ಕಾವೇರಿ ಅಗ್ನಿಕುಂಡದಲ್ಲಿ ಬೇಯುತ್ತಿರುವ ಪಾಂಡವಪುರದಲ್ಲಿ ಬುಧವಾರವೂ ಬಂದ್
ಮಂಡ್ಯ, ಸೆಪ್ಟೆಂಬರ್ 14 : ಕಳೆದ ಸೋಮವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪಾಂಡವಪುರ ಪಟ್ಟಣದಲ್ಲಿ ಸೆ.20ರ ಮಧರಾತ್ರಿವರೆಗೆ ಜಾರಿಗೊಳಿಸಿರುವ ನಿಷೇಧಾಜ್ಞೆಯಿಂದಾಗಿ ಪಾಂಡವಪುರ ಪಟ್ಟಣದಲ್ಲಿ ಬಂದ್ ವಾತಾವರಣ ಮುಂದುವರೆದಿದೆ.
ಬುಧವಾರ ಕೂಡ ಪಟ್ಟಣದಲ್ಲಿನ ಎಲ್ಲಾ ಅಂಗಡಿ-ಮುಂಗಟ್ಟುಗಳು, ಹೋಟೆಲ್ಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್ಗಳು ಸಂಪೂರ್ಣವಾಗಿ ಬಂದ್ ಆಗಿವೆ. ಜನ ಸಂಚಾರ, ಬಸ್ ಸಂಚಾರ, ಆಟೋಗಳು ಸಂಚಾರ ವಿರಳವಾಗಿದೆ.
ಅಂಗಡಿ-ಮುಂಗಟ್ಟುಗಳು, ಹೋಟೆಲ್ಗಳು ಬಾಗಿಲು ಮುಚ್ಚಿರುವುದರಿಂದ ಸಾರ್ವಜನಿಕರು ತಮಗೆ ಅಗತ್ಯವಿರುವ ಸರಕು, ಸಾಮಗ್ರಿಗಳನ್ನು ಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ. ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಿಸಿರುವುದರಿಂದ ಸಾರ್ವಜನಿಕರು ಪೆಟ್ರೋಲ್ಗಾಗಿ ಅಲೆದಾಡುತ್ತಿದ್ದಾರೆ.
ಪಟ್ಟಣದ ಎಲ್ಲಾ ವೃತ್ತಗಳು, ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವುದರಿಂದ ಭಯಗೊಂಡಿರುವ ನಾಗರಿಕರು ಮನೆಯಿಂದ ಹೊರಗೆ ಬರುತ್ತಿಲ್ಲ. ಪಟ್ಟಣದಲ್ಲಿ ನಿಷೇಧಾಜ್ಞೆ ಸೆ.20ರವರೆಗೆ ಇರುವುದರಿಂದ ಪಟ್ಟಣದಲ್ಲಿ ಗುರುವಾರ ನಡೆಯಬೇಕಿದ್ದ ಸಂತೆಯನ್ನು ತಡೆಹಿಡಿಯಲಾಗಿದೆ.
ಈ ನಡುವೆ, ಸೆ.15ರಂದು ರೈಲು ತಡೆ ಚಳವಳಿಗೆ ಕರೆ ನೀಡಲಾಗಿದ್ದು, ಪಟ್ಟಣದ ಮಂದಿ ಹೊರಗೆ ಬರುವುದು ಕಷ್ಟಸಾಧ್ಯವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜಾರಿಗೊಳಿಸಿರುವ ನಿಷೇಧಾಜ್ಞೆಯಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿರುವುದಂತು ಸತ್ಯ.