ಮಂಡ್ಯ: ಸುಮಲತಾಗೆ ಬೆಂಬಲ ನೀಡಿದ ಕಾಂಗ್ರೆಸ್ಸಿಗರ ಉಚ್ಛಾಟನೆ
ಮಂಡ್ಯ, ಮಾರ್ಚ್ 22: ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದ್ದ ಮಂಡ್ಯ ಕಾಂಗ್ರೆಸ್ ಮುಖಂಡರನ್ನು ಕೆಪಿಸಿಸಿಯು ಉಚ್ಛಾಟನೆ ಮಾಡಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಮಂಡ್ಯದಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದಲ್ಲದೆ, ಅವರ ಜೊತೆ ಬಹಿರಂಗ ಸಮಾವೇಶಗಳಲ್ಲಿ ಕಾಣಿಸಿಕೊಂಡಿದ್ದರು. ಇದರ ಬಗ್ಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದು ರಾಜ್ಯ ಕಾಂಗ್ರೆಸ್ಗೂ ತೀವ್ರ ಮುಜುಗರ ಉಂಟುಮಾಡಿತ್ತು, ಹಾಗಾಗಿ ಕೆಪಿಸಿಸಿ ಈ ಕಠಿಣ ನಿರ್ಧಾರ ತಳೆದಿದ್ದು, ಮಂಡ್ಯ ಕಾಂಗ್ರೆಸ್ ಮುಖಂಡರಾದ ಸಚ್ಚಿದಾನಂದ ಅವರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಿದೆ.

ಮಂಡ್ಯದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಡ್ಡಾಯವಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಬೆಂಬಲಿಸಬೇಕು ಎಂದು ಕಾಂಗ್ರೆಸ್ ಹೇಳಿತ್ತು ಆದರೂ ಕೆಲವು ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ.
ಈ ಬಗ್ಗೆ ಅಸಮಾಧಾನ ಹೊರಹಾಕಿದ್ದ ಕುಮಾರಸ್ವಾಮಿ, ಕೆಲವು ಕಾಂಗ್ರೆಸ್ ಮುಖಂಡರು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ, ಅವರ ಮುಂದೆ ಭಿಕ್ಷೆ ಬೇಡುವ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ನಿಖಿಲ್ ಕುಮಾರಸ್ವಾಮಿ ಸಹ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು.
ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಸುಮಲತಾ ಅವರಿಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದರು, ಆದರೂ ಕೆಲವರು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇಂದು ಸಚ್ಚಿದಾನಂದ ಅವರನ್ನು ಉಚ್ಛಾಟಿಸುವ ಮೂಲಕ ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಸಂದೇಶವನ್ನು ರವಾನಿಸಿದೆ.












Click it and Unblock the Notifications