ಬೇರೆ ಪಕ್ಷಗಳಿಗೆ ಮೊದಲು ಕುಟುಂಬ,ಬಿಜೆಪಿಗೆ ದೇಶವೇ ಮೊದಲು : ಕ್ರಿಶನ್ ಪಾಲ್ ಗುರ್ಜರ್
ಮಂಡ್ಯ, ಜುಲೈ-8 : ಬೇರೆ ಪಕ್ಷಗಳು ಮೊದಲು ಕುಟುಂಬ ನಂತರ ಪಕ್ಷ ಆನಂತರ ದೇಶ ಎಂದು ಯೋಚಿಸಿದರೆ ಬಿಜೆಪಿ ಮೊದಲು ದೇಶ, ಆನಂತರ ಪಕ್ಷ ಕೊನೆಯಲ್ಲಿ ಕುಟುಂಬದ ಬಗ್ಗೆ ಆಲೋಚಿಸುತ್ತದೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಜಾರಿ ಕುರಿತಂತೆ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೋದಿ ಅಧಿಕಾರಕ್ಕೆ ಬಂದ ಎಂಟು ವರ್ಷಗಳಲ್ಲಿ ದೇಶ ಒಳ್ಳೆಯ ಆಡಳಿತ, ಉತ್ತಮ ಆರ್ಥಿಕತೆ, ಸ್ವಚ್ಛ ರಾಜಕೀಯವನ್ನು ಕಾಣುತ್ತಿದೆ. ಸರಕಾರದ ಹಲವಾರು ಯೋಜನೆಗಳು ಬಡವರ ಬದುಕನ್ನು ಹಸನಾಗುವಂತೆ ಮಾಡಿವೆ ಎಂದು ತಿಳಿಸಿದರು.
ಮಂಡ್ಯ: ಪ್ರವಾಹ ನಿರ್ವಹಣೆ ಕುರಿತ ಸಭೆಗೆ ಸುಮಲತಾ ಗೈರು,ಜೆಡಿಎಸ್ ಶಾಸಕರ ಆಕ್ರೋಶ
ದೇಶದ ಜನರು ಉತ್ತಮರನ್ನು ಆರಿಸಿದರೆ ಒಳ್ಳೆಯ ಆಡಳಿತ ಸಿಗುತ್ತದೆ, ಕೆಟ್ಟವರನ್ನು ಆರಿಸಿದರೆ ಕೆಟ್ಟ ಆಡಳಿತ ಸಿಗುತ್ತದೆ. ಬಿಜೆಪಿ ಬಡವರಿಗೆ ಸೇವೆ ಸಲ್ಲಿಸುವ ಸರಕಾರ ಎನ್ನುವುದನ್ನು ತಮ್ಮ ಆಡಳಿತದಲ್ಲಿ ಸಾಬೀತುಪಡಿಸಿದ್ದಾರೆ. ಇದಕ್ಕೆ ಅವರಿಗಿರುವ ದೂರದೃಷ್ಟಿಯೇ ಕಾರಣ ಎಂದು ಬಣ್ಣಿಸಿದರು.
ಯುಪಿಎ ಸರಕಾರದಲ್ಲಿ ಮಂತ್ರಿಗಳು ಜೈಲು ಪಾಲು
ಹಿಂದಿನ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರ, ಹಗರಣಗಳು ತಾಂಡವವಾಡಿದ್ದವು. ಅನೇಕ ಮಂತ್ರಿಗಳು ಜೈಲು ಸೇರಿದ್ದರು. ಭ್ರಷ್ಟಾಚಾರವನ್ನು ಹೇಗೆಲ್ಲಾ ನಡೆಸಬಹುದು ಎನ್ನುವುದನ್ನು ಅಧಿಕಾರದಲ್ಲಿದ್ದವರು ತೋರಿಸಿಕೊಟ್ಟಿದ್ದರು. ಜನರ ತೆರಿಗೆಯ ಹಣ ದುರ್ಬಳಕೆಯಾಗುತ್ತಿತ್ತು. ಆದರೆ, ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಇದುವರೆಗೂ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ವರದಿಯಾಗಿಲ್ಲ. ಒಬ್ಬ ಮಂತ್ರಿಯೂ ಜೈಲು ಸೇರಿಲ್ಲ. ಜನರ ಶ್ರೇಯೋಭಿವೃದ್ಧಿಗೆ ನೀಡುವ ಹಣ ಸಂಪೂರ್ಣವಾಗಿ ಅವರಿಗೇ ಸೇರುತ್ತಿದೆ. ಅದರಲ್ಲಿ ಒಂದು ರೂಪಾಯಿ ಕೂಡ ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಬಡವರ ಹಣ ಅನ್ಯರ ಪಾಲಾಗುತ್ತಿಲ್ಲ
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಮಾತೃವಂದನಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಹಣ ನೇರವಾಗಿ ಫಲಾನುಭವಿಗಳ ಕೈಸೇರುತ್ತಿದೆ. ಇದರಿಂದಾಗಿ ಖಾಸಗಿ ಸಾಲದಿಂದ, ದಲ್ಲಾಳಿಗಳಿಂದ ಜನರು ದೂರವಾಗಿದ್ದಾರೆ. ದೆಹಲಿಯಿಂದ ಕಳುಹಿಸುವ ಹಣ ರೈತರಿಗೆ ತಲುಪುತ್ತಿರುವುದರಿಂದ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಬಡವರ ಹಣ ಅನ್ಯರ ಪಾಲಾಗದಂತೆ ತಡೆಯುವಲ್ಲಿ ಮೋದಿ ಆಡಳಿತದಲ್ಲಿ ಪರಿಣಾಮಕಾರಿ ಕ್ರಮ ಜಾರಿಗೊಳಿಸಿದ್ದಾರೆ ಎಂದು ನುಡಿದರು.
130 ಕೋಟಿ ಜನರಿಗೆ ಉಚಿತ ಲಸಿಕೆ
ಕೊರೊನಾ ವಿಷಮ ಪರಿಸ್ಥಿತಿ ಸಮಯದಲ್ಲಿ ಅಭಿವೃದ್ಧಿ ಶೀಲ ರಾಷ್ಟ್ರಗಳು ಜನರ ಪ್ರಾಣವನ್ನು ರಕ್ಷಿಸಲಾಗದೆ ಕೈಚೆಲ್ಲಿದವು. ಆದರೆ, ಮೋದಿ ಅವರು ದಿಟ್ಟತನದಿಂದ ಎದುರಿಸಲು ಸಜ್ಜಾಗಿ ಎರಡು ವ್ಯಾಕ್ಸಿನ್ಗಳನ್ನು ಸಂಶೋಧಿಸಿ 130 ಕೋಟಿ ಜನರಿಗೆ ಉಚಿತವಾಗಿ ನೀಡುವುದರೊಂದಿಗೆ ವಿಶ್ವಕ್ಕೇ ಮಾದರಿಯಾದರು. ಇದು ಮೋದಿ ಅವರ ದೂರದೃಷ್ಟಿ, ಪ್ರಗತಿಯ ವೇಗಕ್ಕೆ ಇರುವ ನಿದರ್ಶನ. ಕಳೆದ ಎಂಟು ವರ್ಷಗಳಲ್ಲಿ ನೆರೆ ರಾಷ್ಟ್ರಗಳು ಭಾರತದೊಂದಿಗೆ ನಡೆದುಕೊಳ್ಳುವ ರೀತಿ, ಗಡಿಯಲ್ಲಿನ ವಾತಾವರಣ ಬದಲಾಗಿದೆ. ಬಲಾಢ್ಯ ಚೀನಾವನ್ನು ಎದುರಿಸುವಷ್ಟು ಶಕ್ತಿ ಈಗ ಭಾರತಕ್ಕಿದೆ. ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಜೊತೆಗೆ ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಕರೆತಂದು ಮಾನವೀಯತೆ ಮೆರೆದಿದ್ದಾರೆ ಎಂದರು.
ನಿಮಿಷಾಂಬ ದೇವಾಲದಲ್ಲಿ ವಿಶೇಷ ಪೂಜೆ
ಶ್ರೀರಂಗಪಟ್ಟಣದ ಹೆಸರಾಂತ ಶ್ರೀ ನಿಮಿಷಾಂಬ ದೇವಾಲಯಕ್ಕೆ ಕೇಂದ್ರದ ಇಂಧನ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಖಾತೆ ಸಚಿವ ಕಿಶನ್ಪಾಲ್ ಗುರ್ಜರಿ ಭೇಟಿ ನೀಡಿದರು. ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಶುಕ್ರವಾರ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು, ಶ್ರೀ ನಿಮಿಷಾಂಬ ದೇವಿಯ ಆಶೀರ್ವಾದ ಪಡೆದು ಪ್ರಾರಂಭಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಮಾಜಿ ಸಚಿವ ಬಿ.ಸೋಮಶೇಖರ್, ಜಿಲ್ಲಾಕಾರಿ ಎಸ್.ಅಶ್ವತಿ, ಜಿಪಂ ಸಿಇಓ ಜಿ.ಆರ್.ಜೆ.ದಿವ್ಯಪ್ರಭು, ಅಪರ ಜಿಲ್ಲಾಕಾರಿ ವಿ.ಆರ್.ಶೈಲಜಾ ಇದ್ದರು.