ಸುಮಲತಾ ಅಂಬರೀಶ್ ಪರ ರೈತಸಂಘ ನಿಲ್ಲುತ್ತಾ?
ಮಂಡ್ಯ, ಫೆಬ್ರವರಿ 22:ಮಂಡ್ಯದಲ್ಲೀಗ ಅಂಬರೀಶ್ ಬೆಂಬಲಿಗರು ಮತ್ತು ಜೆಡಿಎಸ್ ನಾಯಕರ ನಡುವೆ ಸಮರ ಆರಂಭವಾಗಿದ್ದು, ಈ ನಡುವೆ ಮಾತನಾಡಿರುವ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ನಾನು ಕೂಡ ಸ್ಪರ್ಧಿಸುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ.
ಈ ನಡುವೆ ಪಾಂಡವಪುರ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್.ಪುಟ್ಟಣ್ಣಯ್ಯನವರ ಮನೆಗೆ ಭೇಟಿ ನೀಡಿ ಸುನೀತ ಪುಟ್ಟಣ್ಣಯ್ಯ, ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಚರ್ಚಿಸಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿತ್ತು. ಆದರೂ ಇಲ್ಲಿ ಪುಟ್ಟರಾಜು ಅವರು ಗೆಲುವು ಪಡೆದಿದ್ದರು. ಇದೀಗ ಸುನೀತ ಪುಟ್ಟಣ್ಣಯ್ಯ ಅವರನ್ನು ಸುಮಲತಾ ಅವರು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸುಮಲತಾ ಅವರು, ನನಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಜನರು, ಅಂಬರೀಶ್ ಅಭಿಮಾನಿಗಳು ನೀವು ರಾಜಕೀಯಕ್ಕೆ ಬರಬೇಕು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಒತ್ತಡ ತಂದ ಹಿನ್ನೆಲೆಯಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ...

ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ
ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ರಾಜಕೀಯ ಮಾಡಿದ್ದಾರೆ. ಹಾಗಾಗಿ ನಾನು ಸಹ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧೆ ಮಾಡೋದಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎಂದು ಸುಮಲತಾ ಹೇಳಿದರು.

ಜನರ ತೀರ್ಮಾನವೇ ಅಂತಿಮ
ಕಾಂಗ್ರೆಸ್ ಟಿಕೆಟ್ ಕೊಡೋದಿಲ್ಲ ಎಂದು ಹೇಳಿಲ್ಲ. ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕಾಗಿ ನಾನು ಕಾಯುತ್ತೇನೆ, ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿರುವ ಸುಮಲತಾ, ಅಂತಿಮ ತೀರ್ಮಾನಕ್ಕೆ ನಾನು ಜನರಿಗೆ ಬಿಡುತ್ತೇನೆ. ಜಿಲ್ಲೆಯ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ನನ್ನ ಅಂತಿಮ ತೀರ್ಮಾನ ಎಂದು ತಿಳಿಸಿದ್ದಾರೆ.

ಜೆಡಿಎಸ್ ನಾಯಕರಿಗೆ ತಲೆ ನೋವು
ಜನತೆ ಪಕ್ಷೇತರವಾಗಿ ಸ್ಪರ್ಧಿಸಿ ಎಂದರೆ ಪಕ್ಷೇತರವಾಗಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಸುಮಲತಾ ಹೇಳುವ ಮೂಲಕ ಚುನಾವಣೆಯಲ್ಲಿ ತನ್ನ ಸ್ಪರ್ಧೆಯನ್ನು ಖಚಿತ ಗೊಳಿಸಿರುವುದು ಅಂಬರೀಶ್ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತಂದಿದ್ದರೆ, ಜೆಡಿಎಸ್ ನಾಯಕರಿಗೆ ತಲೆ ನೋವು ತರುವಂತೆ ಮಾಡಿದೆ.

ಸುಮಲತಾ ಅವರಿಗೆ ಆನೆಬಲ!
ಇನ್ನೊಂದೆಡೆ ಸುನೀತ ಪುಟ್ಟಣ್ಣಯ್ಯ ಮಾತನಾಡಿ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಫೆ.26ರಂದು ರೈತಸಂಘದ ಮುಖಂಡರ ಸಭೆ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಒಂದು ವೇಳೆ ರೈತ ಸಂಘವೇನಾದರೂ ಸುಮಲತಾ ಅವರಿಗೆ ಬೆಂಬಲ ನೀಡುವ ತೀರ್ಮಾನ ಕೈಗೊಂಡಿದ್ದೇ ಆದರೆ ಸುಮಲತಾ ಅವರಿಗೆ ಆನೆಬಲ ಬಂದಂತಾಗುತ್ತದೆ. ಎಲ್ಲದಕ್ಕೂ ಕಾದು ನೋಬೇಕಿದೆ.












Click it and Unblock the Notifications