ಮಂಡ್ಯದಿಂದ ಬಿಜೆಪಿ ಟಿಕೆಟ್ ಗೆ ಅರ್ಜಿ ಹಾಕಿರುವ ಮಂಜುನಾಥ್
ಮಂಡ್ಯ, ಜನವರಿ 22: "ನನಗಿರುವ ಸ್ನೇಹಿತರು, ಈ ವರೆಗೆ ಹಿಂದೂಪರವಾಗಿ ಮಾಡಿರುವ ಕೆಲಸವನ್ನೇ ನಂಬಿದ್ದೇನೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗುವ ಭರವಸೆ ಇದೆ. ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ ಆಕಾಂಕ್ಷಿ ಆಗಿದ್ದೇನೆ" ಎಂದು ಕ್ಷಣ ಕಾಲ ಮೌನವಾದರು ನರೇಂದ್ರ ಮೋದಿ ವಿಚಾರ ಮಂಚ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್.
ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ತಾವು ಎಂದು ಅವರು ಕಳಿಸಿದ ಪತ್ರಿಕಾ ಪ್ರಕಟಣೆಯನ್ನು ಗಮನಿಸಿ ಒನ್ಇಂಡಿಯಾ ಕನ್ನಡ ಅವರನ್ನು ಮಾತನಾಡಿಸಿತು. "ಹತ್ತಾರು ವರ್ಷದಿಂದ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದೇನೆ. ಜಿಲ್ಲೆಯ ರೈತರ ಸಮಸ್ಯೆ, ಕಾವೇರಿ ವಿಚಾರ, ಮೈ ಶುಗರ್, ಲವ್ ಜಿಹಾದ್ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದ್ದೇನೆ" ಎಂದರು.
ಪರಿವರ್ತನಾ ಯಾತ್ರೆಯಲ್ಲಿ 'ಕೃಷ್ಣ'ಪರ್ವ! ಒಕ್ಕಲಿಗರ ಓಲೈಕೆಯತ್ತ ಬಿಜೆಪಿ?!
ಡಿಟಿಎಚ್ ವಿತರಕರಾಗಿರುವ ಅವರಿಗೆ, ಆರ್ಥಿಕವಾಗಿ ಅನುಕೂಲ ಇದೆಯೇ ಎಂದು ಪ್ರಶ್ನಿಸಿದರೆ, ನನ್ನ ಸ್ನೇಹಿತರ ಸಹಾಯದಿಂದ ಮಾಡಿದ ಕೆಲಸ ಜನರ ಮುಂದೆ ಹೇಳಿಕೊಳ್ಳುತ್ತೇನೆ. ಬೆನ್ನಿಗೆ ಪಕ್ಷವು ನಿಂತರೆ ಹೋರಾಟವಂತೂ ನಿಶ್ಚಿತ. ನಾನು ಹಣದ ವ್ಯಕ್ತಿಯಲ್ಲ. ಆದರೆ ಕೋಟ್ಯಂತರ ರುಪಾಯಿಗೂ ಮಿಗಿಲಾದ ಸ್ನೇಹ ವಲಯ ಜತೆಗಿದೆ ಎಂದರು.
ಒಂದು ವೇಳೆ ಟಿಕೆಟ್ ಸಿಗದಿದ್ದರೆ ಎಂದು ಕೇಳಿದರೆ, ವರಿಷ್ಠರು ಯಾರನ್ನು ಅಭ್ಯರ್ಥಿ ಎಂದು ತೀರ್ಮಾನಿಸುತ್ತಾರೋ ಅವರ ಪರವಾಗಿ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತಾರೆ.
ಅಂದಹಾಗೆ, ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಕೂಡ ಅಷ್ಟು ಸುಲಭವಿಲ್ಲ. ಅರವಿಂದ್, ಮಧುಚಂದನ್ ಸೇರಿದಂತೆ ಮತ್ತೊಬ್ಬರು ಮಹಿಳಾ ಅಭ್ಯರ್ಥಿ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಸ್ಪರ್ಧೆ ಬಗ್ಗೆ ಕೇಳಿದರೆ, ಸ್ಪರ್ಧೆ ಅಂತಾಗಿ ಅದರಲ್ಲಿ ಗೆದ್ದರೆ ಚಂದ ಎಂದು ನಿರುದ್ವಿಗ್ನ ಧ್ವನಿಯಲ್ಲಿ ಉತ್ತರಿಸುತ್ತಾರೆ ಮಂಜುನಾಥ್.