ಅಮೆರಿಕಾದಿಂದ ಮೇಲುಕೋಟೆಗೆ: ರಾಜಕೀಯ ಅಖಾಡದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸದ್ದು
ದರ್ಶನ್ ಪುಟ್ಟಣ್ಣಯ್ಯ... ಅಮೆರಿಕಾದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದವರು. ಅವರಿಗೆ ಸದ್ಯಕ್ಕೆ ಭಾರತಕ್ಕೆ ವಾಪಾಸಾಗುವ ಯಾವ ಆಲೋಚನೆಯೂ ಇರಲಿಲ್ಲ.
ಆದರೆ, ಅವರ ತಂದೆ, ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಕಳೆದ ಫೆಬ್ರವರಿ 18ರಂದು ಅಕಾಲಿಕ ಮರಣವನ್ನಪ್ಪಿದರು. ಸಾಯುವ ಮೊದಲು ಅವರು ಮೇಲುಕೋಟೆಯ ಶಾಸಕರಾಗಿದ್ದರು. ಸರ್ವೋದಯ ಕರ್ನಾಟಕ ಪಕ್ಷದಿಂದ ಗೆದ್ದು ಬಂದು, ಮುಂದೆ ಪಕ್ಷವನ್ನು ಸ್ವರಾಜ್ ಇಂಡಿಯಾದಲ್ಲಿ ವಿಲೀನಗೊಳಿಸಿದ್ದ ಪುಟ್ಟಣ್ಣಯ್ಯ ಕರ್ನಾಟಕದಾದ್ಯಂತ ಚಿರಪರಿಚಿತರಾಗಿದ್ದರು. ಅದರಲ್ಲೂ ರೈತ ಹೋರಾಟಗಾರರ ಪಾಲಿನ ಕಣ್ಮಣಿಯಾಗಿದ್ದರು.
ಪುಟ್ಟಣ್ಣಯ್ಯ ಅವರ ಸಾವು ಕರ್ನಾಟಕದ ರೈತ ಚಳವಳಿಯಲ್ಲಿ ಇನ್ನಿಲ್ಲದ ನಿರ್ವಾತವನ್ನು ಸೃಷ್ಟಿಸಿತ್ತು.

ಪುಟ್ಟಣ್ಣಯ್ಯ ಜಾಗ ತುಂಬಲು ಬಂದ ದರ್ಶನ್
ಹಾಗೆ ತಂದೆ ನಿಧನರಾದಾಗ ಅವರ ಅಭಿಮಾನಿಗಳೆಲ್ಲಾ 'ಪುಟ್ಟಣ್ಣಯ್ಯ' ಅವರ ಜಾಗ ತುಂಬುವಂತೆ ಮಗ 40ರ ಹರೆಯದ ದರ್ಶನ್ ಪುಟ್ಟಣ್ಣಯ್ಯರಿಗೆ ದುಂಬಾಲು ಬಿದ್ದರು.
ಹಾಗೆ ಅಭಿಮಾನಿಗಳ ಒತ್ತಾಸೆಯನ್ನು ಮನ್ನಿಸಿದ ದರ್ಶನ್ ಪುಟ್ಟಣ್ಣಯ್ಯ ತಂದೆಯ ಜಾಗ ತುಂಬಲು ಅಮೆರಿಕಾದಿಂದ ಭಾರತಕ್ಕೆ ಬರಬೇಕಾಯಿತು. ಅವರೀಗ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 'ಸ್ವರಾಜ್ ಇಂಡಿಯಾ'ದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಅಮೆರಿಕಾ ನಂಟು ಬಿಟ್ಟು ತಮ್ಮೂರು ಮೇಲುಕೋಟೆಯಲ್ಲಿ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದಾರೆ.

ಸಾಫ್ಟ್ ವೇರ್ ಎಂಜಿನಿಯರ್
ತಂದೆ ರಾಜಕಾರಣಿಯಾದರೂ ದರ್ಶನ್ ಅವರಿಗೆ ರಾಜಕೀಯದ ನಂಟು ಹೊಸದು. ಅಮೆರಿಕಾದಲ್ಲಿ ಸುಮಾರು 15 ವರ್ಷಗಳಿಂದ ವಾಸವಾಗಿರುವ ಅವರು 'ಕ್ವಿನಿಕ್ಸ್ ಟೆಕ್ನಾಲಜೀಸ್' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಬೆಳೆಸಿ ಅದರ ಸಿಇಒ ಆಗಿದ್ದರು.
ಕೋಸ್ಟ ರಿಕಾ, ದುಬೈ ಮತ್ತು ಭಾರತದಲ್ಲಿ ಕಚೇರಿಗಳನ್ನು ಹೊಂದಿರುವ ಈ ಕಂಪನಿ ಸಾಫ್ಟ್ ವೇರ್ ಸೇವೆಗಳನ್ನು ನೀಡುತ್ತದೆ.
ಹೀಗೆ ಅಮೆರಿಕಾದಲ್ಲೇ ನೆಲೆಯೂರಿದ್ದ ದರ್ಶನ್ ಕುಟುಂಬವೂ ಅಲ್ಲೇ ನೆಲೆ ನಿಂತಿತ್ತು. ಇನ್ನೂ ಅವರ ಪತ್ನಿ ಮತ್ತು ಮಕ್ಕಳು ಅಮೆರಿಕಾದಲ್ಲೇ ಇದ್ದಾರೆ. ಅವರಿನ್ನೂ ಭಾರತಕ್ಕೆ ತಮ್ಮ ನೆಲೆ ಬದಲಿಸಿಲ್ಲ. ಇನ್ನೇನು ಅವರೂ ಭಾರತಕ್ಕೆ ವಾಪಾಸಾಗಲಿದ್ದಾರೆ.

ತಂದೆ ಯೋಜನೆ ಪೂರ್ಣಗೊಳಿಸುವ ಕನಸು
ಈ ಕುರಿತು ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಪುಟ್ಟಣ್ಣಯ್ಯ, "ರೈತರ ಸಮಸ್ಯೆಗಳ ಬಗ್ಗೆ ನಾನು ಯಾವಾಗಲೂ ಕಾಳಜಿಯನ್ನು ಹೊಂದಿದ್ದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕಾಗಿ ನೀರಿನ ಕೊರತೆ ನನ್ನ ಕ್ಷೇತ್ರದ ಮುಖ್ಯ ಸಮಸ್ಯೆಯಾಗಿದೆ," ಎಂದಿದ್ದಾರೆ.
"ನನ್ನ ತಂದೆ ಜನರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಆರಂಭಿಸಿದ್ದರು. ನಾನು ಅವರ ಪರಂಪರೆಯನ್ನು ಮುಂದುವರಿಸಬೇಕಾಗಿದೆ," ಎಂಬುದು ದರ್ಶನ್ ಅವರ ಮನದಾಳದ ಮಾತು.
ಹೀಗೆ ನೆಲದ ಮಕ್ಕಳ ಸಮಸ್ಯೆಗಳಿಗೆ ಮಿಡಿಯುತ್ತಾ ದೂರದ ಅಮೆರಿಕಾದಿಂದ ಬಂದು ಮೇಲುಕೋಟೆಯ ಧೂಳಿಗೆ ಇಳಿದಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದು ಮೇಲುಕೋಟೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ದರ್ಶನ್ ಪುಟ್ಟಣ್ಣಯ್ಯ ವರ್ಸಸ್ ಸಿಎಸ್ ಪುಟ್ಟರಾಜು
"ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರು ನನ್ನ ತಂದೆ ಬಗ್ಗೆ ಬಹಳ ಗೌರವ ಹೊಂದಿದ್ದರು. ಇಷ್ಟು ವರ್ಷ ನನ್ನ ತಂದೆ ಮಾಡಿದ ಕೆಲಸಕ್ಕೆ ಇದು ಮೆಚ್ಚುಗೆಯ ಸಂಕೇತ," ಎನ್ನುತ್ತಾರೆ ದರ್ಶನ್.
ಮುಂದುವರಿದು ಮಾತನಾಡುವ ಅವರು, "ಜೆಡಿಎಸ್ ನನ್ನ ಎದುರಾಳಿ. ನನಗೆ ಇಲ್ಲಿ ಗೆಲ್ಲಲು ಉತ್ತಮ ಅವಕಾಶಗಳು ಇವೆ. ನನ್ನನ್ನು ಬೆಂಬಲಿಸಲು ಜನರು ಮುಂದೆ ಬರುತ್ತಿದ್ದಾರೆ," ಎನ್ನುತ್ತಾರೆ.
ದರ್ಶನ್ ಅವರಿಗೆ ಜೆಡಿಎಸ್ ನ ಸಂಸದ ಸಿ.ಎಸ್.ಪುಟ್ಟರಾಜು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹೀಗಿದ್ದೂ ನಾಮಪತ್ರ ಸಲ್ಲಿಸುವಂದೇ ಸಾವಿರಾರು ಜನರ ಜೊತೆ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ್ದ ದರ್ಶನ್ ಪುಟ್ಟಣ್ಣಯ್ಯ, ಪುಟ್ಟರಾಜು ವಿರುದ್ಧ ಗೆಲ್ಲುವ ಉಮೇದಿನಲ್ಲಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications