ಸಚಿವ ಪುಟ್ಟರಾಜು ಪುತ್ರನಿಗೂ ತಟ್ಟಿದ ಐಟಿ ದಾಳಿ ಬಿಸಿ, ಸಮನ್ಸ್
ಮಂಡ್ಯ, ಏಪ್ರಿಲ್ 11: ಮಂಡ್ಯ ಉಸ್ತುವಾರಿ, ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾರ್ಚ್ 28ರಂದು ದಾಳಿ ನಡೆಸಿದ್ದರು. ಈಗ ಪುಟ್ಟರಾಜು ಅವರ ಪುತ್ರನ ಸರದಿ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪುಟ್ಟರಾಜು ಅವರ ಪುತ್ರನಿಗೆ ಸೇರಿದೆ ಎನ್ನಲಾದ ಅಪಾರ್ಟ್ಮೆಂಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಏಪ್ರಿಲ್ 25ಕ್ಕೆ ವಿಚಾರಣೆಗೆ ಬರುವಂತೆ ನೋಟಿಸ್ಜಾರಿಗೊಳಿಸಿರುವ ಸುದ್ದಿ ಬಂದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಅವರ ಚುನಾವಣಾ ಉಸ್ತುವಾರಿಯನ್ನು ಕೂಡಾ ಪುಟ್ಟರಾಜು ಹೊತ್ತುಕೊಂಡಿದ್ದಾರೆ.

ಪುಟ್ಟರಾಜು ಅವರ ಮಗ ಹಾಗೂ ಸೊಸೆ ವಾಸವಿದ್ದ ಯಾದವಗಿರಿಯ ಸಂಕಲ್ಪ್ ಸೆಂಟ್ರಲ್ ಪಾರ್ಕ್ ಅಪಾರ್ಟ್ಮೆಂಟ್ ಮೇಲೆ ಗುರುವಾರ ಬೆಳಗ್ಗೆ ಐಟಿ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳ ಜೊತೆ ಸ್ಥಳೀಯ ಪೊಲೀಸರು ಇರಲಿಲ್ಲ ಎಂಬುದು ವಿಶೇಷ.
ಮಾರ್ಚ್ 28ರಂದು ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಯ ವಿವಿಧೆಡೆಗಳಲ್ಲಿ ಐಟಿ ದಾಳಿ ನಡೆಸಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ನನ್ನ ಬಳಿ ಇರುವ ದಾಖಲೆಗಳೆಲ್ಲವೂ ಸರಿಯಾಗಿದ್ದು, ನಾನು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಸ್ ಪುಟ್ಟರಾಜು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಮತ್ತು ಗೋವಾ ತೆರಿಗೆ ಇಲಾಖೆ ಉಸ್ತುವಾರಿ ಡಿ.ಜಿ ಬಾಲಕೃಷ್ಣನ್ ಅವರನ್ನು ವರ್ಗಾವಣೆ ಮಾಡುವಂತೆ ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಪತ್ರ ಬರೆದಿತ್ತು. ಆದರೆ, ಚುನಾವಣೆ ಆಯೋಗ ವರ್ಗಾವಣೆ ಮಾಡಲಿಲ್ಲ. ಈಗ ಇದೇ ಬಾಲಕೃಷ್ಣನ್ ಅವರ ನಿರ್ದೇಶನದಂತೆ 200-300 ಅಧಿಕಾರಿಗಳ ತಂಡದಿಂದ ಕರ್ನಾಟಕದಲ್ಲಿ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications