಕ್ತಿಯುಳ್ಳ ರೈತರಿಗೆ ಭತ್ತದ ಬಗ್ಗೆ ಮಾಹಿತಿ ನೀಡುವುದು ಸಯ್ಯದ್ ಗನಿಖಾನ್ ಅವರ ಉದ್ದೇಶವಾಗಿದೆ.

ರೈತನ ಕಾರ್ಯ ಶ್ಲಾಘಿಸಿದ ಡಿಸಿ

ರೈತನ ಕಾರ್ಯ ಶ್ಲಾಘಿಸಿದ ಡಿಸಿ

ರೈತ ಸಯ್ಯದ್ ಗನಿಖಾನ್ ಅವರ ಕಾರ್ಯದ ಬಗ್ಗೆ ಅರಿತ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಈ ಹಿಂದೆ ಅವರ ಮನೆಗೆ ಭೇಟಿ ನೀಡಿ ಸಂಗ್ರಹಿಸಿಟ್ಟಿರುವ ಭತ್ತದ ತಳಿಗಳನ್ನು ವೀಕ್ಷಿಸಿ ಮಾಹಿತಿ ಪಡೆದು ಅವರ ಕಾರ್ಯವನ್ನು ಶ್ಲಾಘಿಸಿದ್ದರು. ಜತೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ಗುರುತಿಸಿರುವುದು ರೈತ ಸಯ್ಯದ್ ಗನಿಖಾನ್ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದರೂ ತಪ್ಪಾಗಲಾರದು.

ಆಧುನಿಕತೆಯ ಭರಾಟೆಯಲ್ಲಿ ಕೃಷಿಯತ್ತ ಅದರಲ್ಲೂ ಭತ್ತದ ಬೆಳೆಯತ್ತ ಆಸಕ್ತಿ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮತ್ತು ಹೊಸ ತಳಿಗಳ ಭರಾಟೆಯಲ್ಲಿ ಹಳೆಯ ತಳಿಗಳು ನಮ್ಮಿಂದ ನಾಶವಾಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಒಬ್ಬ ಜವಬ್ದಾರಿಯುತ ರೈತನಾಗಿ ಸಂರಕ್ಷಿಸಿಡುವ ಕಾರ್ಯವನ್ನು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ವಿಚಾರ.

ಸಂಗ್ರಹಾಲಯ ಈಗ ಭತ್ತ ವೈವಿಧ್ಯ ಕೇಂದ್ರ

ಸಂಗ್ರಹಾಲಯ ಈಗ ಭತ್ತ ವೈವಿಧ್ಯ ಕೇಂದ್ರ

ಈ ನಡುವೆ ಸಯ್ಯದ್ ಗನಿಖಾನ್ ಅವರ ಭತ್ತದ ಸಂಗ್ರಹಣೆಯನ್ನು 'ಭತ್ತ ವೈವಿಧ್ಯ ಕೇಂದ್ರ'ವಾಗಿ ಘೋಷಣೆ ಮಾಡಲಾಗಿದೆ. ಈ ಕೇಂದ್ರವನ್ನು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಉದ್ಘಾಟಿಸಿದ್ದಾರೆ. ಈ ಸಂದರ್ಭ ಮಾತನಾಡಿ ಅವರು, "ರೈತನ ಸಮಗ್ರ ಅಭಿವೃದ್ಧಿಯಲ್ಲಿ ಬೆಳೆಗಳ ಬೀಜ ಪೋಷಣೆಯು ಅತ್ಯುತ್ತಮವಾಗಿದ್ದು, ಉತ್ತಮ ಬೀಜದ ಆಯ್ಕೆಯಿಂದ ರೈತನ ಆದಾಯ ಹೆಚ್ಚಾಗಲು ಸಾಧ್ಯವಿದೆ. ನಾಗರಿಕತೆಯ ಬೆಳವಣಿಗೆಯ ವೇಳೆ ಬೀಜಗಳ ಸಂರಕ್ಷಣೆ ಅಗತ್ಯವಾಗಿದ್ದು, ಹಿಂದಿನ ಹರಪ್ಪ ನಾಗರಿಕತೆ, ಸಿಂಧೂ ನಾಗರಿಕತೆ ವೈಭವೀಕರಣಗಳು ಅಲ್ಲಿನ ಫಲವತ್ತಾದ ಮಣ್ಣು, ನದಿಗಳು ಮುಖಜಭೂಮಿ, ಉತ್ತಮ ಗುಣಮಟ್ಟದ ಬೀಜಗಳು ಸಹಕಾರಿಯಾಗಿದ್ದನ್ನು ನಾವು ಗಮನಿಸಬಹುದು" ಎಂದರು.

1350 ತಳಿಯ ಭತ್ತದ ಸಂಗ್ರಹಣೆ

1350 ತಳಿಯ ಭತ್ತದ ಸಂಗ್ರಹಣೆ

ಮನುಷ್ಯನ ಜೀವನದಲ್ಲಿ ಅಕ್ಕಿ ಅಥವಾ ಅನ್ನ ಅವಿಭಾಜ್ಯ ಅಂಗವಾಗಿದೆ. ಅಕ್ಕಿ ಕಾಳಿನಲ್ಲಿ ವೈವಿಧ್ಯಮಯ ಗುಣವಿದೆ. ಕೆಲವು ಅಕ್ಕಿಯಲ್ಲಿ ಮೂಳೆಯ ರೋಗ ಗುಣಪಡಿಸುವ ಶಕ್ತಿ ಇದ್ದರೆ, ಇನ್ನೂ ಕೆಲವು ತಳಿಯ ಅಕ್ಕಿ ಬಹುಮುಖ್ಯವಾದ ಉತ್ತಮ ಪೋಷಕಾಂಶಗಳಿಂದ ಕೂಡಿದೆ. ತಲತಲಾಂತರಗಳಿಂದ ಬೆಳೆದು ಬಂದಿರುವ ಬೀಜಗಳನ್ನು ಮುಂದಿನ ತಲೆಮಾರಿಗೂ ರಕ್ಷಣೆ ಮಾಡುವುದು ಅಗತ್ಯವಾಗಿದೆ. ಸದ್ಯ ಸಯ್ಯದ್ ಗನಿಖಾನ್ ಅವರ ಭತ್ತ ವೈವಿಧ್ಯ ಕೇಂದ್ರದಲ್ಲಿ 1350 ವಿವಿಧ ತಳಿಯ ಭತ್ತದ ಬೀಜದ ಸಂಗ್ರಹಣೆಯಿದ್ದು ಅವುಗಳನ್ನು ಸಂರಕ್ಷಣೆ ಮಾಡಿರುವುದು ಮೆಚ್ಚತಕ್ಕ ವಿಷಯ. ಇವರಿಗೆ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ದೊರೆಯುವ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+