ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭ
ಮಂಡ್ಯ, ಜೂನ್ 03: ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಅನ್ನು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಲಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.
ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಆದಿಚುಂಚನಗಿರಿ ಶ್ರೀಗಳನ್ನು ಅಭಿನಂದಿಸಿದರು. ತೀರಾ ಅಗತ್ಯವಿರುವ ಕೋವಿಡ್ -19 ಟೆಸ್ಟಿಂಗ್ ಲ್ಯಾಬ್ ಅನ್ನು ಕೆಲವೇ ದಿನಗಳಲ್ಲಿ ನಿರ್ಮಿಸಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ ಪರೀಕ್ಷಾ ವರದಿಗಾಗಿ ಒಂದೆರಡು ದಿನ ಕಾಯಬೇಕಾಗುತ್ತಿತ್ತು. ಈಗ 24 ಗಂಟೆಯಲ್ಲಿ ವರದಿ ಸಿಗಲಿದೆ. ಪರೀಕ್ಷೆಗೆ ಬೇಕಾದ ಅಗತ್ಯ ಹಣವನ್ನು ಸರ್ಕಾರ ಭರಿಸಲು ಸಿದ್ಧವಿದೆ ಎಂದರು.
ಇದೇ ವೇಳೆ ಜನರಿಗೆ ಕೆಲವು ಸಲಹೆಗಳನ್ನು ನೀಡಿದ ಸಚಿವರು, "ಯಾರೂ ಮದ್ಯ ಹಾಗೂ ಧೂಮಪಾನ ಮಾಡಬೇಡಿ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆ ಆಗತ್ತೆ. ಆರೋಗ್ಯಯುತ ಜೀವನಕ್ಕೆ ಇದು ಮಾರಕ. ಹೀಗಾಗಿ ದುಶ್ಚಟಗಳಿಂದ ದೂರವಿರಿ" ಎಂದು ಹೇಳಿದರು.

ಅಲ್ಲದೆ ಮೈಶುಗರ್ ಸಕ್ಕರೆ ಕಾರ್ಖಾನೆ ಕುರಿತು ಮಾತನಾಡಿ, "ಈ ಸಂಬಂಧ ಸಿಎಂ ಜೊತೆ ಮಾತನಾಡಲಾಗಿದೆ. ಖಾಸಗಿಯವರಿಗೆ ಕೊಡುವುದು ಬೇಡ ಎಂದು ಸಿಎಂ ಬಳಿ ಮನವಿ ಮಾಡಿದ್ದೆ. ಅಂತೆಯೇ ಖಾಸಗಿಗೆ ಕೊಡುವ ನಿರ್ಧಾರ ಕೈ ಬಿಡಲಾಗಿದೆ. ಸರ್ಕಾರವೇ ನಡೆಸಬೇಕಾ ಎನ್ನುವುದನ್ನು ಸಿಎಂ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಿದ್ದಾರೆ" ಎಂದು ತಿಳಿಸಿದರು.












Click it and Unblock the Notifications