Kabini Dam: ಕಬಿನಿಯಿಂದ ತಮಿಳುನಾಡಿಗೆ ನೀರು; CWRC ಆದೇಶದಿಂದ ಪಾರಾಗಿದ್ದೇವೆ ಎಂದ ಸಚಿವ
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗದಿದ್ದರೂ, ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದರಿಂದ ಸಿಡಬ್ಲ್ಯೂಸಿ ಶಿಫಾರಿಸ್ಸಿನಂತೆ ಕೆಆರ್ಎಸ್ನಿಂದ ನೀರು ಹರಿಸುವುದನ್ನು ತಪ್ಪಿಸಿಕೊಂಡಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿದಿನ ಒಂದು ಟಿಎಂಸಿ ನೀರು ನೀಡುವಂತೆ ಸೂಚನೆ ನೀಡಿದೆ. ಆದರೆ ಪ್ರಸ್ತುತ ಮಳೆ ಸಮರ್ಪಕವಾಗಿಲ್ಲ. ಜುಲೈ ಕೊನೆ ಹಾಗೂ ಆಗಸ್ಟ್ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇದೀಗ 104 ಅಡಿ ಇದೆ. ಇಲ್ಲಿನ ಜನ-ಜಾನುವಾರು, ಕೆರೆಕಟ್ಟೆಗಳಿಗೆ ನೀರು ತುಂಬಿಸುವುದಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಆಗಸ್ಟ್ನಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಲಿದೆ. ಆದರೆ ಪ್ರಸ್ತುತ ನೀರಿನ ಕೊರತೆ ಇದೆ. ಇನ್ನಷ್ಟು ದಿನ ಕಾದು ನೋಡಿ ಬೆಳೆ ಹಾಕುವ ಬಗ್ಗೆ ನಿರ್ಧಾರ ಮಾಡಲು ತೀರ್ಮಾನಿಸಲಾಗಿದೆ. ಆದರೆ ಸಿಡಬ್ಲ್ಯೂಆರ್ಸಿ ಶಿಫಾರಸು ಶಾಕ್ ನೀಡಿದೆ. ಹಿಂದೆ ನಮ್ಮ ಅಧಿಕಾರಿಗಳು ಸಮಿತಿ ಮುಂದೆ ಸಮರ್ಥವಾಗಿ ವಾದ ಮಂಡಿಸಿತ್ತು. ಆಗ ನೀರು ಬಿಟ್ಟಿರಲಿಲ್ಲ. ಈ ಬಾರಿ ತಮಿಳುನಾಡು-ಕರ್ನಾಟಕ ಅಧಿಕಾರಿಗಳ ನಡುವೆ ಚರ್ಚೆ ನಡೆಸಿದ್ದಾರೆ. ನಮ್ಮ ಅಧಿಕಾರಿಗಳು ಸಮರ್ಥವಾಗಿ ಮಂಡಿಸಿದ್ದಾರೆ. ಆದರೆ ಅಂತಿಮವಾಗಿ ಸಮಿತಿ ತೀರ್ಮಾನ ತೆಗೆದುಕೊಂಡು ನೀರು ಹರಿಸುವಂತೆ ಸೂಚಿಸಿದೆ ಎಂದರು.
ಕಬಿನಿಯಿಂದ ನೀರು ಬಿಡುಗಡೆ
ಕಬಿನಿ ಜಲಾಶಯದಿಂದ ಈಗಾಗಲೇ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಇದೀಗ ಕೆಆರ್ಎಸ್ ಜಲಾಶಯದಿಂದ ಹರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಕಾನೂನು, ತಂತ್ರಜ್ಞರ ಸಮಿತಿ ಜತೆ ಚರ್ಚೆ ನಡೆಸಿ, ಜುಲೈ ಕೊನೇ ವಾರದವರೆಗೆ ನಮಗೆ ಅವಕಾಶ ನೀಡಬೇಕು. ಮಳೆ ಆಧರಿಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಭಾನುವಾರ ಸಂಜೆ ಎಲ್ಲ ಸರ್ವಪಕ್ಷಗಳ ಸಭೆ ಕರೆದು ತೀರ್ಮಾನ ಮಾಡಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು.
ಸರ್ವಪಕ್ಷಗಳ ಸಭೆಯಲ್ಲಿ ಎಲ್ಲರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ನಿನ್ನೆಯಿಂದ ಕಬಿನಿ ಜಲಾಶಯದ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ತಮಿಳುನಾಡಿಗೆ ಹೆಚ್ಚುವರಿಯಾಗಿ ನೀರು ಹರಿದು ಹೋಗುತ್ತಿದೆ. ನೀರು ಹೆಚ್ಚು ಹೋಗುತ್ತಿರುವುದರಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ. ಹೇಮಾವತಿ ಹಾಗೂ ಹಾರಂಗಿ ಜಲಾಶಯ ತುಂಬಿದರೆ ಇನ್ನು 10 ದಿನಗಳಲ್ಲಿ ಹೆಚ್ಚುವರಿ ನೀರು ಹರಿದು ಹೋಗುವ ಸಾಧ್ಯತೆ ಇದೆ ಎಂದರು.
ವಿರೋಧ ಪಕ್ಷಗಳು ಟೀಕೆ ಮಾಡುವುದೇ ಹೆಚ್ಚು
ನಮ್ಮ ಕರ್ನಾಟಕದ ಅಧಿಕಾರಿಗಳು ಸಮರ್ಥವಾಗಿ ಮಂಡಿಸಿದ್ದಾರೆ. ಇದರ ಬಗ್ಗೆ ಲಿಖಿತವಾದ ದಾಖಲೆ ಇದೆ. ವಿರೋಧ ಪಕ್ಷಗಳಿಗೆ ಕುಡಿಯುವ ನೀರು, ರೈತರ ವಿಚಾರದಲ್ಲಿ ರಾಜಕೀಯ ಮಾಡುವುದೇ ಆಗಿದೆ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಕಾವೇರಿ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದು ಚುನಾವಣೆ ಸಂದರ್ಭದಲ್ಲಿ ನಾನು ಹೇಳಿದ್ನ, ಕಾವೇರಿ ಕೀಲಿ ಕೈ ನನ್ನ ಹತ್ತಿರ ಇಲ್ಲ ಎಂದು ನಾನು ಹೇಳಿದ್ದೇನಾ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಕಾವೇರಿ ಸಮಸ್ಯೆಗೆ ಪ್ರಥಮ ಆದ್ಯತೆ ಎಂದಿದ್ದವರು ಯಾರು?
ಚುನಾವಣೆಯ ಸಂದರ್ಭದಲ್ಲಿ ಪ್ರಥಮ ಆದ್ಯತೆ ನೀಡುತ್ತೇನೆ ಎಂದು ಅವರ ನಾಯಕರೇ ಹೇಳಿದ್ದರು. ಈಗ ಸಮಸ್ಯೆ ಬಂದಿದೆ. ಕೇಂದ್ರ ಸರ್ಕಾರದ ಸಚಿವರಾಗಿರುವುದರಿಂದ ಕೇಂದ್ರ ಸರ್ಕಾರವೇ ಮಧ್ಯೆ ಪ್ರವೇಶ ಮಾಡಿ ಪ್ರಧಾನಿ, ನೀರಾವರಿ ಸಚಿವರೊಂದಿಗೆ ಇವರೇ ಖುದ್ದಾಗಿ ಮಾತುಕತೆ ನಡೆಸಿ ಸಹಾನುಭೂತಿಯಿಂದ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ಅವರೇ ಮಾತುಕೊಟ್ಟಿದ್ದರು. ಸಂಸದರಾಗಿ, ಸಚಿವರಾಗಿದ್ದಾರೆ. ಇಲ್ಲ ಅಂದರೆ ಮಾಧ್ಯಮಗಳ ಮುಂದೆಯೇ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.












Click it and Unblock the Notifications