ಟಿ.ಕೆ. ಹಳ್ಳಿ ಜಲಮಂಡಳಿಯ ಜಲರೇಚಕ ಯಂತ್ರಾಗಾರ ಸುರಕ್ಷತೆಗೆ ತಡೆಗೋಡೆ ನಿರ್ಮಾಣ: ಸಿಎಂ
ಮಂಡ್ಯ, ಸೆಪ್ಟೆಂಬರ್ 5: ''ಹಲಗೂರು ಸಮೀಪದ ಬೆಂಗಳೂರು ಜಲಮಂಡಳಿಯ ಜಲರೇಚಕ ಯಂತ್ರಾಗಾರದ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ, ಸುತ್ತಾ ತಡೆಗೋಡೆ ನಿರ್ಮಿಸಲಾಗುವುದು'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಲಮಂಡಳಿ ಸ್ಥಾಪಿಸಿರುವ ಯಂತ್ರಾಗಾರದಲ್ಲಿರುವ ಮೋಟಾರ್ಗಳು ನೀರಿನಲ್ಲಿ ಮುಳುಗಿಹೋಗಿವೆ. ಇದರಿಂದಾಗಿ ಬೆಂಗಳೂರಿಗೆ ಸರಬರಾಜಾಗುವ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಟಿ.ಕೆ. ಹಳ್ಳಿ ಜಲಮಂಡಳಿ ಮೂಲಕವೇ ಬೆಂಗಳೂರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇದೀಗ ಮುಂದಿನ ಒಂದೆರಡು ದಿನಗಳ ಕಾಲ ರಾಜಧಾನಿಗೆ ಕುಡಿಯುವ ನೀರು ಸಿಗದಂತಾಗಿದೆ.
ಭಾನುವಾರ ರಾತ್ರಿ ವರುಣಾರ್ಭಟದಿಂದ ಅಪಾರ ಪ್ರಮಾಣದ ನೀರು ಯಂತ್ರಾಗಾರಕ್ಕೆ ನುಗ್ಗಿದ್ದರಿಂದ ಅರ್ಧ ಬೆಂಗಳೂರಿಗೆ ನೀರು ಪೂರೈಕೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
75 ವರ್ಷಗಳ ಬಳಿಕ ಭೀಮೇಶ್ವರ ನದಿ ಉಕ್ಕಿ ಹರಿದಿದೆ. ಭಾನುವಾರ ರಾತ್ರಿ ಮಳೆಗೆ ಮೇಲ್ಬಾಗದ ನಾಲ್ಕೈದು ಕೆರೆಗಳು ಒಡೆದು ಕೆರೆ ನೀರು ಹಾಗೂ ಮಳೆ ನೀರು ಎರಡೂ ಮಿಶ್ರಣಗೊಂಡು ಅಪಾರ ಪ್ರಮಾಣದ ನೀರು ಹರಿದುಬಂದು ಜಲರೇಚಕ ಯಂತ್ರಾಗಾರಕ್ಕೆ ನುಗ್ಗಿದೆ.

ಮೋಟಾರ್ ಪಂಪ್ಗಳು ನೀರಿನಲ್ಲಿ ಮುಳುಗಡೆ
ಯಂತ್ರಾಗಾರದಲ್ಲಿರುವ ಐದು ಘಟಕಗಳ ಪೈಕಿ ಎರಡು ಪಂಪ್ಹೌಸ್ಗಳಿಗೆ ನೀರು ನುಗ್ಗಿದೆ. 550 ಮತ್ತು 350 ಎಂಎಲ್ಡಿ ಸಾಮರ್ಥ್ಯದ ಘಟಕಗಳಲ್ಲಿರುವ ಮೋಟಾರ್ ಪಂಪ್ಗಳು ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಸುಮಾರು 880 ಎಂಎಲ್ಡಿ ನೀರನ್ನು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಉಳಿದಂತೆ 550 ಎಂಎಲ್ಡಿ ನೀರನ್ನು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಾಳೆ ಬೆಳಗ್ಗೆಯೊಳಗೆ ಈ ಕಾರ್ಯ
ನೀರು ತುಂಬಿದ ಎರಡು ಪಂಪ್ಹೌಸ್ಗಳನ್ನು ಸರಿಪಡಿಸುವ ಕೆಲಸ ಈಗಾಗಲೇ ಆರಂಭವಾಗಿದೆ. 4ನೇ ಹಂತದ ಪಂಪ್ಹೌಸ್ನಲ್ಲಿ 12 ಅಡಿ ನೀರನ್ನು ಹೊರತೆಗೆಯಲಾಗಿದೆ. ಇನ್ನೂ 11 ಅಡಿ ನೀರನ್ನು ಹೊರತೆಗೆಯಬೇಕಿದೆ. ಮಧ್ಯರಾತ್ರಿ ಅಥವಾ ನಾಳೆ ಬೆಳಗ್ಗೆಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಆನಂತರ ನೀರಿನಲ್ಲಿ ಮುಳುಗಡೆಯಾಗಿದ್ದ ಮೋಟಾರ್ ಪಂಪ್ಸೆಟ್ಗಳನ್ನು ಡ್ರೈ ಮಾಡಿ ಎಲ್ಲವನ್ನೂ ಪರಿಶೀಲಿಸಲಾಗುವುದು. ಬಳಿಕ ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜನವರಿಯಿಂದ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿದೆ. ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಮಳೆ ನೀರು ಹಾಗೂ ಕೆರೆ ನೀರು ಸೇರಿ ಪ್ರವಾಹ ಸೃಷ್ಟಿಯಾಗಿದೆ. ಇದರ ಬಗ್ಗೆ ಜಾಗೃತಿ ವಹಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾಳೆ ಮತ್ತು ನಾಳಿದ್ದು ಹೆಚ್ಚಿನ ಮಳೆಯಾದರೆ ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತಿಳಿಸಿರುವುದಾಗಿ ಹೇಳಿದರು.

ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ
ಬೆಂಗಳೂರು ನೀರು ಸರಬರಾಜು ಮಂಡಳಿ ಅಡಿಯಲ್ಲಿ 8 ಸಾವಿರ ಬೋರ್ವೆಲ್ಗಳಿವೆ. 3 ಸಾವಿರಕ್ಕೂ ಹೆಚ್ಚು ಬೋರ್ವೆಲ್ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಅವೆಲ್ಲವನ್ನೂ ಸರಿಪಡಿಸಿ ಬೆಂಗಳೂರಿನ ನೀರು ಸರಬರಾಜು ವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸುತ್ತೇವೆ. ಬೋರ್ವೆಲ್ ಇಲ್ಲದ ಕಡೆಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಭೀಮೇಶ್ವರ ನದಿ ಪಾತ್ರದಲ್ಲಿ ಒತ್ತವರಿ ತೆರವು
ಬೆಂಗಳೂರಿನಲ್ಲಿ ರಾಜಾ ಕಾಲುವೆಗಳು ಒತ್ತುವರಿಯಾಗಿರುವುದರಿಂದ ನೀರು ರಸ್ತೆಗೆ ಹರಿದುಬರುತ್ತಿದೆ. ಇಷ್ಟು ವರ್ಷ ದೊಡ್ಡ ಮಳೆಯಾಗದ ಕಾರಣ ನಮ್ಮ ಅರಿವಿಗೆ ಬಂದಿರಲಿಲ್ಲ . ಇದೀಗ ಒತ್ತುವರಿ ತೆರವಿಗೆ ಕ್ರಮ ಜರುಗಿಸಲಾಗುವುದು. ಭೀಮೇಶ್ವರ ನದಿ ಪಾತ್ರವೂ ಕೂಡ ಒತ್ತುವರಿಯಾಗಿದ್ದು, ಬಹಳಷ್ಟು ಕಡೆ ಕೆರೆ, ಹಳ್ಳದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪ್ರವಾಸ ಸೃಷ್ಟಿಯಾಗುತಿದ್ದು, ಇವೆಲ್ಲವನ್ನೂ ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆರ್. ಅಶೋಕ್, ಭೈರತಿ ಬಸವರಾಜು, ಕೆ.ಸಿ. ನಾರಾಯಣಗೌಡ, ಶಾಸಕ ಡಾ. ಕೆ. ಅನ್ನದಾನಿ, ಜಿಲ್ಲಾಧಿಕಾರಿ ಅಶ್ವತಿ ಇತರರಿದ್ದರು.












Click it and Unblock the Notifications