ಬಿಜೆಪಿ ಮುಖಂಡರು ಮುದಿ ನಾಯಿಯಂತೆ ಕಾಯುತ್ತಿದ್ದಾರೆ : ಡಿ.ಸಿ.ತಮ್ಮಣ್ಣ
ಮಂಡ್ಯ, ಡಿಸೆಂಬರ್ 28 : 'ರಾಜ್ಯದ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಕೌಂಟ್ ಡೌನ್ ಹೇಳುತ್ತಿರುವ ಬಿಜೆಪಿ ನಾಯಕರು ಮುದಿ ನಾಯಿಯಂತೆ ಕಾಯುತ್ತಿದ್ದಾರೆ' ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳುವ ಮೂಲಕ ವಿವಾದ ಎಬ್ಬಿಸಿದ್ದಾರೆ.
ಶುಕ್ರವಾರ ಮಂಡ್ಯದಲ್ಲಿ ಮಾತನಾಡಿದ ಡಿ.ಸಿ.ತಮ್ಮಣ್ಣ ಅವರು, 'ಒಂದೇ ಪಕ್ಷದ ಸರ್ಕಾರ ಇದ್ದರೆ ಅಸಮಾಧಾನವಿರುತ್ತದೆ. ಹಾಗೇಯೇ ಸಮ್ಮಿಶ್ರ ಸರ್ಕಾರದಲ್ಲಿ ಸಹ ಅಸಮಾಧಾನ ಇರುವುದು ಸಹಜ' ಎಂದರು.
'ಸರ್ಕಾರ ಸುಭದ್ರವಾಗಿದ್ದು ಯಾವುದೇ ತೊಂದರೆ ಇಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಜೆ.ಎಚ್.ಪಟೇಲರು ಒಂದು ಮಾತು ಹೇಳಿದ್ದರು. ಅಂತಹ ಸನ್ನಿವೇಶ ಈಗ ನಿರ್ಮಾಣವಾಗಿದೆ' ಎಂದು ಸ್ಪಷ್ಟಪಡಿಸಿದರು.
'ಸರ್ಕಾರದ ಬಗ್ಗೆ ಹೇಳಿಕೆ ನೀಡುವುದು ಕೆಲವರಿಗೆ ಚಟ ಆಗಿದೆ. ಇದರಂತೆ ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಹೇಳಿಕೆ ನೀಡುತ್ತಾ, ಸರ್ಕಾರ ಬೀಳುತ್ತದೆ' ಎಂದು ಕಾದು ಕುಳಿತಿದ್ದಾರೆ' ಎಂದು ಡಿ.ಸಿ.ತಮ್ಮಣ್ಣ ಆರೋಪಿಸಿದರು.
ಟೀಕೆ ಮಾಡುವುದು ಗುಣ : ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿ ಕಾರಿದ ಡಿ.ಸಿ.ತಮ್ಮಣ್ಣ ಅವರು, 'ಅಧಿಕಾರದಲ್ಲಿ ಇಲ್ಲದೇ ಇರುವ ವೇಳೆ ಟೀಕೆ ಮಾಡುವುದು ಮಾನವ ಸಹಜ ಗುಣ' ಎಂದು ಹೇಳಿದರು.
'ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನವಿದ್ದರೆ ಸಿದ್ದರಾಮಯ್ಯ, ಪರಮೇಶ್ವರ, ಎಚ್.ಡಿ.ಕುಮಾರಸ್ವಾಮಿ ಅವರಂತಹ ನಾಯಕರು ಹೇಳಿಕೆ ನೀಡಿದರೆ ಮಾತ್ರ ಮೌಲ್ಯ ಮತ್ತು ಅರ್ಥ ಇರುತ್ತದೆ' ಎಂದು ತಿಳಿಸಿದರು.